ಊರಿಗೆ ಬಂದ ಮಾರಿ ಓಡಿಸಲು ಬರುತ್ತಿದ್ದಾನೆ ಆಟಿಕಳಂಜ
Team Udayavani, Jul 16, 2018, 10:35 AM IST
ಸುಬ್ರಹ್ಮಣ್ಯ : ತುಳುವರ ಬದುಕಿನ ಆಯಾಮಗಳು ಹೊಂದಿರುವ ಜನಪದ, ವೈಜ್ಞಾನಿಕ ಮಹತ್ವ ಅಡಗಿರುವ ಅಷಾಢ ಮಾಸದ ಆಟಿ ತಿಂಗಳ ಹಬ್ಬ ಮತ್ತೆ ಬಂದಿದೆ. ಇನ್ನು ತುಳುನಾಡಿನ ಮಂದಿಗೆ ಆಟಿ ಪರ್ವ! ಸುರಿಯುವ ಮಳೆ. ಮಾಡುವುದಕ್ಕೆ ಕೆಲಸವಿಲ್ಲ, ತಿನ್ನಲು ಆಹಾರವಿಲ್ಲ. ಜನರೆಲ್ಲ ಮನೆಯೊಳಗೆ ಕುಳಿತು ಹಿತ್ತಿಲಲ್ಲಿ ಬೆಳೆದ ಗೆಡ್ಡೆ, ಸೊಪ್ಪುಗಳನ್ನು ಬೇಯಿಸಿ ತಿಂದು ಕಳೆಯುವ ಕಾಲವಿದು. ಇದು ಆಟಿ ತಿಂಗಳ ಚಿತ್ರಣ. ಜನಪದ ತಜ್ಞರ ಪ್ರಕಾರ ಆಟಿ ತಿಂಗಳು ಕಷ್ಟದ ಕಾಲ. ಚೆನ್ನೆಮಣೆ ಆಟ, ಎದುರು ಕತೆ ಗಾದೆ, ಒಗಟು ಇತ್ಯಾದಿ ಹೇಳುತ್ತ ಹುರಿದ ಪುಲ್ಕೊಟ್ಟೆ (ಹುಣಸೆ ಬೀಜ), ಸಾಂತನಿ (ಹಲಸಿನ ಬೀಜ), ಬೇಯಿಸಿದ ಗೆಣಸು ತಿನ್ನುತ್ತ ಕಾಲ ಕಳೆಯುತ್ತಿದ್ದರು.
ಈ ತಿಂಗಳಲ್ಲಿ ಊರಿನಾದ್ಯಂತ ಆಟಿ ಕಳೆಂಜ ಸಂಚರಿಸಿ ಕಷ್ಟ ಕಳೆಯುತ್ತದೆ ಎಂಬ ಪ್ರತೀತಿ ಇದೆ. ಆಟಿ ಕಳೆಂಜ ಒಂದು ಜಾನಪದ ಕುಣಿತ. ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಎಂದರ್ಥ. ಕಳಂಜ ಊರಿಗೆ ಬಂದ ಮಾರಿಯನ್ನು (ರೋಗ) ಹೊಡೆದೋಡಿಸುತ್ತಾನೆ ಎಂಬ ನಂಬಿಕೆ ತುಳುನಾಡಿನಲ್ಲಿದೆ.
ನಲಿಕೆ ಅಥವಾ ಪಾಣಾರ ಜನಾಂಗದವರು ಆಟಿ ಕಳೆಂಜ ವೇಷ ಹಾಕುತ್ತ ಮನೆಮನೆಗೆ ತೆರಳಿ ಕುಣಿಯುತ್ತಾರೆ. ಹುಡುಗನಿಗೆ ತಾಳೆಗೆರಿಯ ಛತ್ರಿ ಕೊಟ್ಟು ಕುಣಿಯಲು ಹಿಮ್ಮೇಳದಲ್ಲಿ ತೆಂಬರೆ (ಚರ್ಮವಾಧ್ಯ) ಬಡಿಯಲಾಗುತ್ತದೆ. ಕಳೆಂಜನ ವೇಷ ಭೂಷಣದಲ್ಲಿ ಮುಖ್ಯವಾಗಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ ಅಥವಾ ಕೈಗೆ ಮೈಗೆ ಬಣ್ಣ ಮುಖ್ಯವಾಗಿ ಗಡ್ಡ ಮತ್ತು ಮೀಸೆ ಅಡಿಕೆ ಹಾಳೆಯಿಂದ ಮಾಡಿದ ಮತ್ತು ಹೂವಿನಿಂದ ಶೃಂಗರಿಸಿದ ಟೊಪ್ಪಿ ಇದು ಆಟಿ ಕಳೆಂಜದ ವೇಷ. ಆದರೆ ಇದು ಈಗ ಅಪರೂಪವಾಗುತ್ತಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಕಮಿಲದಲ್ಲಿ ಈ ಆಚರಣೆ ಈಗಲೂ ಕಂಡುಬರುತ್ತದೆ.
ಹಿಂದಿನ ಆಟಿ ತಿಂಗಳಲ್ಲಿ ತೇವು, ತೇವುದ ಕಂಡೆ ದಂಟ್ ತಜಂಕ್, ಕಣಿಲೆ ಕಲ್ಲಲಾಂಬು ಮೊದಲಾದುವುಗಳನ್ನು ಹುಡುಕಿ ತಂದು ಅಡುಗೆ ಮಾಡುತ್ತಿದ್ದರು. ಅದು ಒಪ್ಪೊತ್ತಿನ ಊಟ. ಅದು ಹೆಚ್ಚು ಆರೋಗ್ಯಕರವಾಗಿತ್ತು. ಆದರೆ ಇಂದು ಆಟಿ ಅಡುಗೆಗಳು ಶೋ ಎನ್ನುವಂತಾಗಿದೆ. ಹಿಂದೆ ಗುಡ್ಡ,ಗದ್ದೆಗಳಲ್ಲಿ ಸಿಗುತ್ತಿದ್ದ ಆಟಿಯ ತಿನಿಸುಗಳು ಇಂದು ಹೊಟೇಲ್, ಬೇಕರಿಗಳಲ್ಲಿ ಸಿಗುತ್ತಿವೆ. ಆಟಿ ಆಧುನಿಕತೆ ಪಡಕೊಂಡಿದೆ.
ಆಟಿ ಕುಲ್ಲುನಿ ಯೇಪ!
ಆಟಿ ತಿಂಗಳಲ್ಲಿ ಇನ್ನೊಂದು ವಿಶೇಷ ಎಂದರೆ ಆಟಿ ಕುಲ್ಲುನಿ. ಹೊಸದಾಗಿ ಮದುವೆಯಾದ ಹೆಣ್ಣು ಮಗಳು ತವರು ಮನೆಗೆ ಹೋಗುವುದು. ಇದನ್ನು ತುಳುವಿನಲ್ಲಿ ಆಟಿ ಕುಲ್ಲುನ ಎಂದು ಕರೆಯುತ್ತಾರೆ. ಮದುಮಗಳಿಗೆ ವಿಶ್ರಾಂತಿ ಸಿಗುವ ಆಶಯವಿದು. ಆಚರಣೆಯ ಹಿಂದೆ ಇನ್ನೊಂದು ಅಂಶವಿದೆ. ಆಟಿ ತಿಂಗಳಲ್ಲಿ ಪತಿ-ಪತ್ನಿ ಜತೆಗಿದ್ದು ಗರ್ಭ ಧರಿಸಿದರೆ, ಒಂಬತ್ತು ತಿಂಗಳು ಕಳೆದು ಬರುವ ಸುಗ್ಗಿ ವೇಳೆ ಬಿರು ಬಿಸಿಲಿದ್ದು, ಬಸುರಿ ಹೆಂಗಸಿಗೆ ಮನೆಯಲ್ಲಿ ಕಷ್ಟವಾಗುತ್ತದೆ. ಸುಗ್ಗಿ ಅವಧಿಯಲ್ಲಿ ಬೇಸಾಯದ ಕೆಲಸಗಳ ನಡುವೆ ಬಾಣಂತಿ ಆರೈಕೆಯೂ ಕಷ್ಟ ಎಂಬ ಕಾರಣಕ್ಕೆ ಈ ಆಚರಣೆ ಜಾರಿಗೆ ಬಂದಿದೆ.
ಆಟಿ ಆಡೊಂದುಂಡು
ಆಟಿ ತಿಂಗಳಲ್ಲಿ ದಿನಗಳು ಕಳೆಯುವುದೇ ಇಲ್ಲ. ಉದಾಸೀನ ಹೆಚ್ಚು. ಸೋಣ ತಿಂಗಳು ದಿನಗಳು ಬೇಗ ಉರುಳುತ್ತವೆ. ಈ ತಿಂಗಳಲ್ಲಿ ಹಬ್ಬಗಳು ಹೆಚ್ಚು ಇರುತ್ತವೆ. ಇದನ್ನೆ ಹಿರಿಯರು ಆಟಿ ಆಡೋಂದುಂಡು ಸೋಣ ಓಡೊಂದುಂಡು ಎಂದು ಸ್ವಾರಸ್ಯಕರವಾಗಿ ಹೇಳುತ್ತಾರೆ.
ಇಂದಿನದು ಆಧುನಿಕ ಆಟಿ
ಇಂದಿನ ಅಟಿ ಹಿಂದಿನಂತಲ್ಲ, ಕಷ್ಟ ಯಾರಿಗೂ ಇಲ್ಲ. ಧೋ ಎಂದು ಸುರಿಯುವ ಮಳೆ ಇಲ್ಲ. ತಿನ್ನಲು ಆಹಾರ ಇಲ್ಲ ಎಂದು ಆಗುವುದಿಲ್ಲ. ಮನೆಯೊಳಗೆ ಕುಳಿತುಕೊಳ್ಳುವ ಪ್ರಮೇಯ ಇಲ್ಲ. ಇಂದಿನದು ಆಧುನಿಕ ಆಟಿ. ಹಿರಿಯರು ಆಟಿ ತಿಂಗಳಲ್ಲಿ ಪಟ್ಟ ಕಷ್ಟ ಇಂದು ಕಾಣುತ್ತಿಲ್ಲ. ವೈಭವದ, ಕಾಟಾಚಾರದ ಆಟಿ ಆಚರಣೆಗಳು ಅಲ್ಲಲ್ಲಿ ನಡೆಯುತ್ತಿವೆ. ಮಾರಿ ಓಡಿಸುವ ಆಟಿ ಕಳಂಜ ಕಾಣಿಸುತ್ತಿಲ್ಲ.
ತೊಗಟೆ ಕಷಾಯ
ಆಟಿ ಅಮಾವಾಸ್ಯೆಗೆ ಹೆಚ್ಚು ಮಹತ್ವವಿದೆ. ಹೊತ್ತು ಮೂಡುವ ಮೊದಲೇ ಹಾಳೆ ಮರದ ತೊಗಟೆ ಕಷಾಯ ಸೇವನೆ ವಿಶೇಷ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜತೆಗೆ ಇದೇ ವೇಳೆ ಕಷಾಯ ಸೇವನೆ ವೇಳೆ ದೇಹದಲ್ಲಿ ಉಷ್ಣಾಂಶ ಹೆಚ್ಚುವ ಹಿನ್ನೆಲೆಯಲ್ಲಿ ಮೆಂತೆ ಗಂಜಿ ಸೇವನೆಯೂ ಅವಶ್ಯ ಎಂದು ಹಿರಿಯರು ಸಲಹೆ ನೀಡುತ್ತಾರೆ.
ಮುಂದಿನ ಪೀಳಿಗೆಗೆ ಅವಶ್ಯ
ತುಳುನಾಡಿನಲ್ಲಿ ಆಟಿ ತಿಂಗಳಿಗೆ ತನ್ನದೇ ಆದ ಮಹತ್ವವಿದೆ. ಇದನ್ನು ಉಳಿಸಬೇಕು. ಕಾಟಾಚಾರದ ಆಚರಣೆಗಳಿಂದ ಇದು ಸಾಧ್ಯವಿಲ್ಲ. ಆಟಿ ತಿಂಗಳ ನೈಜತೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಆಗಬೇಕಿದೆ.
– ದಯಾನಂದ ಕತ್ತಲ್ಸಾರ್,
ಜನಪದ ವಿದ್ವಾಂಸ
ಆಚರಣೆ ಗೊತ್ತಿರಬೇಕು
ಆಧುನಿಕ ಜೀವನ ಪದ್ಧತಿಗೆ ಹೊಂದಿಕೊಂಡಿದ್ದೇವೆ. ಹಿಂದೆ ಕಾಲ ಹೇಗಿತ್ತು ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸಾಮೂಹಿಕ ಆಟಿ ಆಚರಣೆಗಳು ಅವಶ್ಯವಿದೆ.
- ಕೆ.ಬಿ. ದಿವ್ಯಾ ದಿನೇಶ್,
ಮಲ್ಲಿಗೆಮಜಲು, ಸುಬ್ರಮಣ್ಯ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ