ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ: ಸೈರನ್ ಕೇಳಿ ಪರಾರಿಯಾದ ಕಳ್ಳರು
Team Udayavani, Sep 2, 2020, 3:25 PM IST
ರಾಯಚೂರು: ಸಿರವಾರ ಪಟ್ಟಣದಲ್ಲಿ ಸೆಂಟ್ರಲ್ ಬ್ಯಾಂಕ್ ಗೆ ಸೇರಿದ ಎಟಿಎಂನಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಪ್ರಸಂಗ ಬೆಳಕಿಗೆ ಬಂದಿದೆ.
ಎಟಿಎಂನಲ್ಲಿದ್ದ ಸಿಸಿ ಕ್ಯಾಮೆರಾ ಬೇರೆಡೆ ತಿರುಗಿಸಿದ ಬಳಿಕ ಎಟಿಎಂ ಲಾಕ್ ಮುರಿಯಲು ಯತ್ನಿಸಿದ್ದಾರೆ. ಆದರೆ ಕೂಡಲೇ ಸೆಕ್ಯುರಿಟಿ ಸೈರನ್ ಹೊಡೆದಿದ್ದು, ತಕ್ಷಣ ಬ್ಯಾಂಕಿನ ಮುಖ್ಯ ಕಚೇರಿಗೆ ಮಾಹಿತಿ ರವಾನೆಯಾಗಿದೆ. ಇದರಿಂದ ಕಳ್ಳರು ಪರಾರಿಯಾಗಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬುಧವಾರ ಬೆಳಗ್ಗೆ ಎಸ್ಪಿ ಪ್ರಕಾಶ ನಿಕ್ಕಂ, ಸಿಂಧನೂರು ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದರು. ಈ ಕುರಿತು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.