ಹಿರೀಸಾವೆ ಏತನೀರಾವರಿ ಕಾಮಗಾರಿ ಚುರುಕುಗೊಳಿಸಿ
Team Udayavani, Nov 7, 2019, 3:00 AM IST
ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಹಿರೀಸಾವೆ-ಜುಟ್ಟನಹಳ್ಳಿ ಏತನೀರಾವರಿ ಕಾಮಗಾರಿಯನ್ನು ಚುರುಕುಗೊಳಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಸೂಚಿಸಿದರು.
ತಾಲೂಕಿನ ಶ್ರವಣಬೆಳಗೊಳದ ಬಸವನಹಳ್ಳಿ ಗ್ರಾಮದಲ್ಲಿ ಕಾಮಗಾರಿ ತಡವಾಗಲು ರೈಲು ಹಳಿಯನ್ನು ದಾಟಬೇಕಿದೆ ಈ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡಲಾಗಿದ್ದು ಕಾಮಗಾರಿ ಮುಂದುವರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಮುತುವರ್ಜಿ ತೋರಬೇಕು. ರೈತರು ಹಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಏತ ನೀರಾವರಿ ಯೋಜನೆ ಪೂರ್ಣವಾದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದರು.
ಸಮನ್ವಯತೆ ಕೊರತೆ: ರೈಲ್ವೆ ಹಳಿ ಹಾದು ಹೋಗಿರುವ ಬಳಿ ನಿರ್ಮಾಣ ಆಗಿರುವ ಮೇಲ್ಸೇತುವೆಗೆ ಸರಿಯಾದ ಪ್ರಮಾಣದಲ್ಲಿ ಗುತ್ತಿಗೆದಾರರು ಸಿಮೆಂಟ್ ಹಾಕದೇ ಇರುವುದರಿಂದ ರೈಲ್ವೇ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮಧ್ಯೆ ಸಮನ್ವಯದ ಕೊರತೆ ಉಂಟಾಗಿದ್ದು ಕಾಮಗಾರಿ ಸ್ಥಗಿವಾಗಿದೆ. ಇನ್ನೆರಡು ದಿನಗಳಲ್ಲಿ ಕುಣಿಗಲ್ ನಲ್ಲಿರುವ ರೈಲ್ವೆಯ ಅಧಿಕಾರಿಯನ್ನು ಖುದ್ದು ಸಂಪರ್ಕಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಕಾಲುವೆ ಕಾಮಗಾರಿ: ವಿದ್ಯುತ್ ಸರಬರಾಜು ಮತ್ತು ಮುಖ್ಯ ಕಾಲುವೆಯಿಂದ ಉಪ ಕಾಲುವೆಗಳ ಕಾಮಗಾರಿಯು ಭರದಿಂದ ಸಾಗಿದ್ದು, 10 ಎಕರೆ ಜಮೀನನ್ನು ಅರಣ್ಯ ಇಲಾಖೆಯಿಂದ ನೀರಾವರಿ ಇಲಾಖೆಗೆ ಹಸ್ತಾಂತರಿಸುವ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರನ್ನು ಭೇಟಿ ಮಾಡಿ ಕಾಮಗಾರಿ ಮಾಡಲು ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸಲಾಗುವುದು ಎಂದು ತಿಳಿಸಿದರು.
ಸಹಾಯಕ ಎಂಜಿನಿಯರ್ ಉಮೇಶ, ಗ್ರಾಮ ಪಂಚಾಯಿತಿ ಸದಸ್ಯರಾದ ಮಯೂರ, ಎಸ್.ಎಂ.ಜನಾರ್ದನ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಸ್.ಕೆ.ರಾಘವೇಂದ್ರ, ಮಂಜುನಾಥ, ಮುಖಂಡರಾದ ರಮೇಶ, ತಮ್ಮಣ್ಣಗೌಡ, ನಿಂಗೇಗೌಡ, ಎಂ.ಎನ್.ರಮೇಶ, ಕುಂಬೇನಹಳ್ಳಿ ಸುಂಡಹಳ್ಳಿ, ಜುಟ್ಟನಹಳ್ಳಿ ಹಿರೀಸಾವೆ, ಪರಮ, ಬಸವನಹಳ್ಳಿ ಗ್ರಾಮದ ರೈತರು ಉಪಸ್ಥಿತರಿದ್ದರು.
ನೀರಿನ ವಿಷಯದಲ್ಲಿ ರಾಜಕೀಯ ಮಾಡೋಲ್ಲ: ರೈತರಿಗೆ ನೀರು ನೀಡುವ ವಿಷಯಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ . ಕೃಷಿಕರಿಗೆ ನೀರು ಹಾಗೂ ಸಕಾಲಕ್ಕೆ ವಿದ್ಯುತ್ ನೀಡಿದರೆ ಅವರು ದೇಶಕ್ಕೆ ಅನ್ನ ನೀಡುತ್ತಾರೆ. ಅನ್ನದಾತರಿಗೆ ಸೌಲಭ್ಯ ನೀಡಲು ಯಾವುದೇ ಪಕ್ಷ ಮುಂದೆ ಬಂದರೂ ಅದಕ್ಕೆ ಸಹಮತವಿದೆ. ಕ್ಷೇತ್ರದ ಶಾಸಕರು, ಜಿಲ್ಲಾ ಮಂತ್ರಿಗಳೊಂದಿಗೆ ನೀರಿನ ವಿಷಯವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ. ನಮ್ಮ ಪ್ರತಿಷ್ಠೆ ಬದಿಗಿಟ್ಟು ರೈತರು ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.
ಹಿರೀಸಾವೆ ಜುಟ್ಟನಹಳ್ಳಿ ಏತನೀರಾವರಿ ಯೋಜನೆ 56 ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿದ್ದು, ಈಗಾಗಲೇ ಅಂತಿಮ ಹಂತಕ್ಕೆ ತಲುಪಿದೆ. ರೈಲ್ವೇ ಮೇಲ್ಸೇತುವೆಯ ಮೇಲೆ ಪೈಪ್ ಅಳವಡಿಕೆ¿ ಕಾಮಗಾರಿ ಕೈಗೊಳ್ಳಲು 90 ಲಕ್ಷ ರೂ.ಗಳನ್ನು ಹಣವನ್ನು ರಾಜ್ಯ ಸರ್ಕಾರ ರೈಲ್ವೆ ಇಲಾಖೆಗೆ ಸಂದಾಯ ಮಾಡಿದೆ. ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಅನುಮತಿ ನೀಡಿದರೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಮಂದಗತಿ ಕಾಮಗಾರಿ-ಆಕ್ರೋಶ: ಏತನೀರಾವರಿ ಯೋಜನೆ ಕಾಮಗಾರಿ ಹಾಗೂ ಬಸವನಹಳ್ಳಿ ಬಳಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದರಿಂದ ಏತನೀರಾವರಿ ಯೋಜನೆ ತಡವಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಆರು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. ಕೆಲ ತಿಂಗಳು ಕಾಮಗಾರಿ ನಿಲ್ಲಿಸುತ್ತಾರೆ.
ರೈತರು ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದಾಗ ಕಾಮಗಾರಿ ಪ್ರಾರಂಭಿಸುತ್ತಾರೆ ಒಂದು ವರ್ಷವಾದರೂ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲದೇ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ರೈತರಾದ ಪಿ.ಎ.ನಾಗರಾಜು, ಬೊಮ್ಮೇನಹಳ್ಳಿ ನಿಂಗೇಗೌಡ, ನಾರಾಯಣಗೌಡ ಆರೋಪಿಸಿದರು. ಅಲ್ಲದೇ ರೈಲ್ವೆ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಸ್ಥಳಕ್ಕೆ ಬರಬೇಕು ಎಂದು ಮನವಿ ಮಾಡಿದರು.