ಶಾಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆ: ಹಾಜಬ್ಬ
ವಿ.ವಿ.ಕಾಲೇಜಿನಲ್ಲಿ ಸಾಧಕರೊಂದಿಗೆ ಸಂವಾದ
Team Udayavani, Mar 11, 2020, 11:23 PM IST
ಮಹಾನಗರ: ಸರಕಾರಿ ಶಾಲೆಯ ನಿರ್ಮಾಣದ ಸಂದರ್ಭ ಹಾಗೂ ಅನಂತರ ನಿತ್ಯ ಸಹಕಾರ ಹಾಗೂ ಮಾರ್ಗ ದರ್ಶನ ನೀಡಿದ ಸರ್ವ ರಿಗೂ ನಾನು ಆಭಾರಿ ಯಾಗಿದ್ದೇನೆ. ಮುಂದೆಯೂ ಶಾಲೆಯ ಅಭಿವೃದ್ಧಿಗೆ ನನ್ನಿಂದಾದಷ್ಟು ಪ್ರಾಮಾ ಣಿಕ ಸೇವೆ ಮಾಡಲು ತಾನು ಬದ್ಧ ಎಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನ ರಾದ ಹರೇಕಳ ಹಾಜಬ್ಬ ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ನೇತೃತ್ವದಲ್ಲಿ ಮಂಗಳೂರು ವಿ.ವಿ ಕಾಲೇಜಿನ ಸಹಕಾರದೊಂದಿಗೆ ಬುಧವಾರ ವಿ.ವಿ. ಕಾಲೇಜಿನಲ್ಲಿ ನಡೆದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಣ ಇಲ್ಲದ ನನ್ನಲ್ಲಿ ಸರಕಾರಿ ಶಾಲೆಯೊಂದನ್ನು ಕಟ್ಟಲು ನನಗೆ ಬೇರೆ ಬೇರೆ ಜನರು ಬೇರೆ ಬೇರೆ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಅದರಿಂದಾಗಿ ಶಾಲೆ ಇಂದು ದೊಡ್ಡ ಮಟ್ಟದ ಗೌರವ ಹಿರಿಮೆ ದಾಖಲಿಸಿತು. ಖಾಸಗಿ ಹಾಗೂ ಸಿಟಿ ಬಸ್ ಮಾಲಕರು ನನಗೆ ಅಪೂರ್ವ ಸ್ಪಂದನೆ ನೀಡಿದ್ದಾರೆ. ಅವರ ಬೆಂಬಲವನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದರು.
ಅವರ ಶ್ರಮ ಎಲ್ಲರಿಗೂ ಮಾದರಿ
ಗುರುವಪ್ಪ ಎನ್.ಟಿ. ಬಾಳೆಪುಣಿ ಅವರು ಸಾಧಕರ ಕುರಿತು ಉಪನ್ಯಾಸ ಮಾಡಿದರು. ಹಾಜಬ್ಬ ಅವರ ಸರಳತೆ, ಮುಗ್ಧತೆ, ಪ್ರಾಮಾಣಿಕತೆ ಹಾಗೂ ಪ್ರತಿಫಲ ಅಪೇಕ್ಷೆ ಇಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆಯಿಂದಾಗಿ ಅವರಿಗೆ ಇದೀಗ ಪದ್ಮಶ್ರೀ ಪುರಸ್ಕಾರ ಪ್ರಾಪ್ತವಾಗಿದೆ. ಹಲವು ಗೌರವ ಪುರಸ್ಕಾರ ಲಭಿಸಿದ್ದರೂ, ಮೊತ್ತ ಸಹಿತ ಪ್ರಶಸ್ತಿ ಬಂದಿದ್ದರೂ ಹಾಜಬ್ಬ ಅವರು ತನ್ನ ಹಿತಕ್ಕಾಗಿ ಒಂದು ರೂಪಾಯಿಯನ್ನು ಬಳಸದೆ ಎಲ್ಲವನ್ನೂ ಶಾಲೆಗಾಗಿ ಮುಡಿಪಾಗಿಟ್ಟಿದ್ದಾರೆ. ಶಾಲೆ ನಿರ್ಮಾಣದಲ್ಲಿ ಅವರ ಶ್ರಮ ಎಲ್ಲರಿಗೂ ಮಾದರಿ ಎಂದರು.
ವಿ.ವಿ. ಕಾಲೇಜಿನ ಪ್ರಾಂಶುಪಾಲ ಡಾ|ಉದಯ್ಕುಮಾರ್ ಎಂ.ಎ. ಅಧ್ಯಕ್ಷತೆ ವಹಿಸಿ ದ್ದರು. ಹರೇಕಳ ಹಾಜಬ್ಬ ಅವರು ವಿದ್ಯಾರ್ಥಿ ಗಳು- ಸಾರ್ವ ಜ ನಿಕರ ಜತೆಗೆ ಸಂವಾದದಲ್ಲಿ ಪಾಲ್ಗೊಂಡರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದ.ಕ. ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.
ಬಸ್ ಮಾಲಕರ ಸಂಘದಿಂದ 1 ಲಕ್ಷ ರೂ.
ದ.ಕ. ಜಿಲ್ಲಾ ಬಸ್ ಮಾಲಕರ ಸಂಘ ಹಾಗೂ ಸಿಟಿ ಬಸ್ ಮಾಲಕರ ಸಂಘದ ವತಿಯಿಂದ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಲಾಯಿತು. ಇದೇ ವೇಳೆ ಎರಡೂ ಸಂಘಗಳ ವತಿಯಿಂದ 1 ಲಕ್ಷ ರೂ.ಗಳ ಚೆಕ್ನ್ನು ಹಸ್ತಾಂತರಿಸಲಾಯಿತು. ಈ ಮೊತ್ತವನ್ನು ಶಾಲೆಯ ಅಭಿವೃದ್ಧಿಗಾಗಿ ವಿನಿಯೋಗಿಸುವ ಬಗ್ಗೆ ಹರೇಕಳ ಹಾಜಬ್ಬ ಅವರು ತಿಳಿಸಿದರು. ಸಂಘದ ಪ್ರಮುಖರಾದ ದಿಲ್ರಾಜ್ ಆಳ್ವ, ಜಯರಾಮ ಶೇಖ ಅವರು ಮಾತನಾಡಿದರು. ಪದಾಧಿಕಾರಿಗಳು ಉಪಸ್ಥಿತರಿದ್ದರು.