ಹುಟ್ಟೂರು ಮಿತ್ತಕೆರೆಯ ಬಂಧ
Team Udayavani, Oct 12, 2019, 6:00 AM IST
ಡಾ| ರಾಜ್ ಕುಮಾರ್ ಅವರ ಜತೆಗೆ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡಿದ್ದ ಕದ್ರಿ ಗೋಪಾಲನಾಥ್.
ಬಂಟ್ವಾಳ: ಕದ್ರಿ ಗೋಪಾಲನಾಥ್ ಅವರ ಹುಟ್ಟೂರು ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಮಿತ್ತಕೆರೆ. ಹಾಗಾಗಿ ಬಂಟ್ವಾಳದ ಜತೆ ಅವರಿಗೆ ವಿಶೇಷ ನಂಟು.
ಪ್ರಸ್ತುತ ಅವರ ಸಹೋದರರಿಬ್ಬರ ಕುಟುಂಬ ಮಿತ್ತಕೆರೆಯಲ್ಲಿ ನೆಲೆಸಿದ್ದು, ಕುಟುಂಬದ ದೈವದ ಚಾವಡಿಯೂ ಅಲ್ಲಿದೆ. ಅವರು ವರ್ಷಕ್ಕೆ ಹಲವು ಬಾರಿ ಸಜೀಪಕ್ಕೆ ಭೇಟಿ ನೀಡಿ ಕುಟುಂಬದ ಜತೆ ಬೆರೆಯುತ್ತಿದ್ದರು. ಸ್ವಲ್ಪ ಸಮಯದ ಹಿಂದೆ ಗೋಪಾಲನಾಥ್ ನೇತೃತ್ವದಲ್ಲೇ ದೈವ ದೇವರ ಚಾವಡಿಯ ಜೀರ್ಣೋದ್ಧಾರ ನಡೆದಿತ್ತು. ಮೇ ತಿಂಗಳಲ್ಲಿ ಬ್ರಹ್ಮಕಲಶದ ಕಾರ್ಯದಲ್ಲಿ ಪಾಲ್ಗೊಂಡಿದ್ದೇ ಕೊನೆಯ ಭೇಟಿ.ಗೋಪಾಲನಾಥರ ತಂದೆ-ತಾಯಿಗೆ ನಾಲ್ವರು ಪುತ್ರರು ಮತ್ತು ನಾಲ್ವರು ಪುತ್ರಿಯರು. ಪುತ್ರರಲ್ಲಿ ಗೋಪಾಲ ನಾಥರೇ ಹಿರಿಯರು. ಗೋಪಾಲನಾಥ್ ಮತ್ತು ರಮೇಶನಾಥ್ ಮಂಗಳೂರಿನಲ್ಲಿ, ಚಂದ್ರನಾಥ್ ಮತ್ತು ಗಣೇಶನಾಥ್ ಸಜೀಪದಲ್ಲಿ ನೆಲೆಸಿದ್ದರು.
ಗೋಪಾಲನಾಥ್ ತನ್ನ ಪ್ರಾಥಮಿಕ ಶಿಕ್ಷಣವನ್ನು ನಗ್ರಿ ಶಾಲೆಯಲ್ಲಿ ಪಡೆದಿ ದ್ದರು. ತಂದೆ ನಾಗಸ್ವರ ವಾದಕರಾಗಿದ್ದರು. ಮನೆಯ ಸಂಗೀತ ವಾತಾವರಣ ಮತ್ತು ಸಜೀಪಮೂಡ ಪಂಚಾಯತ್ ಆವರಣದಲ್ಲಿ ರೇಡಿಯೋ ಮೂಲಕ ಕೇಳುತ್ತಿದ್ದ ಸಂಗೀತ ತನ್ನನ್ನು ಈ ಕ್ಷೇತ್ರಕ್ಕೆ ಎಳೆದು ತಂದಿತು ಎಂದು ಸ್ವತಃ ಗೋಪಾಲನಾಥ್ ಅವರೇ ಹೇಳಿದ್ದರು.
ಸಜೀಪಮೂಡದಲ್ಲಿರುವ ನಮ್ಮ ಕುಟುಂಬದ ಚಾವಡಿಯಲ್ಲಿ ದೈವ ದೇವರ ಕಾರ್ಯಕ್ರಮಗಳು ದೊಡ್ಡಪ್ಪನ ಉಪಸ್ಥಿತಿಯಲ್ಲೇ ನಡೆಯುತ್ತಿದ್ದವು. ವರ್ಷಕ್ಕೆ ಹಲವು ಬಾರಿ ಭೇಟಿ ನೀಡುತ್ತಿದ್ದರು ಎಂದು ಸಹೋದರ ಚಂದ್ರನಾಥ್ರ ಪುತ್ರ ಪ್ರವೀಣ್ “ಉದಯವಾಣಿ’ಗೆ ತಿಳಿಸಿದ್ದಾರೆ.