ಖಾತ್ರಿ ಯೋಜನೆಯಲ್ಲಿ ಅಂಗನವಾಡಿಗಳಿಗೆ ನೀರಿನ ಟ್ಯಾಂಕ್ ನಿರ್ಮಾಣ
Team Udayavani, Jun 16, 2018, 5:04 PM IST
ಪುತ್ತೂರು: ಅಂತರ್ಜಲ ಕುಸಿತದ ವಿಷಯದಲ್ಲಿ ಜಿಲ್ಲೆಯ ಏಕೈಕ ಅಪಾಯಕಾರಿ ತಾಲೂಕು ಪುತ್ತೂರು ಎಂದು ರಾಜ್ಯ ಸರಕಾರ ಘೋಷಿಸಿದೆ. ಈ ನಿಟ್ಟಿನಲ್ಲಿ ತಾಲೂಕು ಪಂಚಾಯತ್ನ ಉದ್ಯೋಗ ಖಾತ್ರಿ ಯೋಜನೆಯಡಿ ಅಂಗನವಾಡಿಗಳನ್ನು ಗುರಿಯಾಗಿಸಿಕೊಂಡು, ಯೋಜನೆ ರೂಪಿಸಲಾಗುತ್ತಿದೆ.
ಹಿಂದಿನ ವರ್ಷದ ಒಂದು ಲೆಕ್ಕಾಚಾರದಂತೆ ಪುತ್ತೂರು ತಾಲೂಕಿನ ಒಟ್ಟು ನೀರಿನ ಮೂಲಗಳಲ್ಲಿ ಶೇ. 98ರಷ್ಟು ಬೋರ್ ವೆಲ್ಗಳನ್ನೇ ಬಳಸಲಾಗುತ್ತಿದೆ. ಉಳಿದ ಶೇ. 2ರಷ್ಟು ಮಾತ್ರ ಬಾವಿ ಮತ್ತು ಇತರೆ ಮೂಲಗಳನ್ನು ಆಶ್ರಯಿಸಲಾಗಿದೆ. ಬೋರ್ ವೆಲ್ಗಳ ಬಳಕೆ ಕುಡಿಯುವ ನೀರು ಹಾಗೂ ಕೃಷಿಗಾಗಿ ಮಾತ್ರ ಬಳಕೆ ಆಗುತ್ತಿದೆ. ಸುರಿಯುವ ಮಳೆಯನ್ನು ಸ್ವಲ್ಪ ಮಟ್ಟಿಗೆ ಹಿಡಿದಿಟ್ಟುಕೊಂಡರೆ, ಬೋರ್ವೆಲ್ ಬಳಕೆ ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ಯೋಚನೆ.
ಗೋಳಿತ್ತೂಟ್ಟು ಮಾದರಿ
ಹಿಂದಿನ ವರ್ಷ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗೋಳಿತ್ತೂಟ್ಟು ಹಿ.ಪ್ರಾ. ಶಾಲೆಯಲ್ಲಿ 3 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಿ, ಮಳೆನೀರನ್ನು ಹಿಡಿದಿಟ್ಟುಕೊಳ್ಳಲಾಗಿತ್ತು. ಈ ಟ್ಯಾಂಕನ್ನು ಇನ್ನಷ್ಟು ವಿಸ್ತರಿಸಿ, ಗಾಳಿ- ಬೆಳಕು ಬೀಳದಂತೆ ಬಂದ್ ಮಾಡಬೇಕು.
ಒಂದೂವರೆ ತಿಂಗಳಿಗೆ ಈ ನೀರನ್ನು ಬಳಕೆ ಮಾಡಿಕೊಳ್ಳಬೇಕು ಎನ್ನುವುದು ಉದ್ದೇಶ. ಬೇಸಿಗೆ ತೀವ್ರವಾಗಿ ಕಾಡುವ ಎಪ್ರಿಲ್, ಮೇ ತಿಂಗಳಿಗೆ ಈ ನೀರನ್ನು ಬಳಕೆ ಮಾಡ ಬೇಕು. ಆಗ ಬೋರ್ವೆಲ್ನ ಬಳಕೆ ಕಡಿಮೆ ಆಗುತ್ತದೆ. ಅಂತರ್ಜಲ ಮಟ್ಟ ಸುಧಾರಣೆ ಆಗುತ್ತದೆ. ಇದನ್ನೇ ಈ ವರ್ಷ ಅಂಗನವಾಡಿಗಳಿಗೆ ವಿಸ್ತರಿಸಲು ಚಿಂತನೆ ನಡೆಸಲಾಗುತ್ತಿದೆ.
2 ಸಾವಿರ ಲೀಟರ್ ಟ್ಯಾಂಕ್
ಭವಿಷ್ಯದ ಚಿಂತನೆ ಇಟ್ಟುಕೊಂಡೇ ಅಂಗನವಾಡಿಗಳಲ್ಲಿ ಟ್ಯಾಂಕ್ ರಚನೆ ಮಾಡಲಾಗುತ್ತದೆ. ಇದುವರೆಗೆ ಕಲ್ಲಿನಲ್ಲಿ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿತ್ತು. ಈ ವರ್ಷ ಕಾಂಕ್ರೀಟ್ನಲ್ಲಿ ಟ್ಯಾಂಕ್ ನಿರ್ಮಾ ಣಗೊಳ್ಳಲಿದೆ. ಸದ್ಯ 2 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿ, ನೀರು ಶೇಖರಿಸಲಾಗುವುದು. ಅಗತ್ಯ ಕಂಡುಬಂದರೆ ಟ್ಯಾಂಕ್ ವಿಸ್ತರಣೆ ಮಾಡಬಹುದು. ಅಂಗನ ವಾಡಿಯ ಮಾಡಿಗೆ ಪೈಪ್ ಅಳವಡಿಸಿ, ನೀರನ್ನು ಸೋಸಿ ಟ್ಯಾಂಕ್ ಗೆ ತುಂಬಿಸಲಾಗುವುದು. ಮಳೆಗಾಲದಲ್ಲಿ ಇದನ್ನು ಮಳೆಕೊಯ್ಲು ಮಾಡಷಬಹುದು. ಮಳೆ ಕಡಿಮೆಯಾದೊಡನೆ ಶುಚಿತ್ವ, ಬಟ್ಟಲು ತೊಳೆಯಲು ಬಳಸಿಕೊ ಳ್ಳಬಹುದು. ಒಟ್ಟಿನಲ್ಲಿ ಹರಿದು ಪೋಲಾಗುವ ಮಳೆನೀರನ್ನು ಸಮರ್ಥವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ. ಇದು ಇನ್ನಷ್ಟು ಮನೆಗಳಿಗೆ ಸ್ಫೂರ್ತಿ ಆಗಬೇಕು ಎನ್ನುವುದು ಮುಖ್ಯ ಉದ್ದೇಶ. ಉದ್ಯೋಗ ಖಾತ್ರಿ ಯೋಜನೆಯಡಿ ಮಳೆ ನೀರು ಇಂಗಿಸಲು ಹಾಗೂ ನೀರು ಶೇಖರಣೆ ಮಾಡಲು ಸಾರ್ವಜನಿಕ ಕಟ್ಟಡಗಳನ್ನು ಬಳಸಿಕೊಳ್ಳಬಹುದು. ಆಸ್ಪತ್ರೆ, ಶಾಲೆ, ಕಚೇರಿ ಕಟ್ಟಡ, ಸಾರ್ವಜನಿಕ ಕಟ್ಟಡಗಳಲ್ಲಿ ಯೋಜನೆಯನ್ನು ಅಳವಡಿಸಿಕೊಳ್ಳಬಹುದು. ಹಿರೇಬಂಡಾಡಿ ಗ್ರಾ. ಪಂ.ನಲ್ಲಿ ಹಿಂದಿನ ವರ್ಷ ಟ್ಯಾಂಕ್ ನಿರ್ಮಿಸಲಾಗಿದೆ.
ವಿಸ್ತರಿಸುವ ಯೋಜನೆ
ಉದ್ಯೋಗ ಖಾತ್ರಿಯಡಿ ಗೋಳಿತ್ತೂಟ್ಟು ಶಾಲೆ ಹಾಗೂ ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಟ್ಯಾಂಕ್ ನಿರ್ಮಿಸಿ, ಮಳೆನೀರನ್ನು ಶೇಖರಿಸಿಡುವ ಕೆಲಸ ಮಾಡಲಾಗಿದೆ. ಈ ಬಾರಿ ಇದನ್ನು ಅಂಗನವಾಡಿಗಳಿಗೆ ವಿಸ್ತರಿಸುವ ಯೋಜನೆ ಇದೆ. ಬೋರ್ ವೆಲ್ಗಳ ಬಳಕೆ ಕಡಿಮೆ ಆಗಬೇಕು ಎನ್ನುವುದು ಉದ್ದೇಶ. ಅಂಗನವಾಡಿಗಳ ಈ ಯೋಜನೆಗೆ ತಲಾ 1.5 ಲಕ್ಷ ರೂ. ಅಗತ್ಯವಿದೆ.
- ನವೀನ್ ಭಂಡಾರಿ
ಸಹಾಯಕ ನಿರ್ದೇಶಕ, ಉದ್ಯೋಗ ಖಾತ್ರಿ ಯೋಜನೆ,
ಪುತ್ತೂರು ತಾ.ಪಂ.
ದೊಡ್ಡ ಟ್ಯಾಂಕ್ ಬೇಕು
ಮಳೆಗಾಲದಲ್ಲಿ ಟೆರೇಸ್ನಲ್ಲಿ ತುಂಬಿದ್ದ ಮಳೆನೀರನ್ನು ಟ್ಯಾಂಕ್ಗೆ ಬಿಡುತ್ತೇವೆ. ಬಟ್ಟಲು ತೊಳೆಯಲು, ಶುಚಿತ್ವ ಕಾರ್ಯ, ಮಳೆಕೊಯ್ಲಿಗೆ ಇದನ್ನು ಬಳಸಲಾಗುತ್ತದೆ. ಬೋರ್ ವೆಲ್ನ ಅಗತ್ಯವೇ ಇಲ್ಲ. ಬೇಸಿಗೆಗೆ ಬೇಕಾಗುವಷ್ಟು ಮಳೆನೀರನ್ನು ತುಂಬಿಸಿಡುವ ಸಾಮರ್ಥ್ಯ ಟ್ಯಾಂಕ್ಗೆ ಇಲ್ಲ. ಇದಕ್ಕೆ ಭಾರೀ ಗಾತ್ರದ ಟ್ಯಾಂಕ್ ಬೇಕು.
-ಶೀನಪ್ಪ ನಾಯ್ಕ,
ಮುಖ್ಯಗುರು, ಗೋಳಿತ್ತೂಟ್ಟು ಹಿ.ಪ್ರಾ. ಶಾಲೆ
ಗಣೇಶ್ ಎನ್. ಕಲ್ಲರ್ಪೆ