ಉಪ್ಪಿನಂಗಡಿ: ಟ್ರಾಫಿಕ್ ಜಾಮ್ ತಪ್ಪಿಸಲು ಫಲಕ ಅಳವಡಿಕೆ
Team Udayavani, Aug 4, 2018, 11:47 AM IST
ಉಪ್ಪಿನಂಗಡಿ: ಪಟ್ಟಣದಲ್ಲಿ ಜನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಟ್ರಾಫಿಕ್ ಜಾಮ್ ತಪ್ಪಿಸಲು ಪಂಚಾಯತ್ ಸಿಬಂದಿ, ವಿಶೇಷ ಫಲಕಗಳನ್ನು ಅಳವಡಿಸುತ್ತಿದ್ದಾರೆ. ಇಲ್ಲಿನ ಬಸ್ ನಿಲ್ದಾಣದ ಪ್ರವೇಶ ದ್ವಾರದಿಂದ ಬ್ಯಾಂಕ್ ರಸ್ತೆಯ ಗಾಂಧಿ ಪಾರ್ಕ್ ವರೆಗೆ ವಾಹನಗಳ ದಟ್ಟನೆಯನ್ನು ಸರಿಪಡಿಸಲು ಈ ಕ್ರಮ ಜಾರಿಗೊಳಿಸಬೇಕಾದ ಅನಿವಾರ್ಯ ಒದಗಿದೆ ಎಂದು ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.
ಪೇಟೆ ಕಿರಿದಾಗಿದ್ದು, ಕೆಲ ವರ್ತಕರು ಚರಂಡಿಯನ್ನು ಅತಿಕ್ರಮಿಸಿ ಪಾದಚಾರಿಗಳು ನಡೆದಾಡಲೂ ಸಮಸ್ಯೆ ಉಂಟಾಗಿದೆ. ಪಂಚಾಯತಿಗೆ ವ್ಯಾಪಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಫಲಕಗಳನ್ನು ಅಳವಡಿಸಲು ಕ್ರಮ ಜರಗಿಸಲಾಗಿದೆ. ಯಾವುದೇ ವರ್ತಕರಿಗೆ ತೊಂದರೆ ಉಂಟುಮಾಡುವ ಅಥವಾ ಸಮಸ್ಯೆ ಸೃಷ್ಟಿಸುವ ಇರಾದೆ ಪಂಚಾಯತ್ ಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಾರದ ಏಳು ದಿನಗಳಲ್ಲಿ ಎಡ ಹಾಗೂ ಬಲ ಬದಿಗಳಲ್ಲಿ ಅವಶ್ಯಕವಾದ ವಾಹನಗಳ ನಿಲ್ಲಿಸುವ ಅವಕಾಶ ಕಲ್ಪಿಸಲಿದ್ದು, ಅಡ್ಡಾದಿಡ್ಡಿ ನಿಲುಗಡೆಗೆ ಕಡಿವಾಣ ಹಾಕಲಿದೆ ಎಂದರು.
ಫಲಕ ಅಳವಡಿಸುವ ಕಾರ್ಯ ಮುಗಿದ ಏಳು ದಿನಗಳಲ್ಲಿ ಸಾಧಕ- ಬಾಧಕಗಳನ್ನು ಅರಿತು, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ದಂಡ ವಿಧಿಸಲೂ ಹಿಂದೇಟು ಹಾಕುವುದಿಲ್ಲ. ಇದಕ್ಕೆ ವಾಹನ ಚಾಲಕರು ಹಾಗೂ ಮಾಲಕರು ಸ್ಪಂದಿಸುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಅತೀ ಹೆಚ್ಚು ಅಂಗಡಿ- ಮುಂಗಟ್ಟುಗಳಿದ್ದು, ಏಕೈಕ ರಸ್ತೆ ಇದಾಗಿದೆ. ಏಕಮುಖ ಸಂಚಾರ ವ್ಯವಸ್ಥೆ ತಪ್ಪಿಸಲು ಫಲಕ ಅಳವಡಿಕೆ ಹಾಗೂ ಕಾನೂನು ಅನುಷ್ಠಾನಗೊಳಿಸುವ ಅನಿವಾರ್ಯತೆ ಮೂಡಿದೆ ಎಂದೂ ಅಧ್ಯಕ್ಷರು ತಿಳಿಸಿದ್ದಾರೆ.