ಚರಂಡಿ ಇದ್ದರೂ ನೀರು ಹರಿಯಲ್ಲ; ಇರುವ ರಸ್ತೆಗೂ ಡಾಮರಿಲ್ಲ
Team Udayavani, Jun 21, 2018, 6:00 AM IST
ಕುಂದಾಪುರ: ಶಾಸ್ತ್ರಿ ಸರ್ಕಲ್ ಬಳಿ ನಿರ್ಜೀವಾವಸ್ಥೆಯಲ್ಲಿ ತಲೆ ಎತ್ತಿನಿಂತ ಫ್ಲೈ ಓವರ್ನ ಒಂದು ಬದಿ ರಾಷೀóಯ ಹೆದ್ದಾರಿಯಾದರೆ ಇನ್ನೊಂದು ಬದಿ ಮಂಗಲ್ಪಾಂಡೆ ವಾರ್ಡ್. ಸಂಜೀವಿನಿ ಆಸ್ಪತ್ರೆ, ನಂದಿಬೆಟ್ಟು, ಬಿಟಿಆರ್ ರಸ್ತೆ, ಕಲ್ಲಾಗರ, ಬಿಎಂಎಚ್ ರಸ್ತೆ ಮೊದಲಾದವು ಈ ವಾರ್ಡ್ ವ್ಯಾಪ್ತಿಗಿದೆ. ಸುಮಾರು 800ರಷ್ಟು ಮತದಾರರು ಇದ್ದು, 275ರಷ್ಟು ಮನೆಗಳು ಇವೆ.
ಚರಂಡಿ ಸಮಸ್ಯೆ
ಬಿಎಚ್ಎಂ ರಸ್ತೆ ಹಾಗೂ ನಂದಿಬೆಟ್ಟು ರಸ್ತೆಯಲ್ಲಿ ಪ್ರಮುಖವಾಗಿ ಎದುರಾಗುವುದು ಚರಂಡಿ ಸಮಸ್ಯೆ. ಇಲ್ಲಿನ ನಿವಾಸಿಗಳದ್ದೆಲ್ಲ ಒಂದೇ ಗೋಳು. ಚರಂಡಿ ಇದ್ದರೂ ನೀರು ಹರಿಯದು. ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತದೆ. ಮಾಡಿದ ಚರಂಡಿ ಮುಚ್ಚಿಲ್ಲ. ಜೋರು ಮಳೆ ಬಂದಾಗ ಚರಂಡಿ ತುಂಬುತ್ತದೆ. ಮಕ್ಕಳು ಆಚೆ ಈಚೆ ಹೋಗುವಾಗ ಎದೆಯಲ್ಲಿ ಭಯ ಆವರಿಸುತ್ತದೆ. ಮಳೆಗಾಲದಲ್ಲಿ ಈ ಸಮಸ್ಯೆಯಾದರೆ, ಬೇಸಗೆಯಲ್ಲಿ ಚರಂಡಿ ನೀರು ದುರ್ವಾಸನೆ ಬೀರುತ್ತಿರುತ್ತದೆ. ಕೆಎಸ್ಆರ್ಟಿಸಿಯ ತ್ಯಾಜ್ಯ ನೀರು ಈ ಭಾಗದ ಚರಂಡಿಗೆ ಹರಿದು ಬರುತ್ತದೆ. ಪುರಸಭೆಗೆ ಮೂರು ಬಾರಿ ದೂರು ಕೊಟ್ಟ ಮೇಲೆ ಸರಿ ಮಾಡಿಸಿದರು. ನಮ್ಮದು ಪ್ರಮುಖವಾಗಿ ಚರಂಡಿ ಸಮಸ್ಯೆ ಸರಿಪಡಿಸಬೇಕಾದ್ದೇ ಬೇಡಿಕೆ.
ರಸ್ತೆ ಆಗಿಲ್ಲ
ಕಲ್ಲಾಗರ ರಸ್ತೆ, ಬಿಟಿಆರ್ ರಸ್ತೆ, ಆಸ್ಪತ್ರೆ ರಸ್ತೆ, ನಂದಿಬೆಟ್ಟು ರಸ್ತೆ, ಶ್ರೀದೇವಿ ಆಸ್ಪತ್ರೆರಸ್ತೆಗೆ ಡಾಮರು ಅಥವಾ ಕಾಂಕ್ರಿಟ್ ಹಾಕುವ ಕಾಮಗಾರಿ ನಡೆದಿಲ್ಲ. ಈ ಭಾಗದ ಜನರದ್ದು ಇದೇ ಪ್ರಮುಖ ಬೇಡಿಕೆ. ನಮ್ಮದೊಂದು ರಸ್ತೆ ಮಾಡಿಸಿಕೊಡಿ ಎಂದು. ಪುರಸಭೆಯ ಅನೇಕ ರಸ್ತೆಗಳು ಕಾಂಕ್ರಿಟ್ ಭಾಗ್ಯ ಕಂಡಿವೆ, ನಮ್ಮ ಭಾಗದಲ್ಲೂ ಕಾಂಕ್ರಿಟ್ ರಸ್ತೆ ಮಾಡಿಸಿ ಎನ್ನುತ್ತಾರೆ. ನಂದಿಬೆಟ್ಟ ರಸ್ತೆಯಲ್ಲಿ ಒಳಚರಂಡಿ ಆಗಿಲ್ಲ. ಒಂದು ಹಂತದ ಕಾಮಗಾರಿ ಮಾತ್ರ ಆಗಿದೆ. ಉಳಿದಂತೆ ಚರಂಡಿಗಳು ಬಾಯ್ದೆರೆದುಕೊಂಡಿವೆ.
ಎಲ್ಲ ಕಡೆಯ ನೀರು
ಕುಂದೇಶ್ವರ ರಸ್ತೆಯ ನೀರು, ರಾಷ್ಟ್ರೀಯ ಹೆದ್ದಾರಿಯ ನೀರು, ಶೆರೋನ್ ಹೊಟೆಲ್ ಭಾಗದ ನೀರು, ಬಸ್ ನಿಲ್ದಾಣ ಬದಿಯ ನೀರು ಎಲ್ಲ ನೀರು ಬಂದು ಸೇರುವುದು ಸರ್ವಿಸ್ ರಸ್ತೆ ಬದಿಯ ಇದೇ ವಾರ್ಡ್ ಬದಿಗೆ. ಎಲ್ಲ ನೀರೂ ಸಂಗ್ರಹವಾಗಿ ಚರಂಡಿ ಸಣ್ಣದಾಗಿ ಮಳೆ ಬಂದಾಗ ಹರಿಯಲು ಜಾಗವಿಲ್ಲದೇ ಇಲ್ಲಿನ ಮನೆಗಳ ಅಂಗಳದಲ್ಲೆಲ್ಲಾ ಚರಂಡಿ ನೀರು. ಇದ್ದ ಚರಂಡಿಯ ಹೂಳೆತ್ತದೇ ನೀರು ರಸ್ತೆಯಲ್ಲಿ ಹರಿವಂತಾಗುತ್ತದೆ ಎನ್ನುತ್ತಾರೆ ಇಲ್ಲಿನವರು.
ಅನುದಾನ ಕಡಿಮೆ
ಕಳೆದ ಅವಧಿಗಿಂತ ಈ ಅವಧಿಯಲ್ಲಿ ಅನುದಾನ ಕಡಿಮೆಯಾದ ಕಾರಣ ಸಾಕಷ್ಟು ಕಾಮಗಾರಿಗಳು ಬಾಕಿಯಾಗಿವೆ. ಜನರ ಬೇಡಿಕೆ ಇದೆ. ಆದರೆ ಅನುದಾನ ನಿಲ್ಲ. ಲಭ್ಯ ಅನುದಾನದಲ್ಲಿ ಸಾಧ್ಯವಾದಷ್ಟು ಕೆಲಸಗಳನ್ನು ಮಾಡಿಕೊಡಲಾಗಿದೆ.
– ಸಿಸಿಲಿ ಕೋಟ್ಯಾನ್, ಸದಸ್ಯರು, ಪುರಸಭೆ
ಚರಂಡಿ ಮುಚ್ಚಿಲ್ಲ
ಈ ಬಾಗದಲ್ಲಿ ಚರಂಡಿ ಕಾಮಗಾರಿ ಪರಿಪೂರ್ಣವಾಗಿಲ್ಲ. ಆದಷ್ಟು ಶೀಘ್ರ ಅದೊಂದು ಮಾಡಬೇಕು. ಮಾಡಿದ ಚರಂಡಿಯನ್ನು ಮುಚ್ಚಿಲ್ಲ. ಹಾಗಾಗಿ ಸಮಸ್ಯೆ ಆಗುತ್ತಿದೆ.
– ಕಿರಣ್,ನಂದಿಬೆಟ್ಟು
ಚರಂಡಿ ಮುಚ್ಚಿಲ್ಲ
ಮಳೆ ಬಂದಾಗ ಚರಂಡಿಯಲ್ಲಿ ನೀರು ಬಾಕಿಯಾಗುತ್ತದೆ. ಹೂಳೆತ್ತಿಲ್ಲ. ಚರಂಡಿ ಮುಚ್ಚಿಲ್ಲ. ಇದರಿಂದ ನೀರು ತುಂಬಿ ಹರಿಯುವಾಗ ಆತಂಕವಾಗುತ್ತದೆ.
– ಜಯಂತಿ, ಬಿಎಚ್ಎಂ ರಸ್ತೆ
ಸೊಳ್ಳೆ ಕಾಟ
ಚರಂಡಿಯಲ್ಲಿ ನೀರು ನಿಂತು ಸೊಳ್ಳೆ ಕಾಟ ಇರುತ್ತದೆ. ಪುರಸಭೆಯವರು ಸ್ಪಂದಿಸುವುದೇ ಇಲ್ಲ. ಅದೆಷ್ಟು ಸಲ ಹೇಳಬೇಕಾಗುತ್ತದೆ.
– ಶ್ರೀಶರ, ನಂದಿಬೆಟ್ಟು