ಮೀನುಗಾರಿಕೆ ಇಲಾಖೆಯಿಂದ ಮತ್ಸ್ಯಾಶ್ರಯ ಮಂಜೂರು?
ರಾಜ್ಯ ಸರಕಾರದಿಂದ ಶೀಘ್ರ ಘೋಷಣೆ ಸಾಧ್ಯತೆ
Team Udayavani, Dec 6, 2019, 6:45 AM IST
ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್ ಗಾಂಧಿ ವಸತಿ ನಿಗಮದ ಬದಲು ಮತ್ತೆ ಮೀನುಗಾರಿಕೆ ಇಲಾಖೆಗೆ ವಹಿಸಲು ರಾಜ್ಯ ಸರಕಾರ ಮುಂದಾಗಿದೆ. ಉಪ ಚುನಾವಣೆ ಮುಗಿದ ಕೂಡಲೇ ಈ ಬೆಳವಣಿಗೆ ನಡೆಯುವ ಸಾಧ್ಯತೆಯಿದೆ. ಇದಾದರೆ 2 ವರ್ಷಗಳಿಂದ ಸ್ಥಗಿತ ಗೊಂಡಿದ್ದ ಮನೆ ಹಂಚಿಕೆ ಚುರುಕು ಗೊಳ್ಳಲಿದ್ದು, ಈ ಹಿಂದೆ ಹಂಚಿಕೆಯಾಗಿದ್ದ 3 ಸಾವಿರ ಮನೆಗಳಿಗೆ ಮೀನುಗಾರಿಕೆ ಇಲಾಖೆಯಿಂದಲೇ ಶೀಘ್ರ ಮಂಜೂರಾತಿ ದೊರೆಯಲಿದೆ.
ರಾಜ್ಯ ಸರಕಾರವು 2006-07ನೇ ಸಾಲಿನಿಂದ ಕರಾವಳಿಯ 1.57 ಲಕ್ಷ ಸಕ್ರಿಯ ಮೀನುಗಾರರು ಮತ್ತು 1.39 ಲಕ್ಷ ಒಳನಾಡು ಮೀನುಗಾರರಿಗೆ ಅನು ಕೂಲವಾಗುವ ಮತ್ಸ್ಯಾಶ್ರಯ ವಸತಿ ಯೋಜನೆಯನ್ನು ಜಾರಿಗೆ ತಂದಿತ್ತು. ವಸತಿ ರಹಿತ ಅಥವಾ ವಾಸಕ್ಕೆ ಯೋಗ್ಯ ವಲ್ಲದ ಮನೆಯಿರುವ ಮೀನುಗಾರರು ಮನೆ ಕಟ್ಟಲು ಸಾಮಾನ್ಯ ವರ್ಗಕ್ಕೆ 1.20 ಲಕ್ಷ ರೂ., ಪ.ಜಾತಿ ಮತ್ತು ಪಂಗಡಕ್ಕೆ 1.75 ಲಕ್ಷ ರೂ. ಅನುದಾನ ಇದರಡಿ ಸಿಗುತ್ತದೆ.
2 ವರ್ಷಗಳಿಂದ ಹಂಚಿಕೆಯೇ ಆಗಿಲ್ಲ
ಯೋಜನೆಯನ್ನು ರಾಜ್ಯ ಸರಕಾರ 2 ವರ್ಷಗಳ ಹಿಂದೆ ರಾಜೀವ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಿತ್ತು. ಆ ಬಳಿಕ ಅನುದಾನ ಸಿಕ್ಕಿಲ್ಲ. 2017-18ರ ಬಳಿಕ 2,800ರಿಂದ 3 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರೂ ಹಾಗೆಯೇ ಇದೆ ಎನ್ನುವ ಮಾಹಿತಿ ಲಭಿಸಿದೆ.
ಕರಾವಳಿಗರ ನಿರ್ಲಕ್ಷ್ಯ
ಮೀನುಗಾರಿಕೆ ದೊಡ್ಡ ಪ್ರಮಾಣ ದಲ್ಲಿರುವ ಅವಿಭಜಿತ ದ.ಕ. ಜಿಲ್ಲೆಗೆ ಈ ಯೋಜನೆಯ ಬಹುಪಾಲು ಪ್ರಯೋ ಜನ ಸಿಗಬೇಕಿತ್ತು. ಆದರೆ ಒಳನಾಡು ಮೀನುಗಾರರನ್ನು ಸೇರಿ ಸಿರುವುದರಿಂದ ಬೇರೆ ಜಿಲ್ಲೆಗಳಿಗೆ ಹೆಚ್ಚು ಮನೆ ಹಂಚಿಕೆ ಮಾಡಲಾಗಿದೆ. ಈವರೆಗೆ ರಾಜ್ಯದೆಲ್ಲೆಡೆ ಈ ಯೋಜನೆಯಡಿ ಅಂದಾಜು 30 ಸಾವಿರ ಮನೆಗಳು ಮಂಜೂರಾಗಿದ್ದರೂ ಕರಾವಳಿಗೆ ದಕ್ಕಿದ್ದು 5,196 ಸಾವಿರ ಮನೆಗಳು ಮಾತ್ರ. ಇದರಲ್ಲಿ ಮೀನುಗಾರಿಕೆಯಲ್ಲಿ ಸಕ್ರಿಯರಾಗಿರುವವರಿಗೆ ಸಿಕ್ಕಿದ್ದು 4,386 ಮಾತ್ರ. 810 ಮನೆಗಳನ್ನು ಒಳನಾಡು ಮೀನು ಗಾರಿಕೆಯಲ್ಲಿ ತೊಡಗಿಸಿಕೊಂಡ ವರಿಗೆ ನೀಡಲಾಗಿದೆ.
ರಾಜೀವ ಗಾಂಧಿ ವಸತಿ ನಿಗಮದಿಂದ ಮತ್ಸ್ಯಾಶ್ರಯ ಯೋಜನೆಯಡಿ ಮೀನುಗಾರರಿಗೆ ಮನೆ ಹಂಚಿಕೆ ವಿಳಂಬವಾಗುತ್ತಿರುವುದನ್ನು ಪರಿಗಣಿಸಿ, ಮತ್ತೆ ಮೀನುಗಾರಿಕೆ ಇಲಾಖೆಯಿಂದಲೇ ಮನೆ ಹಂಚಿಕೆ ನಡೆಯಲಿದೆ. ಈ ಪ್ರಕ್ರಿಯೆ ವಾರದೊಳಗೆ ಅನುಷ್ಠಾನಕ್ಕೆ ಬರಲಿದ್ದು, ರಾಜ್ಯದಲ್ಲಿ 2,800ರಿಂದ 3 ಸಾವಿರ ಮನೆಗಳಿಗೆ, ಅದರಲ್ಲೂ ಕರಾವಳಿಗೆ ಹೆಚ್ಚಿನ ಪ್ರಾಶಸ್ತ್ಯ ವಹಿಸಲು ನಿರ್ಧರಿಸಲಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಬಂದರು ಮತ್ತು ಮೀನುಗಾರಿಕೆ ಸಚಿವರು
– ಪ್ರಶಾಂತ್ ಪಾದೆ