ಕೊರೊನಾ ಬೆನ್ನಿಗೆ ಎಚ್1ಎನ್1 : ವಾರದಲ್ಲಿ 50ಕ್ಕೂ ಹೆಚ್ಚು ಮಂದಿಗೆ ಸೋಂಕು
Team Udayavani, Mar 9, 2020, 6:55 AM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಶಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆಯೇ ಎಚ್1ಎನ್1 ಹಾವಳಿಯೂ ಹೆಚ್ಚುತ್ತಿದೆ. ರಾಜ್ಯದಲ್ಲಿ ಒಂದು ವಾರದಲ್ಲಿ 200 ಮಂದಿ ಶಂಕಿತ ಕೊರೊನಾ ಸೋಂಕು ಪೀಡಿತರಾಗಿದ್ದರೆ, ಮಾ. 1ರಿಂದ 6ರ ವರೆಗೆ 281 ಮಂದಿ ಶಂಕಿತರ ಪೈಕಿ 51 ಮಂದಿಗೆ ಎಚ್1ಎನ್1 ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರಿನಲ್ಲಿ ಎಚ್1ಎನ್1 ಹೆಚ್ಚಿದ್ದು, ಮಾ.1ರಿಂದ 6ರ ವರೆಗೆ 51 ಮಂದಿಯಲ್ಲಿ ದೃಢಪಟ್ಟಿದೆ.
ಸದ್ಯ ಎಲ್ಲೆಡೆ ಕೊರೊನಾ ಸೋಂಕು ವ್ಯಾಪಕವಾಗುತ್ತಿದ್ದು, ರಾಜ್ಯದಲ್ಲಿಯೂ ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಾ.1ರಿಂದ 8ರ ವರೆಗೆ 200ಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷಿಸಲಾಗಿದೆ.
ಕಾರಣವೇನು?
ಒಂದು ವಾರದಿಂದ ಬಿಸಿಲು ಮತ್ತು ಮಳೆ ವಾತಾವರಣ ಇರುವುದು ಸೋಂಕು ಹೆಚ್ಚಳಕ್ಕೆ ಕಾರಣ. ನಗರದ ಪ್ರದೇಶದಲ್ಲಿ ಜನದಟ್ಟಣೆ ಹೆಚ್ಚಿದ್ದು, ಸೋಂಕು ಪ್ರಸರಣ ವೇಗವಾಗುತ್ತದೆ. ರೋಗಿಗಳಲ್ಲಿ ಅಧಿಕ ಜ್ವರ, ಗಂಟಲು ನೋವು, ಉಸಿರಾಟ ಸಮಸ್ಯೆ ಕಾಣಿಸಿಕೊಂಡರೆ ವೈದ್ಯರು ಕೂಡಲೇ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸುತ್ತಾರೆ.
ಸರಕಾರಿ ಆಸ್ಪತ್ರೆಗಳಲ್ಲಿ ಎಚ್1ಎನ್1ಗೆ ಚಿಕಿತ್ಸೆ ಮತ್ತು ಎಲ್ಲ ರೀತಿಯ ಔಷಧೋಪಚಾರಗಳು ಉಚಿತವಾಗಿದ್ದು, ಸೋಂಕಿನ ಲಕ್ಷಣಗಳಿದ್ದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಈವರೆಗೆ ಎಚ್1ಎನ್1ನಿಂದ ಬೆಂಗಳೂರು ಗ್ರಾಮಾಂತರ, ದಾವಣಗೆರೆ, ತುಮಕೂರುಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಕೊರೊನಾ ಪೀಡಿತರ ಸಂಖ್ಯೆ 39ಕ್ಕೆ
ಹೊಸದಿಲ್ಲಿ: ದೇಶದ ಮೊದಲ ಕೊರೊನಾ ಪೀಡಿತಳನ್ನು ಯಶಸ್ವಿಯಾಗಿ ಗುಣಪಡಿಸಿದ ಕೇರಳಕ್ಕೆ ಮತ್ತೆ ಆಘಾತ ಎದುರಾಗಿದೆ. ರವಿವಾರ ಏಕಾಏಕಿ ಇಲ್ಲಿನ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶಾದ್ಯಂತ ಕೊರೊನಾ ಪೀಡಿತರ ಸಂಖ್ಯೆ 39ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ. ತೆಲಂಗಾಣದಲ್ಲೂ ಎರಡನೇ ವ್ಯಕ್ತಿಗೆ ಸೋಂಕು ತಗುಲಿದೆ ಎಂಬ ಸುದ್ದಿ ಹಬ್ಬಿದೆಯಾದರೂ ಅದು ದೃಢಪಟ್ಟಿಲ್ಲ.