ನನ್ನ ಕಂಡರೆ ಜೆಡಿಎಸ್ನವರಿಗೇಕೆ ಭಯ?: ಸುಮಲತಾ
Team Udayavani, Mar 17, 2019, 1:08 AM IST
ಕೆ.ಆರ್.ನಗರ: “ನನ್ನ ಕಂಡರೆ ಜೆಡಿಎಸ್ನವರಿಗೆಕೆ ಭಯ’ ಎಂದು ಸುಮಲತಾ ಅಂಬರೀಶ್ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶನಿವಾರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. “ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಶಾಸಕರಿದ್ದಾರೆ. ಮೂವರು ಸಚಿವರು, ಮೂವರು ವಿಧಾನಪರಿಷತ್ ಸದಸ್ಯರು ಇದ್ದಾರೆ. ಸರ್ಕಾರ ಸಹ ಅವರದ್ದೇ ಇದೆ. ಆದರೂ, ನನ್ನನ್ನು ಕಂಡರೆ ಜೆಡಿಎಸ್ ಪಕ್ಷದವರಿಗೆ ಏಕೆ ಭಯ ಎಂದು ಪ್ರಶ್ನಿಸಿದರು. ಆ ಮೂಲಕ, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಚಿವರೊಬ್ಬರು ಮೈತ್ರಿ ಧರ್ಮ ಪಾಲಿಸುವಂತೆ ಎಚ್ಚರಿಕೆ ನೀಡುವ ಪರಿಸ್ಥಿತಿ ಏಕೆ ಬಂದಿದೆ ಎಂದು ಪರೋಕ್ಷವಾಗಿ ಸಚಿವ ಸಾ.ರಾ.ಮಹೇಶ್ಗೆ ಟಾಂಗ್ ನೀಡಿದರು.
“ನಾನು ಕಾಂಗ್ರೆಸ್, ಜೆಡಿಎಸ್ ಮತ್ತು ಇತರ ಯಾವ ಪಕ್ಷಕ್ಕೂ ಸೇರಿದವಳಲ್ಲ. ಹಾಗಾಗಿ, ನನ್ನ ರಾಜಕೀಯ ನಿರ್ಧಾರವನ್ನು ಮಾ.18ರಂದು ಪ್ರಕಟಿಸುತ್ತೇನೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ
ಚರ್ಚಿಸಿರುವುದಕ್ಕೆ ಯಾವುದೇ ಅರ್ಥ ಕಲ್ಪಿಸುವುದು ಬೇಡ. ಅವರು ಮಂಡ್ಯ ಜಿಲ್ಲೆಯ ವರಿಷ್ಠ ನಾಯಕರಾಗಿದ್ದು, ರಾಜಕೀಯ ಸಲಹೆಪಡೆಯಲು ಭೇಟಿ ಮಾಡಿದ್ದೆ ಎಂದರು.