ಬಿರುವೆರ್ ಕುಡ್ಲ ವತಿಯಿಂದ ಸ್ವಚ್ಛತೆ
Team Udayavani, Jul 5, 2018, 10:14 AM IST
ಮೂಲ್ಕಿ: ಕೇವಲ ಸಂಘ ಸಂಸ್ಥೆಗಳು ಮಾತ್ರ ಸ್ವಚ್ಛತೆಯ ಕಾರ್ಯದಲ್ಲಿ ಶ್ರಮಿಸಿದರೆ ಸಾಲದು ಸಾರ್ವಜನಿಕರು ವಿಶ್ವಾಸದಿಂದ ತಮ್ಮ ಜವಾಬ್ದಾರಿಯನ್ನು ಚಲಾಯಿಸಿ ಮತ್ತೆ ತ್ಯಾಜ್ಯ ಉಂಟಾಗದಂತೆ ಸಹಕರಿಸಿದರೆ ಮಾತ್ರ ನಗರ ಸ್ವಚ್ಚದ ಕನಸು ನನಸಾಗಲು ಸಾಧ್ಯ ಎಂದು ಮೂಲ್ಕಿ ಬಿರುವೆರ್ ಕುಡ್ಲ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಹೇಳಿದರು. ಅವರು ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಆಶ್ರಯದಲ್ಲಿ ಮೂಲ್ಕಿ ಬಪ್ಪನಾಡು ದೇವಸ್ಥಾನದ ಪರಿಸರದಿಂದ ಕೇರಿಗಾಗಿ,ಬಸ್ ನಿಲ್ದಾಣದ ಮತ್ತು ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ವಠಾರದ ವರೆಗಿನ ಪ್ರದೇಶಗಳಲ್ಲಿ ನಡೆದ ಸ್ವಚ್ಛತೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರಂಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ತಮ್ಮ ಕಾರ್ಯಕ್ರಮಗಳ ಮೂಲಕ ಊರಿನ ಜನತೆಗೆ ಸಹಾಯವಾಗುವ ಮತ್ತು ಅಭಿವೃದ್ಧಿಯಾಗುವಲ್ಲಿ ದೇವರ ಅನುಗ್ರಹ ಇರಲಿ ಎಂದು ಪ್ರಾರ್ಥನೆಯನ್ನು ಮಾಡಿ ಕಾರ್ಯಕ್ರಮ ಆರಂಭವಾಯಿತು. ಘಟಕದ ಕಾರ್ಯಕರ್ತರು ನಿರಂತರವಾಗಿ ಮೂರು ಗಂಟೆಗಳ ಕಾಲ ಸ್ವಚ್ಛತೆಯ ಕಾರ್ಯಕ್ರಮವನ್ನು ನಡೆಸಿದರು.
ನ.ಪಂ. ಸದಸ್ಯ ಉಮೇಶ್ ಮಾನಂಪಾಡಿ, ಪದಾದಿಕಾರಿಗಳಾದ ಕಿರಣ್ ಬರ್ಕೆ, ಯಾದವ ಕೋಟ್ಯಾನ್, ಅಶೋಕ್ ಸುವರ್ಣ, ರಕ್ಷಿತ್ ಪೂಜಾರಿ, ಚರಣ್ ಬಂಗೇರ, ಮಾಧವ ಕಿಲ್ಪಾಡಿ, ಜಗದೀಶ್ ಕಕ್ವ, ಅನಿಲ್ ಹೆಜಮಾಡಿ, ರಮಾನಾಥ್ ಸುವರ್ಣ, ಸತೀಶ್ ಮಾನಂಪಾಡಿ ಮತ್ತಿತರರು ಇದ್ದರು.