ಕಲ್ಲಡ್ಕ ಶಾಲೆ: ವಾರ್ಷಿಕ ಭಜನೆ
Team Udayavani, Apr 9, 2018, 12:54 PM IST
ಬಂಟ್ವಾಳ : ನಾವೆಲ್ಲ ದೇಶ ಪ್ರೇಮವನ್ನಿಟ್ಟುಕೊಂಡು ದೇಶಕ್ಕಾಗಿ ದುಡಿಯಬೇಕು. ಇದರಿಂದ ವೈಯಕ್ತಿಕವಾಗಿ ನಮಗೂ ನಮ್ಮ ಕುಟುಂಬಕ್ಕೂ ಜತೆಯಾಗಿ ಸಮಾಜಕ್ಕೂ ಒಳಿತಾಗುವುದು ಎಂದು ಸಚಿನ್ ಜೈನ್ ಹಳೆಯೂರು ಹೇಳಿದರು.
ಅವರು ಎ. 6ರಂದು ಕಲ್ಲಡ್ಕ ಶ್ರೀರಾಮ ಹಿ.ಪ್ರಾ. ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆದ ವಾರ್ಷಿಕ ಭಜನೆ ಮತ್ತು ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯು ಮಗುವಿಗೆ ದೇಗುಲವಿದ್ದಂತೆ, ತಾಯಿ ಇದ್ದಂತೆ. ಇಲ್ಲಿ ದೇಶಪ್ರೇಮದ ಮೊದಲ ನುಡಿಯ ಅಭ್ಯಾಸ ಆಗಬೇಕು ಎಂದು ಕರೆ ನೀಡಿದರು.
ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿಗಳಾದ ಜಯರಾಮ ರೈ, ಸರಸ್ವತಿ, ಮುಖ್ಯ ಗುರು ರವಿರಾಜ್ ಕಣಂತೂರು ಶುಭ ಹಾರೈಸಿದರು. ಭಗವದ್ಗೀತೆಯಲ್ಲಿ ಅತ್ಯಧಿಕ ಶ್ಲೋಕ ಕಂಠಸ್ಥ ಹೇಳಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಅಮ್ಮನವರಿಂದ ಕೈ ತುತ್ತು ತಿನಿಸುವ ಭಾವನಾತ್ಮಕ ಕಾರ್ಯಕ್ರಮವು ವಿಶಿಷ್ಟವಾಗಿ ನಡೆಯಿತು. ವಿದ್ಯಾರ್ಥಿ ಗಗನ್ ಪ್ರೇರಣ ಗೀತೆ ಹಾಡಿದರು. ವಿದ್ಯಾರ್ಥಿಗಳಾದ ದಿಶಾ ಪಿ. ಸ್ವಾಗತಿಸಿ, ಸ್ವಸ್ತಿಕ ವಂದಿಸಿದರು. ಧನ್ಯಾ ಕಾರ್ಯಕ್ರಮ ನಿರೂಪಿಸಿದರು.