ಆರೋಗ್ಯಕ್ಕೆ ಸಿರಿಧಾನ್ಯ ಸೂಕ್ತ
Team Udayavani, Nov 30, 2018, 5:36 PM IST
ಧಾರವಾಡ: ಇಂದಿನ ಆಧುನಿಕ ಶೈಲಿಯ ಜೀವನದಲ್ಲಿ ರೋಗ ಮುಕ್ತ ಆರೋಗ್ಯಕರ ಬದುಕು ಬೇಕಾದರೆ ಆಹಾರದಲ್ಲಿ ಸಿರಿ ಧಾನ್ಯಗಳ ಬಳಕೆ ಅತ್ಯವಶ್ಯಕ ಎಂದು ಸುಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಇಲ್ಲಿನ ರಾಯಾಪುರದ ಜ್ಞಾನ ವಿಕಾಸ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಮಾದರಿ ಮೌಲ್ಯವರ್ಧನಾ ಕೇಂದ್ರ ಮತ್ತು ಸಿರಿಧಾನ್ಯ ಮೌಲ್ಯ ವರ್ಧನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಯಾವ ಆಹಾರದಲ್ಲಿ ರೋಗ ನಿರೋಧ ಶಕ್ತಿ, ಪೌಷ್ಟಿಕತೆ ಹೆಚ್ಚಿದೆ ಎಂಬ ಗುಟ್ಟು ಅರಿತಿದ್ದರು. ಹೀಗಾಗಿ ಅಂಥ ಆಹಾರ ಸೇವಿಸಿ ನೂರು ವರ್ಷ ಬಾಳುತ್ತಿದ್ದರು. ಆದರೆ ಇಂದು ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ಜನ ನಾಲಿಗೆಗೆ ರುಚಿ ನೀಡುವ ವಿಷಕಾರಿ ವಸ್ತುಗಳಿಗೆ ಮಾರು ಹೋಗುತ್ತಿದ್ದಾರೆ. ಒಂದೆಡೆ ಫಿಜ್ಜಾ, ಬರ್ಗರ್ನಂತ ಜಂಕ್ ಫುಡ್ಗಳಿಗೆ ಮಾರು ಹೋಗುತ್ತಿದ್ದರೆ ಇನ್ನೊಂದೆಡೆ ಗುಟ್ಕಾದಂತಹ ಮಾರಕ ಚಟಕ್ಕೂ ಬಲಿ ಆಗುತ್ತಿದ್ದಾರೆ. ಇದೆಲ್ಲವೂ ಬದುಕು ಹಾಗೂ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಮಾಡುತ್ತಿದ್ದು, ಹೀಗಿರುವಾಗ ಸುಂದರ ಬದುಕು ಬೇಕೆಂದರೆ ಸಿರಿ ಧಾನ್ಯಗಳ ಸೇವನೆ ಮಾಡಲೇಬೇಕು ಎಂದರು.
ಫಿಜ್ಜಾ, ಬರ್ಗರ್ ಬೇಡ: ಇಂದಿನ ಮಕ್ಕಳಿಗೆ ಶಕ್ತಿ ನೀಡುವ ರೊಟ್ಟಿ, ಚಪಾತಿ, ಇಡ್ಲಿ, ದೋಸೆ ಬೇಡವಾಗಿದೆ. ಕೇವಲ ನಾಲಿಗೆಗೆ ರುಚಿಸುವ ಬೀಜಾ, ಬರ್ಗರ್ ಬೇಕು. ಇದೊಂದು ರೀತಿ ಬಿಡಿಸಲಾಗದ ಅಂಟಿದ ಚಟ. ಪೌಷ್ಠಿಕತೆ ನೀಡುವ ಆಹಾರ ಸಿರಿಧಾನ್ಯದಲ್ಲಿ ಅಡಗಿದೆ. ಮಕ್ಕಳು ಒಮ್ಮೆ ಸೇವಿಸಿ ಆಹಾರ ಇನ್ನೊಮ್ಮೆ ಕೇಳಬೇಕು. ಅಂಥ ಆಹಾರ ನೀಡಬೇಕು ಎಂದು ಡಾ| ಹೆಗ್ಗಡೆ ಅಭಿಪ್ರಾಯ ಪಟ್ಟರು.
ಸಿರಿಧಾನ್ಯ ಮುಖ್ಯ ಬೆಳೆಯಾಗದೆ ಬಡವರ ಬೆಳೆ ಎಂದೇ ಖ್ಯಾತಿ ಪಡೆದಿದೆ. ಈ ಬೆಳೆಗೆ ನಾವೀಗ ರಾಜೋಪಚಾರ ನೀಡುವ ಮೂಲಕ ಮುಖ್ಯ ಬೆಳೆಯನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಇದೇ ಕಾರಣದಿಂದ ಸಿರಿಧಾನ್ಯಗಳನ್ನು ಪರಿಷ್ಕರಿಸಿ ಅವುಗಳಿಂದ ಮೌಲ್ಯವರ್ಧನ ವಸ್ತುಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಕಾರ್ಯವನ್ನು ಕೇವಲ ಪ್ರಚಾರಕ್ಕೆ ಮಾಡುತ್ತಿಲ್ಲ. ಈ ಧಾನ್ಯಗಳನ್ನು ಬೆಳೆಯುವುದರಿಂದ ರೈತರು ಸಮಸ್ಯೆಗೆ ಪರಿಹಾರ ದೊರಕುವುದಲ್ಲದೆ, ಜನರ ಆರೋಗ್ಯ ಸಹ ವೃದ್ಧಿಯಾಗಲಿದೆ ಎಂದರು.
ಸಾವಯವ ಕೃಷಿ ಪರಿಹಾರ: ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಮಾತನಾಡಿ, ಕೃಷಿಯಲ್ಲಿ ರಾಸಾಯನಿಕ ಬಳಕೆಯಿಂದ ಭೂಮಿ ಹಾಗೂ ಆಹಾರ ಎರಡನ್ನೂ ವಿಷ ಮಾಡುತ್ತಿರುವ ನಾವು ಪೂರ್ವವಿಕರ ಕೃಷಿ ಪದ್ಧತಿ ಮತ್ತೆ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಬೆಳೆ ಬೆಳೆಯಲು ಮುಂದಾಗಬೇಕಿದೆ. ಇಂದಿನ ಜನರ ಆಹಾರ ಪದ್ಧತಿಯಿಂದ ಅನೇಕ ರೋಗಗಳಿಂದ ಬಳಲುವಂತಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಿರಿಧಾನ್ಯ ಅಭಿಯಾನದಡಿ ಆಯ್ದ 8 ತಾಲೂಕುಗಳಲ್ಲಿ ರಚನೆ ಆಗಿರುವ ಸಾವಯವ ಕೃಷಿಕರ ಸಂಘಗಳಿಗೆ, ಸಾವಯವ ಪ್ರಮಾಣಿಕರಣ ಚಟುವಟಿಕೆಗಾಗಿ ಸಾಂಕೇತಿಕವಾಗಿ ಅನುದಾನ ವಿತರಣೆ ಮಾಡಲಾಯಿತು.
ನಂತರ ಆಹಾರದಲ್ಲಿ ಸಿರಿಧಾನ್ಯದ ಮಹತ್ವ, ಸಿರಿಧಾನ್ಯ ಬೆಳೆಗಾರರ ರೈತ ಉತ್ಪಾದಕ ಕಂಪನಿ ರಚನೆ ಮತ್ತು ಕಂಪನಿ ಚಟುವಟಿಕೆಗಳು, ಸಿರಿಧಾನ್ಯ ಮೌಲ್ಯವರ್ಧನೆ, ಸಾವಯವ ಸಿರಿಧಾನ್ಯ ಬೇಸಾಯ ಪದ್ಧತಿ ಹಾಗೂ ಸಿರಿಧಾನ್ಯ ಉತ್ಪಾದನೆಗಳಲ್ಲಿ ಯಂತ್ರೋಪಕರಣಗಳ ಬಳಕೆ ಕುರಿತು ವಿವಿಧ ಗೋಷ್ಠಿಗಳು ಜರುಗಿದವು. ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿಗಳಾದ ಆರ್.ವಿ. ಶಾಸ್ತ್ರೀ, ಉದಯಕುಮಾರ ಶೆಟ್ಟಿ, ಶಾಮ್ ಭಟ್, ಸಂಪತ್ ಸಾಮ್ರಾಜ್ಯ, ಹಣಕಾಸು ಪ್ರಾದೇಶಿಕ ನಿರ್ದೇಶಕ ಶಾಂತಾರಾಮ್ ಪೈ, ಯೋಜನಾಧಿಕಾರಿಗಳಾದ ಕುಸುಮಾಧರ ಕಳಿಗೆ, ಮಹಾಬಲೇಶ್ವರ ಪಟಗಾರ, ಉಲ್ಲಾಸ್ ಮೇಸ್ತ್, ಜಿಲ್ಲಾ ನಿರ್ದೇಶಕ ದಿನೇಶ, ವಿವಿಧ ಜಿಲ್ಲೆಗಳ ರೈತರು ಇದ್ದರು. ಡಾ|ಎಲ್.ಎಚ್. ಮಂಜುನಾಥ ಸ್ವಾಗತಿಸಿದರು.
ಕೃಷಿ ಮೌಲ್ಯ ವರ್ಧನೆಗಾಗಿ ಯಾವ ಪ್ರದೇಶದಲ್ಲಿ ಯಾವ ಬೆಳೆಗಳನ್ನು ಬೆಳೆದರೆ ಉತ್ತಮ ಫಸಲು ಪಡೆಯಬಹುದು ಎಂಬುದನ್ನು ತಿಳಿಸಬೇಕಿದೆ. ಇದಲ್ಲದೆ ಯಾವ ಬೆಳೆಗಳನ್ನು ಸೇವಿಸಿದರೆ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂಬುದನ್ನು ಜನರಿಗೆ ತಿಳಿಸುವ ಮೂಲಕ ಆರೋಗ್ಯ ವರ್ಧನೆಯಾಗುವ ಬಗೆ ತಿಳಿಸುವ ಕೆಲಸವಾಗಬೇಕಿದೆ. ಅದರಲ್ಲೂ ಉತ್ತಮ ಆರೋಗ್ಯ, ರೋಗ ನಿರೋಧಕ ಶಕ್ತಿ ವೃದ್ಧಿಯಾಗಲು ಸಿರಿಧಾನ್ಯಗಳು ಉತ್ತಮ ಎಂಬುದನ್ನು ಯುವಕರಿಗೆ ತಿಳಿಸಬೇಕಿದೆ.
ಡಾ.ಡಿ.ವೀರೇಂದ್ರ ಹೆಗ್ಗಡೆ,
ಧರ್ಮಾಧಿಕಾರಿ, ಸುಕ್ಷೇತ್ರ ಧರ್ಮಸ್ಥಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್
Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ
Hubli; ಅಂಜಲಿ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಘೋಷಿಸಬೇಕು: ಶಂಕರ ಪಾಟೀಲ್ ಮುನೇನಕೊಪ್ಪ
Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ
Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ