ಚಾಮೆತಡ್ಕ : ಮನೆಗಳಿಗೆ ನುಗ್ಗಿದ ನೆರೆ ನೀರು
Team Udayavani, Aug 15, 2018, 10:58 AM IST
ಆಲಂಕಾರು: ಮಳೆ ಅಬ್ಬರಕ್ಕೆ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದೆ. ಆಲಂಕಾರು ಹಾಗೂ ಕುಂತೂರು ಗ್ರಾಮದ ಹಲವು ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಹಲವು ತೋಟ ಗಳು ಜಲಾವೃತವಾಗಿವೆ. ಪೆರಾಬೆ ಗ್ರಾಮದ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದು, ಸಂತ್ರಸ್ತರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಆಲಂಕಾರು ಗ್ರಾಮದ ಚಾಮೆತ್ತಡ್ಕ ನಿವಾಸಿ ಇಸ್ಮಾಯಿಲ್ ಮನೆಗೆ ನೆರೆ ನೀರು ನುಗ್ಗಿದೆ. ಹನೀಫ್, ಇಸುಬು, ಬುಡೋನ್ ಸಾಹೇಬ್ ಹಾಗೂ ಇಬ್ರಾಹಿಂ ಅವರ ಮನೆಗಳೂ ಜಲಾವೃತವಾಗಿವೆ. ಇವರಿಗೆ ಸದ್ಯ ಮಹಮ್ಮದ್ ಪಿ.ಆರ್. ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದಾರೆ. ಮನೆ ಸಾಮಾನು, ಜಾನುವಾರುಗಳಿಗೂ ಜಾಗ ಕೊಟ್ಟಿದ್ದಾರೆ. ಇಸುಬು ಅವರ ಎಂಡೋ ಪೀಡಿತ ಮಗುವನ್ನು ಸ್ಥಳೀಯರು ಸುರಕ್ಷಿತವಾಗಿ ಕರೆ ತಂದಿದ್ದಾರೆ.
ನೀರಿನ ಮಟ್ಟ ಏರುತ್ತಿದ್ದು, ಮನೆಗಳೂ ಅಪಾಯದ ಅಂಚಿನಲ್ಲಿವೆ. ಈ ಮನೆಗಳನ್ನು ಸಂಪರ್ಕಿಸುವ ರಸ್ತೆಗಳೂ ಜಲಾವೃತವಾಗಿವೆ. ಆಲಂಕಾರು ಗ್ರಾಮದ ಕಮ್ತೀಲು ನಿವಾಸಿ ಹುಕ್ರಪ್ಪ ಅವರ ಮನೆ ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದೆ. ಕೋಡಾಡಿ ನಿವಾಸಿ ಚೆನ್ನಯ ಪೂಜಾರಿ ಅವರ ಒಂದು ಎಕರೆ ಭತ್ತದ ಗದ್ದೆ ಮುಳುಗಿದೆ.
1974ರಲ್ಲಿ ಚಾಮೆತ್ತಡ್ಕಕ್ಕೆ ನೆರೆ ಬಂದಿತ್ತು. 44 ವರ್ಷ ಗಳ ಬಳಿಕ ಮತ್ತೆ ನೆರೆ ನೀರು ಆವರಿಸಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಆಲಂಕಾರು ಗ್ರಾ.ಪಂ. ಅಧ್ಯಕ್ಷೆ ಸುನಂದಾ ಬಾರ್ಕುಲಿ, ಉಪಾಧ್ಯಕ್ಷ ಸುಧಾಕರ ಪೂಜಾರಿ ಕಲ್ಲೇರಿ, ಪೆರಾಬೆ ಗ್ರಾ.ಪಂ. ಕಾರ್ಯದರ್ಶಿ ಲಲಿತಾ ಜಿ.ಡಿ. ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.