ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯ ವಿರುದ್ಧ ಕರವೇ ಪ್ರತಿಭಟನೆ
Team Udayavani, Sep 19, 2021, 3:31 PM IST
ದಾಂಡೇಲಿ : ನಗರದಲ್ಲಿ ಮೂರುವರೆ ವರ್ಷದ ಹೆಣ್ಣು ಮಗುವಿನ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ, ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯ ಮೇಲೆ ಕಠಿಣ ರೀತಿಯ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದ ಕರ್ನಾಟಕ ರಕ್ಷಣಾ ವೇದಿಕೆ (ಪ್ರ) ಬಣದ ವತಿಯಿಂದ ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಭಾನುವಾರ ಮಧ್ಯಾಹ್ನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಪ್ರತಿಭಟನೆಯ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯ ಪ್ರತಿಕೃತಿಯನ್ನು ದಹನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರದ ವಕೀಲರುಗಳಾದ ಆರ್.ವಿ.ಗಡೆಪ್ಪನವರ ಮತ್ತು ವಿಶ್ವನಾಥ ಜಾಧವ ಅವರುಗಳು ಶಾಂತಿಯ ನಗರದಲ್ಲಿ ಇಂತಹಾ ಕೃತ್ಯಗಳು ನಡೆಯಬಾರದು. ಇದು ತೀವ್ರ ಖಂಡನೀಯವಾಗಿದೆ. ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದಾತನ ಮೇಲೆ ಯಾರು ಸಹಾ ವಕಾಲತ್ತು ಮಾಡಬಾರದೆಂದು ಆಗ್ರಹಿಸಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಧೀರ ಶೆಟ್ಟಿ ಮತ್ತು ನಗರದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಷ್ಣು ನಾಯರ್ ಅವರು ಮಾತನಾಡಿ ಇಂಥಹ ಕ್ರೂರ ಕೃತ್ಯವನ್ನು ಎಂದು ಸಹಿಸುವುದಿಲ್ಲ. ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಪರ ಯಾರೂ ಕಾನೂನು ನೆರವು ನೀಡಬಾರದು. ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಕಾನೂನು ಜಾರಿಯಾಗಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ರ) ಬಣದ ಅಧ್ಯಕ್ಷ ಪ್ರವೀಣ ಕೊಠಾರಿ, ಮುಖಂಡರುಗಳಾದ ಗಣೇಶ ಖಾನಪುರಿ, ಮಂಜು ಪಂಥೋಜಿ, ದೇವರಾಜ ದಾರ್ಲ, ರಾಜೇಂದ್ರ ಪೈ, ಇಬ್ರಾಹಿಂ ಕಾಕರ್, ಸಂಜು ಸಿಂಗಾಯಿ, ತೌಸಿಫ್ ಮುಲ್ಲಾ, ಮನೋಜ್ ಲಮಾಣಿ, ಸಂತೋಷ ತೇರದಾಳ, ಅಸ್ಲಾಂ ದೇಸಾಯಿ, ರಫೀಕ್ ಪೊಲಾರ್ಡ್ ಮೊದಲಾದವರು ಉಪಸ್ಥಿತರಿದ್ದರು.