ಹಾಸನ ಜಿಲ್ಲೆಯಲ್ಲಿ ಜಿಟಿ, ಜಿಟಿ ಮಳೆ
Team Udayavani, May 16, 2021, 3:56 PM IST
ಹಾಸನ: ಜಿಲ್ಲೆಯಲ್ಲಿ ಶನಿವಾರ ಮುಂಜಾನೆಯಿಂದ ಆರಂಭವಾಗಿರುವ ಜಿಟಿ, ಜಿಟಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತೌಕ್ತೆ ಚಂಡಮಾರುತದ ಪರಿಣಾಮವಾಗಿ ಹಾಸನ ನಗರ ಸೇರಿದಂತೆ ಜಿಲ್ಲೆಯಲ್ಲಿಮೋಡ ಕವಿದ ವಾತಾವರಣ, ಮೈ ಕೊರೆಯುವ ಶೀತ ಗಾಳಿ ಜಿಟಿ, ಜಿಟಿ, ಮಳೆ ಮುಂಗಾರಿನ ವಾತಾವರಣ ನಿರ್ಮಿ ಸಿದ್ದು, ಜನ ಮನೆಯಿಂದ ಹೊರ ಬಾರಲಾಗದೆ ಸ್ವಯಂ ಪ್ರೇರಿತ ಲಾಕ್ಡೌನ್ ವಿಧಿಸಿಕೊಂಡಂತಾಗಿದೆ.
ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆವರೆಗೆ ನಗರದಲ್ಲಿ ತರಕಾರಿ ಮತ್ತು ದಿನ ನಿತ್ಯದ ವಸ್ತುಗಳ ಖರೀದಿಗೆಬರುತ್ತಿದ್ದ ಜನ ಮಳೆಯಿಂದಾಗಿ ಶನಿವಾರ ಮಾರುಕಟ್ಟೆಗೂ ಹೆಚ್ಚಿನ ಸಂಖ್ಯೆಯಲ್ಲಿ ಬರಲಿಲ್ಲ.
ಬಿತ್ತನೆಗೆ ಪೂರಕ: ಜಿಲ್ಲೆಯಲ್ಲಿ ಮೆಕ್ಕೆಜೋಳ, ಆಲೂಗಡ್ಡೆ ಬಿತ್ತನೆ ಭರದಿಂದ ಸಾಗಿದ್ದು, ಮಳೆ ಮತ್ತು ಶೀತಗಾಳಿಯಿಂದಾಗಿ ಭೂಮಿ ತಂಪಾಗಿದೆ. ಆಲೂಗಡ್ಡೆ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ.ಭೂಮಿ ತಂಪಾಗದಿದ್ದರೆ ಬಿತ್ತನೆಯಾದ ಆಲೂಗಡ್ಡೆ ಭೂಮಿಯಲ್ಲಿಯೇ ಕೊಳೆತು ಹೋಗುವ ಆತಂಕವಿತ್ತು.ಆದರೆ, ಈಗ ಭೂಮಿ ತಂಪಾಗಿದ್ದು ಆಲೂಗಡೆ ಬಿತ್ತನೆ ಹಾಗೂ ಅರಕಲಗೂಡು ಮತ್ತು ಹೊಳೆನರಸೀಪುರತಾಲೂಕಿನ ಕೆಲ ಭಾಗಗಲ್ಲಿ ತಂಬಾಕು ನಾಟಿಗೆ ತಂಪಾದ ವಾತಾವರಣ ಅನುಕೂಲವಾಗಿದೆ.