‘ಧ್ಯಾನ್ಚಂದ್ ಕ್ರೀಡಾಳುಗಳಿಗೆ ಪ್ರೇರಕ ಶಕ್ತಿ’
Team Udayavani, Aug 31, 2018, 11:08 AM IST
ಮೂಡಬಿದಿರೆ: ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ್ ಅವರು ಭಾರತದ ಕ್ರೀಡಾಳುಗಳಿಗೆ ಪ್ರೇರಕ ಶಕ್ತಿ. ಅವರ ಸಾಧನೆಗಳ ಬೆಳಕಿನಲ್ಲಿ ಕ್ರೀಡಾಳುಗಳು ಹೆಜ್ಜೆ ಹಾಕಬೇಕಾಗಿದೆ. ಕ್ರೀಡಾರಂಗದಲ್ಲಿ ನಿತ್ಯಸ್ಮರಣೀಯರಾದ ಧ್ಯಾನ್ಚಂದ್ ಅವರ ಜನ್ಮದಿನವನ್ನು (ಆ. 29) ವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ರೋಟರಿ ವಿದ್ಯಾಸಂಸ್ಥೆಯ ಪ್ರಾಚಾರ್ಯ ವಿನ್ಸೆಂಟ್ ಡಿ’ಕೋಸ್ತಾ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದೈಹಿಕ ಶಿಕ್ಷಣ-ಶಿಕ್ಷಕರ ಸಂಘದ ಆಶ್ರಯದಲ್ಲಿ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಬುಧವಾರ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಸಮ್ಮಿಲನ್ ಹಾಲ್ ನಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ಎಂ. ವಹಿಸಿದ್ದರು. ವಲಯ ದೈಹಿಕ ಶಿಕ್ಷಣ-ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಜೈನ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ದೈ.ಶಿ.ಶಿ. ಸಂಘದ ಕೋಶಾಧಿಕಾರಿ ಗೋವರ್ಧನ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರಾಜೀವ ವಂದಿಸಿದರು. ದೈ. ಶಿ. ಶಿ. ನವೀನ್ ಅಂಬೂರಿ ನಿರೂಪಿಸಿದರು.
ಮೆರವಣಿಗೆ
ಪ್ರಾರಂಭದಲ್ಲಿ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ದೈಹಿಕ ಶಿಕ್ಷಕರ ವಾಹನ ಮೆರವಣಿಗೆಗೆ ವಿನ್ಸೆಂಟ್ ಡಿ’ಕೋಸ್ತಾ ಚಾಲನೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಹಿತ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ -ಶಿಕ್ಷಕರು ಮೆರವಣಿಗೆಯಲ್ಲಿ ಪೇಟೆಯ ಮೂಲಕ ಸಾಗಿ ಬಂದು ಜ್ಯೋತಿನಗರದಲ್ಲಿರುವ ರೋಟರಿ ವಿದ್ಯಾಸಂಸ್ಥೆಯನ್ನು ತಲುಪಿದರು.