ಕರ್ಫ್ಯೂ: 1.5 ಲಕ್ಷ ಲೀ. ಹಾಲು ವ್ಯಾಪಾರ ಕುಸಿತ
Team Udayavani, Dec 23, 2019, 8:46 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಂಗಳೂರು: ನಗರದಲ್ಲಿ ಡಿ. 20 ಮತ್ತು 21ರಂದು ವಿಧಿಸಲಾಗಿದ್ದ ಕರ್ಫ್ಯೂನಿಂದಾಗಿ ಹಾಲಿನ ವಾಹನಗಳಿಗೆ ಪೊಲೀಸರಿಂದ ಅಡ್ಡಿಯಾದ ಕಾರಣ ಸುಮಾರು 1.5 ಲಕ್ಷ ಲೀಟರ್ ಹಾಲು ಹಾಗೂ 25,000 ಲೀಟರ್ ಮೊಸರು ಮಾರಾಟವಾಗದೆ ನಷ್ಟವಾಗಿದೆ ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಕ್ಕೆ ಕನಿಷ್ಠ 40,000 ಲೀಟರ್ ಹಾಲು ಹಾಗೂ 12,000 ಲೀಟರ್ ಮೊಸರನ್ನು ಮಂಗಳೂರಿನ ಡೈರಿಗಳಿಗೆ ತಲುಪಿಸಲು ಸಾಧ್ಯವಾಗದೆ ನಷ್ಟವಾಗಿದೆ. ಹಾಲು ವಿತರಣೆಯಾಗದಿದ್ದರೆ ಹಾಲು ಸಾಗಿಸುವ ಟ್ಯಾಂಕರ್ಗಳಲ್ಲಿರುವ ಹಾಲು ಕೆಡುತ್ತದೆ.
ಅಲ್ಲದೆ, ಅದು ಬಳಕೆಗೆ ನಿಷ್ಪ್ರಯೋಜಕವಾಗುವ ಹಿನ್ನೆಲೆಯಲ್ಲಿ ಗಟಾರಕ್ಕೆ ಚೆಲ್ಲಬೇಕಾಗುತ್ತದೆ. ಉಳಿಕೆ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲು ಲೀಟರ್ವೊಂದಕ್ಕೆ ಕನಿಷ್ಠ 10 ರೂ. ಹೆಚ್ಚುವರಿ ಖರ್ಚಾಗುತ್ತದೆ ಎಂದರು.