ಪಶ್ಚಿಮ ಘಟ್ಟ : ಗುಡ್ಡ ಜರಿದು ಹೂಳು ತುಂಬಿ ಕಿರಿದಾದ ನದಿ ಪಾತ್ರ
Team Udayavani, Sep 24, 2018, 9:48 AM IST
ಸುಬ್ರಹ್ಮಣ್ಯ: ಪಶ್ಚಿಮ ಘಟ್ಟ ಭಾಗದಲ್ಲಿ ಆಗಸ್ಟ್ನಲ್ಲಿ ಸುರಿದ ಮಹಾಮಳೆ ಎತ್ತಿನಹೊಳೆ ಯೋಜನೆ ಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ. ಭೂಕುಸಿತಗಳಿಂದ ಹೂಳು ತುಂಬಿ ನದಿ ಮೂಲಗಳು ಕಿರಿದಾಗಿವೆ. ಹಾಕಿರುವ ಕೊಳವೆಗಳು ಕೆಲವೆಡೆ ಕಿತ್ತು ಹೋಗಿವೆ.
ಎತ್ತಿನಹೊಳೆಯನ್ನು ಕೂಡಿಕೊಳ್ಳುವ ಕಾಡು ಮನೆ ಹೊಳೆೆ, ಕೇರಿ ಹೊಳೆ, ಹೊಂಗಡಹಳ್ಳ ಹರಿಯುವ ಭಾಗದಲ್ಲಿ ಭಾರೀ ಭೂಕುಸಿತಗಳು ಸಂಭವಿಸಿವೆ. ಬಾಳೆಹಳ್ಳ ಸಮೀಪ ಒಂದೇ ಕಡೆ ಐದಾರು ಎಕರೆಯಲ್ಲಿ ಭೂಕುಸಿತಗಳಾಗಿವೆ. ಮಣ್ಣು ಕೆಳಗಿನ ಭಾಗದಲ್ಲಿರುವ ಹೊಂಗಡ ಹಳ್ಳವನ್ನು ಆಕ್ರಮಿಸಿಕೊಂಡಿದೆ. ಹಳ್ಳಗಳ ಅಗಲ ಕಿರಿದಾಗಿದೆ, ಪಾತ್ರದಲ್ಲಿ ಮಣ್ಣು ಸಂಗ್ರಹ ಗೊಂಡು ಸರಾಗ ಹರಿವಿಗೆ ತಡೆಯಾಗಿದೆ. ಮಹಾಮಳೆ ಅವಾಂತರ ಸೃಷ್ಟಿಸಿ ತಿಂಗಳು ದಾಟಿದರೂ ಇಲ್ಲಿನ ಪರಿಸ್ಥಿತಿ ಈಗಲೂ ಹಿಂದಿನ ಸ್ಥಿತಿಗೆ ತಲುಪಿಲ್ಲ. ಅದಕ್ಕೆ ತಿಂಗಳುಗಳೇ ಬೇಕಾದಿತು.
ಕೊಳವೆಗಳಿಗೂ ಭಾರೀ ಹಾನಿ
ವರ್ಷದ ಹಿಂದೆಯಷ್ಟೇ ಅಳವಡಿಸಿದ ಕೊಳವೆಗಳು ಕಳೆದ ತಿಂಗಳ ಮಳೆಗೆ ಹಲವೆಡೆ ಆಳಕ್ಕೆ ಹುದುಗಿವೆ. ಕೆಲವು ಕಡೆ ಕೊಚ್ಚಿ ಹೋಗಿವೆ. ಇನ್ನು ಕೆಲವೆಡೆ ಮೇಲಕ್ಕೆ ಬಂದಿವೆ. ಜೋಡಣೆ ಬೇರ್ಪಟ್ಟು ಅಡ್ಡಾದಿಡ್ಡಿ ಹರಡಿವೆ. ಕೊಳವೆಗಳ ಒಳಗೂ ಮಣ್ಣು ಹೊಕ್ಕು ಸಂಗ್ರಹವಾಗಿದೆ.
ಸಕಲೇಶಪುರ ತಾಲೂಕಿನ ವನಗೂರು, ಕ್ಯಾನಹಳ್ಳಿ, ಉಚ್ಚಂಗಿ, ಅತ್ತಿಹಳ್ಳಿ, ಹೆಗ್ಗದ್ದೆ, ಹೊಸೂರು ಕಡಗರವಳ್ಳಿ, ಹೊಂಗಡಹಳ್ಳ, ಮಾಗೇರಿ, ಮೊಗದನಹಳ್ಳಿ, ಹಿರದನಹಳ್ಳಿ, ಹಿಜ್ಜನ ಹಳ್ಳಿ, ಹೊನ್ನಾಟ್ಲು, ಮಾವಿನೂರು, ಹಡ್ಲುಗದ್ದೆ, ಬಿಸಿಲೆ ಪಟ್ಲ ಮೊದಲಾದೆಡೆ ರಸ್ತೆ ಹಾನಿಗೊಂಡಿವೆ. ಅಲುವಳ್ಳಿ, ಕಡಗರವಳ್ಳಿ ಗ್ರಾಮ ಸಂಪರ್ಕಿಸುವ ರಸ್ತೆ ನಾಶವಾಗಿದೆ.
ಇಷ್ಟು ದೊಡ್ಡ ಪ್ರಮಾಣದ ಭೂಕುಸಿತಕ್ಕೆ ಎತ್ತಿನಹೊಳೆ ಯೋಜನೆಯೇ ಕಾರಣ ಎನ್ನುವ ಅಭಿಪ್ರಾಯ ಸ್ಥಳೀಯರದ್ದು. ಯಾಂತ್ರೀಕೃತ ಕಾಮಗಾರಿ ನಡೆಸಿದಾಗ ಮಣ್ಣು ಸಡಿಲಗೊಂಡಿರುವುದೇ ಕಾರಣ ಎನ್ನುತ್ತಾರವರು.
ಪುನರ್ವಸತಿ ಕಾರ್ಯ ನಡೆದಿಲ್ಲ
ಹಲವಾರು ಎಕರೆ ಭತ್ತ, ಕಾಫಿ, ಇತರ ತೋಟಗಳು ನಾಶವಾಗಿವೆ. ಅನೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆ ಕಳಕೊಂಡವರಿಗೆ ಇನ್ನೂ ಪುನರ್ವಸತಿ ಕೈಗೊಂಡಿಲ್ಲ. ಸೇತುವೆಗಳ ಪುನರ್ನಿರ್ಮಾಣ ಆಗಿಲ್ಲ.
ಘಟಕಗಳ ನಿರ್ಮಾಣ ಕಾರಣ
ಪ. ಘಟ್ಟ ವ್ಯಾಪ್ತಿಯಲ್ಲಿ ಗಣಿ, ಕಲ್ಲು, ಮರಳು ಗಣಿಗಾರಿಕೆ ನಡೆಯುತ್ತಿದೆ, ಜಲವಿದ್ಯುತ್ ಘಟಕಗಳು ತಲೆ ಎತ್ತಿವೆ. ಇವುಗಳ ನಿರ್ಮಾಣ ಹಂತದಲ್ಲೂ ಯಂತ್ರಗಳ ಬಳಕೆ ನಡೆದಿದೆ. ಕಿರು ಜಲವಿದ್ಯುತ್ ಸ್ಥಾವರಗಳಿಗೆ ಅನುಮತಿ ದೊರಕುತ್ತಲೇ ಇದೆ. ಇದರಿಂದಲೂ ಪರಿಸರದ ಮೇಲೆ ಪರಿಣಾಮ ಬೀರಿದೆ ಎಂಬ ಅಭಿಪ್ರಾಯವಿದೆ.
ಎತ್ತಿನಹೊಳೆ ಯೋಜನೆಯ ಅಡಿ ನಿರ್ಮಿ ಸಿರುವ 8 ಅಡ್ಡಗಟ್ಟೆಗಳಲ್ಲಿ 7 ಕಡೆ ಈಗ ಕಾಮಗಾರಿ ಪುನರಾರಂಭವಾಗಿದೆ. ಈ ಏಳೂ ಅಡ್ಡಗಟ್ಟೆಗಳಲ್ಲಿ ಹೂಳು ತುಂಬಿ ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ. ಹೊಂಗಡ ಹಳ್ಳ, ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಗಳಿಗೆ 9 ಕಡೆ ಒಡ್ಡು ನಿರ್ಮಿಸಲಾಗಿದೆ. ಒಟ್ಟು 129 ಕಿ.ಮೀ. ದೂರ ಇಲ್ಲಿಂದ ನೀರು ಹೋಗಬೇಕಿದೆ. 400 ಎಕರೆಗೂ ಹೆಚ್ಚು ಜಾಗದಲ್ಲಿ ಅರಣ್ಯದೊಳಗೆ ಭೂಗತ ಕೊಳವೆ ಅಳವಡಿಕೆ ಅರ್ಧ ಪೂರ್ತಿಗೊಂಡಿದೆ.
ಭಾರೀ ತೊಂದರೆ ಆಗಿಲ್ಲ
ಭೂಕುಸಿತದಿಂದ ಎತ್ತಿನ ಹೊಳೆ ಯೋಜನೆ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಹಾನಿಗಳಾಗಿವೆ ವಿನಾ ಭಾರೀ ತೊಂದರೆ ಆಗಿಲ್ಲ. ಹಾನಿ ಕುರಿತು ಸರಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಕಾಮಗಾರಿಗಳು ಮುಂದುವರಿಯಲಿವೆ.
ಜಯಣ್ಣ , ಎಕ್ಸಿಕ್ಯೂಟಿವ್ ಎಂಜಿನಿಯರ್, ಎತ್ತಿನಹೊಳೆ ಯೋಜನೆ
ನೀರಿನ ಒಳ ಹರಿವು ಕ್ಷೀಣ
ಪಶ್ಚಿಮ ಘಟ್ಟದ ಧಾರಣ ಶಕ್ತಿ ಕುಸಿತದಿಂದ ನೀರಿನ ಹರಿವು ಕ್ಷೀಣಿಸಿದೆ. ಪರಿಣಾಮ ಘೋರ ಪ್ರಾಕೃತಿಕ ವಿಕೋಪ ಗಳು ಸಂಭವಿಸುತ್ತಿವೆ. ಅವಘಡಕ್ಕೆ ಮಾನವ ಹಸ್ತಕ್ಷೇಪ ಕಾರಣ. ಆಳುವ ಸರಕಾರಗಳೇ ಇದಕ್ಕೆ ಹೊಣೆ.
ಪ್ರದೀಪ್ಕುಮಾರ್ ಎಲ್. ಮಲೆನಾಡು ಜಂಟಿ ಕ್ರಿಯಾಸಮಿತಿಯ ಅಧ್ಯಕ್ಷ
* ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ
MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ
Belthangady ಕಾಂಗ್ರೆಸ್ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ
Belthangady ವಿದ್ಯುತ್ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ
Bantwal; ರಿಕ್ಷಾ ಪಲ್ಟಿಯಾಗಿ ರಸ್ತೆಗೆ ಎಸೆಯಲ್ಪಟ್ಟ ಯುವಕ ಮೃತ್ಯು
MUST WATCH
ಹೊಸ ಸೇರ್ಪಡೆ
Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು
Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ
Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!
Swindon Borough ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ
W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ