ಮದುವೆ ಆಮಂತ್ರಣ ನೀಡಲು ಗೆಳತಿ ಮನೆಗೆ ಹೋಗಿ ಚಿನ್ನ ಕದ್ದು ಸಿಕ್ಕಿಬಿದ್ದಳು
Team Udayavani, Dec 16, 2021, 9:00 PM IST
ಬೆಂಗಳೂರು: ತನ್ನ ಸಹೋದರನ ಮದುವೆ ಆಮಂತ್ರಣಪತ್ರ ನೀಡಲು ಸ್ನೇಹಿತೆಯ ಮನೆಗೆ ಹೋಗಿದ್ದ ಯುವತಿಯೊಬ್ಬಳು ಅದೇ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಜೆಜೆ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ದೇವರಜೀವನಹಳ್ಳಿ ನಿವಾಸಿ ಅಜ್ರಾ ಸಿದ್ದಿಕ್ ಬಂಧಿತ ಆರೋಪಿ. ಪಾದರಾಯನಪುರದ ರೋಹಿನಾಜ್ ಎಂಬಾಕೆ ನೀಡಿದ ದೂರಿನ ಮೇರೆಗೆ ಆಕೆಯನ್ನು ಬಂಧಿಸಿ, 11 ಲಕ್ಷ ರೂ. ಮೌಲ್ಯದ 206 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?
ಆಜ್ರಾ ಸಿದ್ದಿಕ್ ಅವರ ಸಹೋದರನ ಮದುವೆ ನಿಶ್ಚಯವಾಗಿತ್ತು. ಹೀಗಾಗಿ, ಸ್ನೇಹಿತೆಯಾದ ರೋಹಿನಾಜ್ನನ್ನು ಮದುವೆಗೆ ಕರೆಯಲು ಡಿ. 14ರಂದು ಸ್ನೇಹಿತೆಯ ಮನೆಗೆ ಹೋಗಿದ್ದಳು. ಈ ವೇಳೆ ಋತುಸ್ರಾವವಾಗಿದೆ ಬಟ್ಟೆ ಬದಲಿಸಬೇಕು ಎಂದು ಸಿದ್ದಿಕ್ ಗೆಳತಿಯನ್ನು ಕೇಳುತ್ತಾಳೆ. ತನ್ನ ಬಟ್ಟೆಗಳು ಬೀರುವಿನಲ್ಲಿವೆ, ಯಾವುದು ಬೇಕು ಅದನ್ನು ತೆಗೆದುಕೊ ಎಂದು ರೂಮಿನಲ್ಲಿರುವ ಬೀರುವನ್ನು ರೋಹಿನಾಜ್ ತೋರಿಸುತ್ತಾಳೆ. ಬಟ್ಟೆ ತೆಗೆದುಕೊಳ್ಳುವಾಗ ಅಲ್ಲೇ ಇಟ್ಟಿದ್ದ 206 ಗ್ರಾಂ ಚಿನ್ನಾಭರಣ ನೋಡಿದ ಸಿದ್ದಿಕ್ ಅದನ್ನು ತೆಗೆದು ಬಚ್ಚಿಟ್ಟುಕೊಳ್ಳುತ್ತಾಳೆ. ಕೆಲ ಸಮಯ ಗೆಳತಿಯೊಂದಿಗೂ ಕಳೆದ ಬಳಿಕ ತನ್ನ ಮನೆಗೆ ಹೋಗುತ್ತಾಳೆ. ಮರುದಿನ ರೋಹಿನಾಜ್ಗೆ ವಿಷಯ ಗೊತ್ತಾಗಿ ಜೆಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ಸ್ನೇಹಿತೆ ಆಜ್ರಾ ಸಿದ್ದಿಕ್ ಮೇಲೆ ಅನುಮಾನವಿರುವದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಕದ್ದಿದ್ದ ಚಿನ್ನವನ್ನು ಆಜ್ರಾ ತನ್ನ ಪಕ್ಕದ ಮನೆಯ ನೀರಿನ ಟ್ಯಾಂಕ್ನಲ್ಲಿ ಬಚ್ಚಿಟ್ಟಿದ್ದಳು ಎಂದು ಹೇಳಲಾಗಿದೆ.
ಇದನ್ನೂ ಓದಿ : ನಂಜನಗೂಡು ಎರಡು ವರ್ಷದ ಮಗುವನ್ನು ಕೊಂದು, ತಾಯಿ ಆತ್ಮಹತ್ಯೆ ಶಂಕೆ