ಅನ್ಯರನ್ನು ಗೌರವಿಸುವ ಗುಣ ಕಾಂಗೆ‹ಸ್ ಮತ್ತು ಬಿಜೆಪಿಗಿಲ್ಲ
ಗೋರಖ್ಪುರ ಗೆಲುವಿನ ನಂತರ ಮಾಯಾವತಿಯನ್ನು ಅಭಿನಂದಿಸಿದ್ದರು ಅಪ್ಪ
Team Udayavani, Apr 1, 2019, 6:00 AM IST
ಬಿಎಸ್ಪಿ ಜತೆಗೆ ನೀವು ಮೈತ್ರಿ ಮಾಡಿಕೊಂಡ ವಿಚಾರದಲ್ಲಿ ನಿಮ್ಮ ತಂದೆ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ಗೆ ಖುಷಿ ಇದೆಯೇ?
ಹೌದು. ಬಿಎಸ್ಪಿ ಜತೆಗೆ ಮೈತಿಯ ವಿಚಾರದಲ್ಲಿ ನನ್ನ ನಿರ್ಧಾರಕ್ಕೆ ತಂದೆಯವರು ಸಂತೋಷ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿಯೇ ಅವರು, ಮೈನ್ಪುರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ದೇಶವನ್ನು ಕಾಪಾಡುವ ನಿಟ್ಟಿನಲ್ಲಿಯೇ ಈ ಮೈತ್ರಿಕೂಟ ರಚಿಸಲಾಗಿದೆ ಎಂದು ಅವರಿಗೆ ತಿಳಿದಿದೆ.
ಮೈನ್ಪುರಿಯಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಜತೆಗೆ ಬೃಹತ್ ರ್ಯಾಲಿ ಆಯೋಜಿಸಲು ಮುಂದಾಗಿದ್ದೀರಿ. ಅದರಲ್ಲಿ ಮುಲಾಯಂ ಸಿಂಗ್ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ…
ಮೈನ್ಪುರಿ ಸೇರಿದಂತೆ ಉತ್ತರಪ್ರದೇಶದಾದ್ಯಂತ ಎರಡೂ ಪಕ್ಷಗಳು ಜಂಟಿ ರ್ಯಾಲಿ ಉದ್ದೇಶಿಸಿ ಮಾತನಾಡಲಿವೆ. ಮುಲಾಯಂ ಕೂಡ ಅದರಲ್ಲಿ ಭಾಗವಹಿಸಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮುಲಾಯಂ ಅವರು ಮಾಯಾವತಿ ಯೊಂದಿಗೆ ಮಾತನಾಡಿದ್ದಾರೆಯೇ?
ಸದ್ಯಕ್ಕಂತೂ ಮಾತನಾಡಿಲ್ಲ. ಗೋರಖ್ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ವೇಳೆಯಲ್ಲಿ ಮತ್ತು ಎಸ್ಪಿ-ಬಿಎಸ್ಪಿ ಮೈತ್ರಿ ಅಂತಿಮಗೊಂಡ ಸಂದರ್ಭದಲ್ಲಿ ಮಾಯಾವತಿ ಅವರಿಗೆ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದ್ದರು.
ಫಿರೋಜಾಬಾದ್ನಲ್ಲಿ ನಿಮ್ಮ ಪಕ್ಷದ ಅಕ್ಷಯ ಪ್ರತಾಪ್ ಸಿಂಗ್ ಮತ್ತು ಮುಲಾಯಂ ಸಹೋದರ ಶಿವಪಾಲ್ ಸಿಂಗ್ ಎದುರಾಳಿಯಾಗಲಿದ್ದಾರೆ. ಈ ಸಂಗತಿ ಮುಜುಗರಕ್ಕೆ ಕಾರಣವಾದೀತೇ? ನೀವು ಮತ್ತು ಮುಲಾಯಂ ಪ್ರಚಾರಕ್ಕೆ ಅಲ್ಲಿಗೆ ಹೋಗುತ್ತೀರಾ?
ಇಲ್ಲಿ ಮುಜುಗರಕ್ಕೆ ಒಳಗಾಗುವ ವಿಚಾರವೇ ಉದ್ಭವಿಸುವುದಿಲ್ಲ. ಆ ಕ್ಷೇತ್ರದಲ್ಲಿ ನಾವು ಅತ್ಯಂತ ಹೆಚ್ಚಿನ ಮತಗಳ ಅಂತರದಲ್ಲಿ ಜಯಗಳಿಸಲಿದ್ದೇವೆ. ನೇತಾಜಿ (ಮುಲಾಯಂ) ಮತ್ತು ನಾನು ಫಿರೋಜಾಬಾದ್ನಲ್ಲಿ ಅಕ್ಷಯ್ ಪರ ಪ್ರಚಾರ ನಡೆಸಲಿದ್ದೇವೆ. ಅಕ್ಷಯಗೆ ನಮ್ಮ ತಂದೆ ಆಶೀರ್ವಾದ ಮಾಡಿದ್ದಾರೆ.
ಬಿಜೆಪಿ ಶಿವಪಾಲ್ ಸಿಂಗ್ಗೆ ಬೆಂಬಲ ನೀಡುತ್ತಿದೆಯೇ?
ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ನಮ್ಮನ್ನು ಅಧಿಕೃತ ನಿವಾಸಗಳಿಂದ ತೆರವುಗೊಳಿಸುವ ಸಂದರ್ಭದಲ್ಲಿಯೇ, ಶಿವಪಾಲ್ ಸಿಂಗ್ ಅವರಿಗೆ ಹೊಸ ಬಂಗಲೆಯನ್ನು ನೀಡಲಾಗಿತ್ತು.
ಈ ತ್ರಿಕೋನ ಸ್ಪರ್ಧೆಯಿಂದ ಬಿಜೆಪಿಗೆ ಪ್ರಯೋಜನವಾಗುವು ದಿಲ್ಲವೇ?ಎಸ್ಪಿ-ಬಿಎಸ್ಪಿ-ಕಾಂಗ್ರೆಸ್ ನಡುವೆ ಮೈತ್ರಿಗೆ ಮಾಯಾವತಿಯವರು ಅಡ್ಡಗಾಲು ಹಾಕಿರಲಿಲ್ಲವೇ?
ಮಾಯಾವತಿಯವರು ಮೂರು ಪಕ್ಷಗಳ ನಡುವೆ ಮೈತ್ರಿಗೆ ಆಕ್ಷೇಪ ಮಾಡಿರಲಿಲ್ಲ. ಕಾಂಗ್ರೆಸ್ ಮತ್ತು ಆ ಪಕ್ಷದ ನಾಯಕರ ಅಹಂಕಾರವೇ ಈ ಸಮಸ್ಯೆಗೆ ಕಾರಣ. ಕಾಂಗ್ರೆಸ್ ಮತ್ತು ಬಿಜೆಪಿ ಇತರ ಪಕ್ಷಗಳ ಜತೆಗೂ ಅದೇ ರೀತಿಯಲ್ಲೇ ವರ್ತಿಸುತ್ತವೆ. ಇತರ ಪಕ್ಷಗಳ ನಾಯಕರನ್ನು ಗೌರವದಿಂದ ಕಾಣುವ ಸೌಜನ್ಯ ಕಾಂಗ್ರೆಸ್-ಬಿಜೆಪಿ ನಾಯಕರಿಗೆ ಇಲ್ಲ.
ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ವಾದ್ರಾ ನಿಮ್ಮ ಜತೆಗೆ ಮಾತನಾಡಿದ್ದಾರೆಯೇ? ಇನ್ನು ಮುಂದೆ ನಿಮ್ಮ ಮತ್ತು ಕಾಂಗ್ರೆಸ್ ನಡುವೆ ತಾತ್ವಿಕ ಒಪ್ಪಂದ ಏರ್ಪಡುವ ಸಾಧ್ಯತೆ ಇದೆಯೇ?
ಈ ಬಗ್ಗೆ ಸದ್ಯಕ್ಕೆ ನಾನು ಏನನ್ನೂ ಹೇಳುವುದಿಲ್ಲ. ಕಾಂಗ್ರೆಸ್ ಜತೆಗೆ ನಾವು ಇರುವುದಿಲ್ಲ ಎಂದು ಹೇಳಲಿಚ್ಛಿಸುತ್ತೇನೆ. ಅವರು ಬಿಜೆಪಿ ಪ್ರಾಬಲ್ಯಕ್ಕೆ ತಡೆಯೊಡ್ಡುವ ಅಥವಾ ಸೋಲಿಸುವ ಪ್ರಯತ್ನಕ್ಕಿಂತ ಉತ್ತರ ಪ್ರದೇಶದಲ್ಲಿ ಪಕ್ಷ ಬಲವರ್ಧನೆಯಲ್ಲಿ ನಿರತರಾಗಿದ್ದಾರೆ. ನಮ್ಮ ಮೈತ್ರಿಯೇ ಬಿಜೆಪಿಯನ್ನು ಎದುರಿಸಲು ಸಮರ್ಥವಾಗಿದೆ. ಹಾಲಿ ಸಂಸದರನ್ನು ಮತ್ತೆ ಸ್ಪರ್ಧೆಗೆ ಇಳಿಸಿದ್ದರಲ್ಲಿಯೇ ಅವರಿಗೆ ನಮ್ಮ ಮೈತ್ರಿಯಿಂದ ಹೆದರಿಕೆ ಉಂಟಾಗಿದೆ ಎನ್ನುವುದು ಸ್ಪಷ್ಟ.
ಪ್ರಧಾನಿಯವರು ನಿಮ್ಮ ಮೈತ್ರಿಕೂಟವನ್ನು “ಶರಾಬು’ ಎಂದು ಬಣ್ಣಿಸಿದ್ದಾರೆ. ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳ ಮತ್ತು ಬಿಎಸ್ಪಿಯ ಹೆಸರನ್ನು ಸೇರಿಸಿ ಈ ಮಾತುಗಳ ನ್ನಾಡಿದ್ದಾರೆ. ಏನಂತೀರಿ ಈ ಬಗ್ಗೆ?
ನಮ್ಮದು ರೈತರ, ಬಡವರ ಮೈತ್ರಿಕೂಟ. ತಾನು ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ ಜನ ಕೇಳುವುದಿಲ್ಲ ಎಂದು ದೃಢವಾದ ಬಳಿಕ ಬಿಜೆಪಿ ಗೊಂದಲಕ್ಕೀಡಾಗಿದೆ. ಹೀಗಾಗಿಯೇ ರಾಷ್ಟ್ರೀಯತೆ, ಹಿಂದುತ್ವ ಮತ್ತು ಕೋಮು ಧ್ರುವೀಕರಣ ಮುಂತಾದ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತಿದ್ದರೂ, ಜಾಟರಿಗೆ ಮೀಸಲು, ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ. ನೋಟು ಅಮಾನ್ಯ ಫಲ ನೀಡಿಲ್ಲ, ಕಪ್ಪುಹಣದ ಹರಿವು ತಡೆಯಲು ವಿಫಲರಾಗಿದ್ದಾರೆ. ಜನರು ಮೋದಿಯವರನ್ನು ಬದಲಾವಣೆ ಮಾಡಬೇಕೆಂದು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಬಿಜೆಪಿಯವರು ಎಷ್ಟೇ ಘೋಷ ವಾಕ್ಯಗಳನ್ನು ಸೃಷ್ಟಿಸಿದರೂ ಅದರಿಂದ ಪ್ರಯೋಜನವಾಗಲಾರದು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸರ್ಕಾರ ಪಕ್ಷಪಾತ ಮಾಡುವುದಿಲ್ಲ. ಸರಿಯಾದ ರೀತಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳು ಜಾರಿಯಾಗಿವೆ ಎನ್ನುತ್ತಿದ್ದಾರಲ್ಲ?
ನಾನು ಬಿಜೆಪಿ ಹೈ ಕಮಾಂಡ್ಗೆ ಕೇಳುತ್ತೇನೆ. ಇವರು ರಾಜ್ಯಪಾಲರ ಹುದ್ದೆಗಳಿಗೆ, ಮುಖ್ಯಮಂತ್ರಿಗಳ ಮತ್ತು ವಿವಿಗಳ ಕುಲಪತಿ ಸ್ಥಾನಗಳಿಗೆ ಹಿಂದುಳಿದ ವರ್ಗಗಳಿಂದ ಎಷ್ಟು ಮಂದಿಯನ್ನು ಆಯ್ಕೆ ಮಾಡಿ ನೇಮಿಸಿದ್ದಾರೆ?
ಎಸ್ಪಿಗೆ ಹೆಚ್ಚಿನ ಸ್ಥಾನಗಳು ಸಿಗಲಾರವು ಮತ್ತು ಬಿಎಸ್ಪಿಗೆ ಶೂನ್ಯ ಸಂಪಾದನೆಯಾಗಲಿದೆ ಎಂದು ಹೇಳುತ್ತಿದ್ದಾರಲ್ಲ?
ಗೋರಖ್ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಏನಾಗಬಹುದು ಎನ್ನುವುದು ಮುಖ್ಯಮಂತ್ರಿಗಳಿಗೆ ಗೊತ್ತಿರಲಿಲ್ಲ. ದೀರ್ಘ ಕಾಲದಿಂದ ಅವರೇ (ಯೋಗಿ ಆದಿತ್ಯನಾಥ್) ಅಲ್ಲಿನ ಸಂಸದರಾಗಿದ್ದರು. ಆದರೆ ಅಲ್ಲಿ ಫಲಿತಾಂಶ ಅವರಿಗೆ ತದ್ವಿರುದ್ಧವಾಯಿತು.
ಪ್ರತಿಪಕ್ಷಗಳಲ್ಲಿ ನರೇಂದ್ರ ಮೋದಿಯವರಂಥ ನಾಯಕರ ಕೊರತೆ ಇದೆ…
ನಮ್ಮಲ್ಲಿ ಹಲವು ಪ್ರಮುಖ ನಾಯಕರಿದ್ದಾರೆ. ಸೂಕ್ತ ಸಮಯದಲ್ಲಿ ಯಾರು ನೇತೃತ್ವ ವಹಿಸಬೇಕು ಎಂಬ ಬಗ್ಗೆ ತೀರ್ಮಾನಿಸುತ್ತೇವೆ.
– ಅಖೀಲೇಶ್ ಯಾದವ್, ಎಸ್ಪಿ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ