ಕಾಂಗ್ರೆಸ್ ಶಕ್ತಿ ಕುಗ್ಗಲು ನಾಯಕರೇ ಕಾರಣ
Team Udayavani, Jan 24, 2018, 4:34 PM IST
ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಕುಂದಲು ನಾಯಕರೇ ಕಾರಣ ಹೊರತು ಕ್ಷೇತ್ರದ ಕಾರ್ಯಕರ್ತರಲ್ಲ ಎಂದು ಮುಖಂಡ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಯನೀಯ ಸ್ಥಿತಿ ತಲುಪಿದೆ. ಅದನ್ನು ಮತ್ತೆ ಕಟ್ಟಲು ಯಾವ ನಾಯಕರೂ ಮುಂದಾಗದಿರುವುದು ವಿಷಾದನೀಯ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸುವ ಮನಸ್ಸು ನಾಯಕರಿಗೆ ಇದ್ದಿದ್ದರೆ ಕಳೆದ ನಾಲ್ಕುವರೆ ವರ್ಷದ ಅವಧಿಯಲ್ಲಿ ಈ ಕೆಲಸ ಮಾಡಬಹುದಿತ್ತು.
ಆದರೆ ಮೇಲ್ಮಟ್ಟದ ಡೀಲ್ ರಾಜಕಾರಣದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ನಾಯಕರು ಮನಸ್ಸು ಮಾಡಲಿಲ್ಲ ಎಂದು ಆರೋಪಿಸಿದರು. ಯುವ ಮುಖಂಡ ಚಿಕ್ಕಾಡೆ ಮಹೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಪಾಂಡವಪುರಕ್ಕೆ ಬಂದಾಗ ಸಮಾರಂಭಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮುಂದೆ ತಮ್ಮ ಹಳೆ ಸಹವರ್ತಿ ಸಂಸದ ಸಿ.ಎಸ್.ಪುಟ್ಟರಾಜು ಅವರನ್ನು ಹೊಗಳಿದರೆ,
ಕಾಂಗ್ರೆಸ್ ಸರ್ಕಾರದ ಆರೋಗ್ಯ ಮಂತ್ರಿ ರಮೇಶ್ ಕುಮಾರ್ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಹೊಗಳುವುದಲ್ಲದೇ ಪುಟ್ಟಣ್ಣಯ್ಯ ಅವರನ್ನು ಮತ್ತೂಮ್ಮೆ ಗೆಲ್ಲಿಸಿ ಎಂದು ನಮ್ಮ ಪಕ್ಷದವರೇ ಕರೆ ನೀಡಿದರೆ ಇಲ್ಲಿ ಕಾಂಗ್ರೆಸ್ ನಾಯಕರು ಬೆಳೆಯಲು ಹೇಗೆ ಸಾಧ್ಯ ಎಂದು ಕಿಡಿಕಾರಿದರು.
ಮುಖಂಡ ಕೋ.ಪು.ಗುಣಶೇಖರ್ ಮಾತನಾಡಿ, ಪಕ್ಷದ ಹೈಕಮಾಂಡ್ ಟಿಕೆಟ್ ಯಾರಿಗಾದರೂ ನೀಡಲಿ, ನಾವು ಮಾತ್ರ ಹಳೆಯದನ್ನೆಲ್ಲಾ ಮರೆತು ಮುಖಂಡ ಎಲ್.ಡಿ.ರವಿ ನೇತೃತ್ವದಲ್ಲಿ ಮತ್ತೆ ಪಕ್ಷವನ್ನು ಸಂಘಟಿಸಿ ಕ್ಷೇತ್ರದಲ್ಲಿ ಪಕ್ಷದ ಬಲಪ್ರದರ್ಶನ ನಡೆಸುವ ಮೂಲಕ ಮತ್ತೆ ವಿರೋಧಿಗಳಿಗೆ ಸಡ್ಡು ಹೊಡೆಯಬೇಕೆಂದು ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್.ಸಿ.ಮಂಜುನಾಥ್, ಪ್ರಕಾಶ್, ಹಿರಿಯ ಮುಖಂಡರಾದ ಬಸವರಾಜು, ಎಲ್.ಡಿ.ರವಿ, ಹಿರೇಮರಳಿ ರಾಮಕೃಷ್ಣ, ಹೊನಗಾನಹಳ್ಳಿ ಕೃಷ್ಣೇಗೌಡ, ದೇವೇಗೌಡ, ನಜೀರ್ ಅಹಮದ್, ಸಿದ್ದಲಿಂಗಯ್ಯ, ಶ್ರೀನಿವಾಸ್, ಚಂದ್ರಶೇಖರ್, ದೇವರಾಜು, ಕುಬೇರ, ಸಿ.ಆರ್.ರಮೇಶ್, ಕೋಮಲ ಚೆನ್ನಪ್ಪ ಇತರರಿದ್ದರು.