ಕಾಸರಗೋಡು: ಬತ್ತಿದ ಭತ್ತದ ಗದ್ದೆ; ಕೃಷಿಕರು ಕಂಗಾಲು
Team Udayavani, Jul 7, 2019, 5:26 AM IST
ಬದಿಯಡ್ಕ: ತಡವಾಗಿ ಪ್ರಾರಂಭವಾದ ಮುಂಗಾರುಮಳೆ ರೈತರಲ್ಲಿ ಮೂಡಿಸಿದ ನಿರೀಕ್ಷೆ ಇಂದು ಬಿಸಿಲಲ್ಲಿ ಒಣಗಿ ಹೋಗುತ್ತಿದ್ದು ನಿರೀಕ್ಷೆಯ ಕಂಗಳಲ್ಲಿ ನಿರಾಸೆಯ ಕಣ್ಣೀರು ಸುರಿಯುವಂತೆ ಮಾಡಿದೆ. ಮಳೆ ಪ್ರಾರಂಭವಾದಂತೆ ಉತ್ತಮ ಮಳೆ-ಬೆಳೆಯ ನಿರೀಕ್ಷೆಯೊಂದಿಗೆ ಭತ್ತ ಕೃಷಿ ಆರಂಭಿಸಿದ ಕೃಷಿಕರು ನೀರಿಲ್ಲದೆ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ. ಬೆಳೆದು ನಿಂತ ಭತ್ತದ ಹುಲ್ಲು(ನೇಜಿ) ಗಳನ್ನು ತೆಗೆದು ಗದ್ದೆಯಲ್ಲಿ ನಾಟಿ ಮಾಡುವ ಸಮಯವಾದರೂ ನೀರಿನ ಕೊರತೆಯಿಂದ ಗದ್ದೆಯ ಉಳುಮೆ ಹಾಗೂ ನಾಟಿ ಕೆಲಸ ಅರ್ಧದಲ್ಲೇ ಉಳಿದಿದ್ದು ಮಳೆ ಪ್ರಾರಂಭವಾದರೆ ಮಾತ್ರ ಇದನ್ನು ಮುಂದುವರಿಸಲು ಸಾಧ್ಯ.
ಮೋಟಾರ್ ಬಳಸಿ ಗದ್ದೆ ಕೃಷಿ
ನೀರ್ಚಾಲು, ಏಣಿಯರ್ಪು ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿ ನೇಜಿ ನೆಡುವ ಕೆಲಸ ಬಹುತೇಕ ಪೂರ್ತಿಗೊಂಡಿದೆ. ಮಳೆ ಇಲ್ಲದಿದ್ದರೂ ಮೋಟಾರ್ ಬಳಸಿ ಗದ್ದೆಗೆ ನೀರು ಹಾಯಿಸಿ ಕೃಷಿಕೆಲಸವನ್ನು ಮಾಡಲಾಗಿದೆ. ಆದರೆ ಬೇಳ, ಕೋಡಿಂಗಾರು, ವಿದ್ಯಾಗಿರಿ ಸೇರಿದಂತೆ ಜಿಲ್ಲೆಯಾದ್ಯಂತ ಮೋಟಾರ್ ಬಳಸಿ ನೀರು ಹಾಯಿಸಿ ಕೆಲಸ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಸುಡುಬಿಸಿಲ ಬೇಗೆ
ರಾತ್ರಿ ಕಾಲದಲ್ಲಿ ಸುರಿಯುವ ಸಣ್ಣ ಪುಟ್ಟ ಮಳೆಯ ನೀರನ್ನು ಹಗಲಿನ ಸುಡುಬಿಸಿಲು ಸಂಪೂರ್ಣವಾಗಿ ಹೀರಿಬಿಡುತ್ತದೆ. ಆದುದರಿಂದ ಗದ್ದೆಗಳಿಗೆ ನೀರು ಹಾಯಿಸುವುದು ಒಂದು ಸವಾಲಾಗಿದೆ.
ಎಷ್ಟೇ ನೀರು ಹಾಯಿಸಿದರೂ ಮಣ್ಣು ಹೀರಿಕೊಳ್ಳುವ ಕಾರಣ ಹೆಚ್ಚು ಹೆಚ್ಚು ನೀರು ಹಾಯಿಸಬೇಕಾದ ಅಗತ್ಯವಿದೆ. ಇದು ಹೆಚ್ಚು ಖರ್ಚಿಗೂ ದಾರಿಯಾಗುತ್ತಿದ್ದು ಈ ಬಾರಿ ಬೆಳೆಯಲ್ಲಿ ಉಂಟಾಗಬಹುದಾದ ಕುಸಿತದ ಭಯವಿರುವ ಕೃಷಿಕರಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ.
ಅಕ್ಕಿ ಬೆಲೆ ಹೆಚ್ಚಬಹುದೇ?
ಈಗಾಗಲೇ ಅಕ್ಕಿ ಬೆಲೆ ಗಗನಕ್ಕೇರಿದೆ. ಈ ಬಾರಿಯ ಮಳೆ-ಬೆಳೆ ಸಮಸ್ಯೆ ಮುಂದಿನ ದಿನಗಳಲ್ಲಿ ಬಡವರ ಅನ್ನಕ್ಕೆ ಕಲ್ಲು ಹಾಕಲಿದೆಯೇ ಎಂಬ ಸಂದೇಹ ಮೂಡುತ್ತದೆ,
ಮಳೆ ಬಂದರೆ ಭತ್ತ ಬೆಳೆ
ಜಿಲ್ಲೆಯ ಇನ್ನು ಕೆಲವು ಭಾಗಗಳಲ್ಲಿ ಭತ್ತದ ಕೃಷಿ ಇನ್ನೂ ಆರಂಭವಾಗಿಲ್ಲ. ಉತ್ತಮ ಮಳೆ ಬಂದ ಅನಂತರವೇ ನೇಜಿ ಹಾಕುವ, ಬಿತ್ತನೆ ಮಾಡುವ ಕೆಲಸ ಆರಂಭಿಸುವುದಾಗಿ ನಿರ್ಧರಿಸಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಕಾಲದೊಂದಿಗೆ ಬದಲಾಗುವ ಮಳೆ ಬೆಳೆ ಜನಸಾಮಾನ್ಯನ ನಿತ್ಯ ಬದುಕಿನ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ.