ಮಂಡ್ಯದಲ್ಲೇ ನನ್ನ ಸ್ಪರ್ಧೆ, ಬೇರೆಲ್ಲೂ ಇಲ್ಲ:ಸುಮಲತಾ
Team Udayavani, Mar 1, 2019, 1:26 AM IST
ನಾಗಮಂಗಲ: “ನಾನು ಚುನಾವಣೆಗೆ ಸ್ಪರ್ಧೆ ಗಿಳಿಯುವುದಾದರೆ ಅದು ಮಂಡ್ಯದಿಂದ ಮಾತ್ರ. ಬೇರೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆಗೆ ಇಳಿಯುವುದಿಲ್ಲ. ನನ್ನ ನಿರ್ಧಾರ ಅಚಲ’ ಎಂದು ಮಂಡ್ಯ ಕ್ಷೇತ್ರದ ಲೋಕಸಭಾ ಸ್ಪರ್ಧಾಕಾಂಕ್ಷಿ ಸುಮಲತಾ ಅಂಬರೀಶ್ ಪುನರುತ್ಛರಿಸಿದರು.
ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ, “ನನಗೆ ಯಾವುದೇ ಸ್ಥಾನದ ಮೇಲೆ ಆಸೆಯೂ ಇಲ್ಲ. ಆಸಕ್ತಿಯೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಸಿದ್ದೇನೆ. ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಜನರ ತೀರ್ಮಾನಕ್ಕೆ ಬದ್ಧ ಳಾಗುತ್ತೇನೆ. ಚುನಾವಣೆಗೆ ಸ್ಪರ್ಧಿಸುವ ವಿಷಯದಲ್ಲಿ ಪಕ್ಷದ ತೀರ್ಮಾನಕ್ಕಿಂತಲೂ ನನಗೆ ಜನಾಭಿಪ್ರಾಯವೇ ಮುಖ್ಯ’ ಎಂದರು. ಕಾಂಗ್ರೆಸ್ ಪಕ್ಷದ ಮೇಲೆ ನಮಗೆ ನೀಯತ್ತಿದೆ. ಏಕೆಂದರೆ, ಪಕ್ಷ ಅಂಬರೀಶ್ಗೆ ಒಮ್ಮೆ ಕೇಂದ್ರದಲ್ಲಿ ಸಚಿವ ಹುದ್ದೆ ಹಾಗೂ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಿತ್ತು. ಮೂರು ಬಾರಿ ಸಂಸದರಾ ಗುವುದಕ್ಕೆ ಅವಕಾಶ ಕಲ್ಪಿಸಿದೆ. ಹಾಗಾಗಿ ಆ ಪಕ್ಷದ ಮೇಲೆ ನಮಗೆ ಅಭಿಮಾನ, ಗೌರವ ಹಾಗೂ ನಿಷ್ಠೆ ಇದೆ’ ಎಂದರು.
“ಕೈ’ ನಾಯಕರಿಗೆ ಚಾಟಿ
ಕೆಲವು ಕಾಂಗ್ರೆಸ್ನಾಯಕರು ಮಂಡ್ಯದಿಂದ ಸ್ಪರ್ಧೆ ಮಾಡುವ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ, ನಾವು ಮೈತ್ರಿ ಧರ್ಮ ಪಾಲಿಸಬೇಕಿದೆ. ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕಿದೆ. ಮಂಡ್ಯವೇ ನಿಮಗೆ ಏಕೆ ಬೇಕು?. ಬೆಂಗಳೂರು ಉತ್ತರ ಅಥವಾ ದಕ್ಷಿಣ ಸೇರಿದಂತೆ ಬೇರೆ ಯಾವ ಕ್ಷೇತ್ರದಿಂದಲಾದರೂ ಸ್ಪರ್ಧಿಸಿ ಎನ್ನುತ್ತಿದ್ದಾರೆ. ಅಲ್ಲದೆ, ನೀವು ಚುನಾವಣೆಗೆ ಸ್ಪರ್ಧೆ ಮಾಡುವುದೇ ಬೇಡ. ನಿಮಗೆ ಯಾವುದಾದರೂ ಸ್ಥಾನ ನೀಡುತ್ತೇವೆ ಎಂದೆಲ್ಲಾ ಭರವಸೆ ನೀಡುತ್ತಿದ್ದಾರೆ. ಆದರೆ, ನಾನು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾವು ಇಷ್ಟು ದಿನ ಅಂಬರೀಶಣ್ಣನ ಕೈ ಹಿಡಿದಿದ್ದೇವು. ಈಗ ನೀವು ನಮ್ಮ ಕೈ ಬಿಡಬೇಡಿ ಎಂದು ಇಲ್ಲಿನ ಜನ ಹೇಳುವಾಗ ಚುನಾವಣೆಗೆ ಸ್ಪರ್ಧಿಸದಿದ್ದರೆ ನಮಗೆ ಮಾನ ವೀಯತೆ ಇರುವುದಿಲ್ಲ. ಹಾಗಾಗಿ, ಚುನಾವಣೆಗೆ ಸ್ಪರ್ಧಿಸುವುದಾದರೆ ಮಂಡ್ಯದಿಂದ ಮಾತ್ರ ಎಂದು ಹೇಳಿ ಬಂದಿದ್ದೇನೆ ಎಂದರು.
ದುರಾಸೆ ಇಲ್ಲ
“ನಾನು ಯಾವುದೇ ದುರಾಸೆ ಇಟ್ಟುಕೊಂಡು ಚುನಾವಣೆಗೆ ಬಂದಿಲ್ಲ. ದುರಾಸೆ ಇದ್ದಿದ್ದರೆ ಅಂಬರೀಶ್ ಏನೇನೋ ಮಾಡುತ್ತಿದ್ದರು. ಮಂಡ್ಯ ಜನರ ಋಣ ತೀರಿಸಲು ನಾನು ಹಾಗೂ ನನ್ನ ಮಗ ಬಂದಿದ್ದೇವೆ. ನಮ್ಮನ್ನು ಬೆಂಬಲಿಸಿ, ಆಶೀರ್ವದಿಸಿ’ ಎಂದು ಭಾವನಾತ್ಮಕವಾಗಿ ನುಡಿದರು.