ರಮ್ಜಾನ್ ವ್ರತಾಚರಣೆ ಆರಂಭ: ಪಪ್ಪಾಯಿ ದುಬಾರಿ
Team Udayavani, May 19, 2018, 10:44 AM IST
ಮಹಾನಗರ: ಹಬ್ಬ ಹರಿದಿನಗಳು ಬಂದಾಗ ತರಕಾರಿ/ ಹಣ್ಣು ಹಂಪಲುಗಳ ಬೆಲೆಗಳಲ್ಲಿ ಏರು ಪೇರು ಆಗುವುದು ಸ್ವಾಭಾವಿಕ. ಇದೀಗ ಮುಸ್ಲಿಮರ ಪವಿತ್ರ ಹಬ್ಬ ರಮ್ಜಾನ್ ಅಂಗವಾಗಿ ಮೂವತ್ತು ದಿನಗಳ ವ್ರತಾಚರಣೆ ಆರಂಭವಾಗಿದೆ.
ಉಪವಾಸ ವ್ರತಾಚರಣೆಯ ಸಂದರ್ಭದಲ್ಲಿ ದೈಹಿಕವಾಗಿ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸುವ ಸಲುವಾಗಿ ಹಣ್ಣು ಹಂಪಲು ಅಥವಾ ತರಕಾರಿಗಳನ್ನು ಎಂದಿಗಿಂತ ಒಂದಿಷ್ಟು ಜಾಸ್ತಿ ಬಳಕೆ ಮಾಡುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಮಾರುಕಟ್ಟೆಯಲ್ಲಿ ಆಯ್ದ ಹಣ್ಣು ಮತ್ತು ತರಕಾರಿಗಳ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿವೆ.
ಹಣ್ಣು ಹಂಪಲುಗಳ ಪೈಕಿ ವಿಶೇಷವಾಗಿ ಪಪ್ಪಾಯಿ ಬೆಲೆ ಹೆಚ್ಚಳವಾಗಿದೆ. ರಮ್ಜಾನ್ ತಿಂಗಳು ಆರಂಭವಾಗುವ ಮೊದಲು ಪಪ್ಪಾಯಿ ಬೆಲೆ 40 ರೂ. ಇದ್ದು, ಈಗ ಅದು 60 ರೂಪಾಯಿಗೇರಿದೆ. ಇತರ ಹಣ್ಣುಗಳ ಬೆಲೆಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ.
ರಮ್ಜಾನ್ ತಿಂಗಳಲ್ಲಿ ಪಪಾಯಿಯನ್ನು ಹೆಚ್ಚಾಗಿ ಜ್ಯೂಸ್ ತಯಾರಿಸಲು ಉಪಯೋಗಿಸುತ್ತಾರೆ. ಕೆಲವರು ಚಿಪ್ಪಡ್, ಕಲ್ಲಂಗಡಿ ಅಥವಾ ಮಲ್ಲಿಕಾ ಮಾವಿನ ಹಣ್ಣಿನ ಜ್ಯೂಸ್ ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ದಾಳಿಂಬೆ, ಸೇಬು ಹಣ್ಣು ಮತ್ತು ಬಾಳೆ ಹಣ್ಣಿನ ಸಲಾದ್ ಮಾಡಿ ಐಸ್ಕ್ರೀಂ ಜತೆ ಬೆರೆಸಿ ಸೇವಿಸುತ್ತಾರೆ. ಹಾಗಾಗಿ ಈ ಎಲ್ಲ ಹಣ್ಣುಗಳಿಗೆ ಬೇಡಿಕೆ ಹೆಚ್ಚಳವಾಗಿದೆ.
ಬೆಲೆ ಏರಿಕೆ
ಮಂಗಳೂರಿನ ಮಾರುಕಟ್ಟೆಗೆ ಪಪ್ಪಾಯಿ ರಾಜ್ಯದ ಚಿತ್ರದುರ್ಗ, ಹುಣಸೂರು ಮತ್ತು ಆಂಧ್ರ ಪ್ರದೇಶದಿಂದ ಆವಕವಾಗುತ್ತಿದೆ. ಹಾಗಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಆಗದಿರುವುದರಿಂದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಕೊರತೆ ಇಲ್ಲ
ತರಕಾರಿಗಳ ಪೈಕಿ ಟೊಮೇಟೊ, ಬೀನ್ಸ್ ಮತ್ತು ಕೊತ್ತಂಬರಿ ಸೊಪ್ಪು ಧಾರಣೆ ತುಸು ಜಾಸ್ತಿಯಾಗಿದೆ. ಆದರೆ ಪೂರೈಕೆ ಧಾರಾಳ ಇರುವುದರಿಂದ ಮಾರು ಕಟ್ಟೆಯಲ್ಲಿ ಕೊರತೆ ಕಂಡು ಬಂದಿಲ್ಲ.
ಧಾರಾಳವಾಗಿ ಸರಬರಾಜು
ಪಪ್ಪಾಯಿ ಹೊರತು ಪಡಿಸಿ ಬೇರೆ ಯಾವುದೇ ಹಣ್ಣು ಹಂಪಲುಗಳ ಬೆಲೆ ಜಾಸ್ತಿಯಾಗಿಲ್ಲ. ಹಾಗೆಯೇ ಪಪ್ಪಾಯಿ ಹೊರತು ಪಡಿಸಿ ಇತರ ಹಣ್ಣುಗಳ ಪೂರೈಕೆಯಲ್ಲಿಯೂ ಕೊರತೆ ಇಲ್ಲ. ಉಳಿದೆಲ್ಲ ಹಣ್ಣುಗಳು ಧಾರಾಳವಾಗಿ ಸರಬರಾಜು ಆಗುತ್ತಿವೆ. ಯಾವುದೇ ಸಮಸ್ಯೆ ಇಲ್ಲ.
- ಬಶೀರ್, ಸೆಂಟ್ರಲ್
ಮಾರ್ಕೆಟ್ನ ಹಣ್ಣಿನ ವ್ಯಾಪಾರಿ
ಬೆಲೆ ಯಥಾ ಸ್ಥಿತಿ
ಈಗ ಮದುವೆ ಸೀಸನ್ ಬಹುತೇಕ ಮುಕ್ತಾಯವಾಗಿದೆ. ಹಾಗಾಗಿ ತರಕಾರಿಗಳ ಪೂರೈಕೆ ಸಾಕಷ್ಟಿದೆ. ಟೊಮೇಟೊ, ಬೀನ್ಸ್ ಮತ್ತು ಕೊತ್ತಂಬರಿ ಸೊಪ್ಪು ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಇತರ ಎಲ್ಲ ತರಕಾರಿಗಳ ಬೆಲೆ ಯಥಾ ಸ್ಥಿತಿಯಲ್ಲಿದೆ.
– ಡೇವಿಡ್ ಡಿ’ಸೋಜಾ,
ತರಕಾರಿ ವರ್ತಕರು, ಸೆಂಟ್ರಲ್ ಮಾರ್ಕೆಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್