ಬರಿದಾಗುತ್ತಿದೆ ನದಿಯೊಡಲು !
Team Udayavani, Dec 28, 2018, 10:29 AM IST
ಸುಳ್ಯ : ತಾಲೂಕಿನ ನದಿ, ಹೊಳೆ, ಬಾವಿಗಳಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿದೆ. ನಗರದ ನೀರಿನ ದಾಹ ನೀಗಿಸಲು ಪಯಸ್ವಿನಿ ನದಿಗೆ ಜ. 20ರ ಒಳಗೆ ಮರಳು ಕಟ್ಟ ನಿರ್ಮಿಸಲು ನಗರಾಡಳಿತ ಸಿದ್ಧತೆ ನಡೆಸಿದೆ. ಕಳೆದ ವರ್ಷದ ನವೆಂಬರ್, ಡಿಸೆಂಬರ್ ಅಂಕಿ-ಅಂಶ ಗಮನಿಸಿದಾಗ ಈ ವರ್ಷ ಅಂತರ್ಜಲ ಮಟ್ಟ ಭಾರಿ ಕುಸಿದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಅಧಿಕ ಮಳೆ ದಾಖಲಾಗಿದ್ದರೂ, ಜಲಮಟ್ಟ ಸುಧಾರಣೆ ಕಂಡಿಲ್ಲ. ಹೀಗಾಗಿ ಮತ್ತೆ ಕುಡಿಯುವ ನೀರಿನ ಹಾಹಾಕಾರ ಉಂಟಾಗುವ ಲಕ್ಷಣ ಗೋಚರಿಸ ತೊಡಗಿದೆ.
ಮಲಿನ ನೀರಿನ ಭೀತಿ
ನಗರದಲ್ಲಿ ಈ ಬೇಸಗೆ ಮತ್ತಷ್ಟು ಬಿಸಿ ಒಡ್ಡಲು ಇಲ್ಲಿನ ನೀರಿನ ಪೂರೈಕೆಯಲ್ಲಿನ ಲೋಪ ಕೂಡ ಕಾರಣವಾಗಲಿದೆ. ದಿನ ಬೆಳಗಾದರೆ ಹಲವು ವಾರ್ಡ್ಗಳ ನಳ್ಳಿ ಟ್ಯಾಪ್ನಲ್ಲಿ ಮಲಿನ ನೀರು ಬರುತ್ತಿರುವ ಪ್ರಕರಣ ಹೆಚ್ಚಾಗಿದೆ. ನಗರಕ್ಕೆ ಬಹುಭಾಗ ನೀರೊದಗಿಸುವ ಮೂಲ ಪಯಸ್ವಿನಿ ನದಿ. ವರ್ಷದ 365 ದಿನವೂ 24 ತಾಸು ಇಲ್ಲಿಂದ ನೀರು ಬಳಸಲಾಗುತ್ತದೆ. ಕಲ್ಲುಮಟ್ಲು ಪಂಪ್ಹೌಸ್ ಬಳಿಯಲ್ಲಿ 50 ಎಚ್ಪಿಯ 1 ಮತ್ತು 45 ಎಚ್ಪಿ ಧಾರಣ ಸಾಮರ್ಥ್ಯದ 2 ಪಂಪ್ ಬಳಸಿ ನೀರನ್ನು ಸಂಗ್ರಹಿಸಿ ಪಂಪ್ ಹೌಸ್ ಬಾವಿಗೆ, ಅಲ್ಲಿಂದ ಶುದ್ಧೀಕರಣ ಘಟಕ, ಅಲ್ಲಿಂದ ಟ್ಯಾಂಕ್ ಮೂಲಕ ಮನೆ, ಕಟ್ಟಡಗಳಿಗೆ ಪೂರೈಸುವುದು ನಗರದ ಸದ್ಯದ ನೀರಿನ ಪೂರೈಕೆ ಚಿತ್ರಣವಾಗಿದೆ.
ಮರಳು ಕಟ್ಟ ನಿರ್ಮಾಣ
ಈ ಬಾರಿ ಜನವರಿ 15 ಅಥವಾ 20ರ ಒಳಗೆ ಮರಳು ಕಟ್ಟ ನಿರ್ಮಾಣ ಮಾಡಲಾಗುವುದು. 5 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
– ಶಿವಕುಮಾರ್,
ಎಂಜಿನಿಯರ್, ನ.ಪಂ. ಸುಳ್ಯ
ಕಿರಣ್ ಪ್ರಸಾದ್ ಕುಂಡಡ್ಕ