ಎಚ್ಡಿಕೆ-ಡಿಕೆಶಿ ಜೋಡೆತ್ತಲ್ಲ, ಗೂಳಿಗಳು
Team Udayavani, Mar 28, 2019, 6:08 AM IST
ಬಾಗಲಕೋಟೆ: ಹಾವು-ಮುಂಗುಸಿಯಂತಿದ್ದ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಈಗ ಒಂದಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂಬ ಭೀತಿ ಯಿಂದ ಒಂದಾಗಿದ್ದಾರೆ. ಅವೆರಡು ಜೋಡೆತ್ತುಗಳಲ್ಲ, ಗೂಳಿಗಳು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಮುಖ್ಯ ಮಂತ್ರಿ ಸ್ಥಾನ ಕಳೆದುಕೊಳ್ಳುತ್ತೇನೆಂದು ಕುಮಾರಸ್ವಾಮಿ, ಸಚಿವ ಸ್ಥಾನ ಕಳೆದುಕೊಂಡು ಭವಿಷ್ಯ ಮುಗಿಯುತ್ತದೆ ಎಂದು ಶಿವಕುಮಾರ ಮೇಲ್ನೋಟಕ್ಕೆ ಒಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಇವರು ತಮ್ಮ, ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಪರಸ್ಪರ ಗೆಲ್ಲಿಸಲು ಪ್ರಯತ್ನಿಸುವುದಿಲ್ಲ. ಚುನಾವಣೆ ಮುಗಿದ ತಕ್ಷಣ ಬಹಿರಂಗವಾಗಿ ಬಡಿದಾಡಿಕೊಳ್ಳುತ್ತಾರೆ. ಈ ಎರಡೂಗೂಳಿಗಳು ಪರಸ್ಪರ ಕೊಂಬುಗಳಿಂದ ತಿವಿದು ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡುತ್ತವೆ ಎಂದರು.
ಒಂದು ಕಡೆ ದೇವೇಗೌಡ, ಇನ್ನೊಂದು ಕಡೆ ಸಿದ್ದ ರಾಮಯ್ಯ ಇಬ್ಬರೂ ಧೃತರಾಷ್ಟ್ರರು. ಈಗ ಆಲಿಂಗನ ಮಾಡಿಕೊಂಡಿದ್ದಾರೆ. ಮುಂದೆ ಈ ಎರಡೂ ಪಕ್ಷಗಳು ನಿರ್ನಾಮವಾಗಲಿವೆ. ಇದರಲ್ಲಿ ಯಾವುದೇ ಅನುಮಾ ನವಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ದೇವೇಗೌಡರು ಸೋಲಿಸಿದರು ಎಂದು ಸಿದ್ದರಾಮಯ್ಯ ಹೇಳಿದ್ದರು. ಆ ಸೋಲಿನ ಸೇಡನ್ನು ಈಗ ಸಿದ್ದರಾಮಯ್ಯ ತೀರಿಸಿಕೊಳ್ಳಲಿದ್ದಾರೆ ಎಂದರು.