ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ : ಅನಿಲ ಸೋರಿಕೆ ಭೀತಿ
Team Udayavani, Aug 2, 2019, 1:17 PM IST
ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಎಂಜಿರ ಎಂಬಲ್ಲಿ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಒಂದು ಮಗುಚಿಬಿದ್ದಿದೆ.
ನೆಲ್ಯಾಡಿ ಪೇಟೆಯಿಂದ ಸುಮಾರು ಐದು ಕಿಲೋವೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಈ ಭಾಗದಲ್ಲಿ ಹೆದ್ದಾರಿ ಗಾತ್ರ ತೀರಾ ಕಿರಿದಾಗಿದೆ ಮಾತ್ರವಲ್ಲದೆ ತಿರುವುಗಳಿಂದ ಕೂಡಿದ ರಸ್ತೆ ಇದಾಗಿದೆ. ಇಷ್ಟೂ ಸಾಲದೆಂಬಂತೆ ರಸ್ತೆಯ ತುಂಬೆಲ್ಲಾ ಹೊಂಡಗಳಿರುವುದರಿಂದ ಚಾಲಕರಿಗೆ ವಾಹನ ಚಲಾಯಿಸುವುದೇ ಒಂದು ಸವಾಲಾಗಿದೆ.
ಈ ಟ್ಯಾಂಕರ್ ಮಂಗಳೂರಿನ ಎಂ.ಆರ್.ಪಿ.ಎಲ್.ನಿಂದ ಅಡುಗೆ ಅನಿಲವನ್ನು ತುಂಬಿಸಿಕೊಂಡು ಬೆಂಗಳೂರು ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ. ಟ್ಯಾಂಕರ್ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ಈ ಭಾಗದಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯೂ ಉಂಟಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.
ಈ ಪ್ರದೇಶವು ಅಪಾಯಕಾರಿ ತಿರುವು ಮಾತ್ರವಲ್ಲದೆ ಹೊಂಡಗುಂಡಿಗಳಿಂದ ಕೂಡಿದ ಹೆದ್ದಾರಿಯಾಗಿ ಮಾರ್ಪಟ್ಟಿದ್ದು ಮಳೆಗಾಲದಲ್ಲಿ ನೀರು ನಿಂತು ಹೊಂಡವನ್ನು ಅಂದಾಜಿಸಲು ವಿಫಲವಾಗಿ ಅನೇಕ ಅಫಘಾತಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ.
ಎಂಜಿರ ಎಂಬಲ್ಲಿರುವ ಮಲೆನಾಡು ಹೋಟೆಲ್ ಬಳಿ ಈ ಅಫಘಾತ ಶುಕ್ರವಾರ ನಡೆದಿದೆ. ಅಪಘಾತದ ಬಳಿಕ ಸ್ಥಳಕ್ಕೆ ಆಗಮಿಸಿದ ನೆಲ್ಯಾಡಿ ಹೊರ ಠಾಣೆ ಯ ಪೊಲೀಸರು ರಸ್ತೆ ಸಂಚಾರವನ್ನು ನಿಯಂತ್ರಿಸಿ ವಾಹನಗಳನ್ನು ಬದಲಿ ಮಾರ್ಗದಲ್ಲಿ ಕಳಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಪುತ್ತೂರು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ.