ಪಿಎಸ್ಐ ನೇಮಕ ಅಕ್ರಮ: ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ
Team Udayavani, Apr 19, 2022, 6:00 AM IST
545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪದ ಪ್ರಕರಣದ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿದ್ದು ಇದು ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯೂ ಆಗಿದೆ.
ಅಕ್ರಮ ಪ್ರಕರಣ ಬೆಳಕಿಗೆ ಬಂದ ಅನಂತರ ರಾಜ್ಯ ಸರಕಾರ ತನಿಖೆಗೆ ವಹಿಸಿ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳ ಪೂರ್ವಾಪರ ಪರಿಶೀಲಿಸಲು ಆದೇಶಿಸಿರುವುದು ಒಂದು ಕಡೆ. ಇದರ ನಡುವೆ, 402 ಪಿಎಸ್ಐ ನೇಮಕಾತಿ ಸಂಬಂಧ ಅರ್ಜಿ ಸಲ್ಲಿಸಿರುವವರು ಲಿಖೀತ ಪರೀಕ್ಷೆಗಾಗಿ ಕಾಯುತ್ತಿದ್ದಾರೆ. 545 ಪಿಎಸ್ಐ ನೇಮಕಾತಿ ಪ್ರಕರಣದ ಅಕ್ರಮ ಆರೋಪದ ತನಿಖೆ ಮುಗಿಯುವವರೆಗೂ ಲಿಖೀತ ಪರೀಕ್ಷೆಯೂ ಸಾಧ್ಯವಿಲ್ಲದಂತಾಗಿರುವುದು ಮತ್ತೂಂದು ಕಡೆ.
ಆದರೆ, ನೇಮಕಾತಿ ಪ್ರಕ್ರಿಯೆಗಳಲ್ಲಿ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸರಕಾರದ ಮೇಲಿದೆ. ಏಕೆಂದರೆ, ಇದೊಂದು ಅಪಾಯಕಾರಿ ಬೆಳವಣಿಗೆ. ಇದಕ್ಕೆ ಅಂತ್ಯ ಹಾಡದಿದ್ದರೆ ಬೇರೆ ಬೇರೆ ರೀತಿಯ ಸಂದೇಶ ರವಾನೆಯಾಗುತ್ತದೆ.
ಲಕ್ಷಾಂತರ ವಿದ್ಯಾರ್ಥಿಗಳು ಉದ್ಯೋಗ ಅರಸಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿರುತ್ತಾರೆ. ಜೀವನದಲ್ಲಿ ಉದ್ಯೋಗ ಎಂಬುದು ಸಿಕ್ಕರೆ ಬದುಕಿಗೆ ನೆಲೆ ಸಿಕ್ಕಂತೆ ಎಂಬ ಕನಸು ಕಟ್ಟಿಕೊಂಡಿರುತ್ತಾರೆ. ಪರೀಕ್ಷೆ ಬರೆಯಲು ಹಗಲು ರಾತ್ರಿ ಶ್ರಮ ಪಟ್ಟಿರುತ್ತಾರೆ.ಲಕ್ಷಾಂತರ ಯುವಕರ ಬದುಕು ಇದರಲ್ಲಿದೆ. ತಮ್ಮ ಮಕ್ಕಳಿಗೆ ಓದಿಸಿ, ಸರಕಾರಿ ಕೆಲಸ ಸಿಗಬೇಕು ಎಂದು ಪೋಷಕರು ಹಗಳಿರುಳು ಶ್ರಮಿಸುತ್ತಾರೆ. ಹೀಗಿರುವಾಗ ಅಕ್ರಮಗಳು ನಡೆದು ಅರ್ಹರಿಗೆ ಉದ್ಯೋಗ ಕೈ ತಪ್ಪಿದರೆ ಅದು ಆಡಳಿತ ವೈಫಲ್ಯವೇ ಸರಿ. ಮೊದಲ ಹಂತದ ನೇಮಕಾತಿ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮ ನಡೆದಿರುವ ಮಾಹಿತಿ ಇದ್ದು ಎರಡನೇ ಹಂತದ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿ ಎಂದು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.
ರಾಜ್ಯ ಸರಕಾರವು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪರೀಕ್ಷಾ ವ್ಯವಸ್ಥೆ ಬಿಗಿಗೊಳಿಸಬೇಕು. ಎಂತಹ ಪರಿಸ್ಥಿತಿಯಲ್ಲೂ ಎಚ್ಚರತಪ್ಪಬಾರದು. ಇಲ್ಲವಾದರೆ ಸರಕಾರಕ್ಕೂ ಕಳಂಕ, ಪರೀಕ್ಷಾ ವ್ಯವಸ್ಥೆಗೂ ಕಳಂಕ ತಪ್ಪಿದ್ದಲ್ಲ.
ಪ್ರಸ್ತುತ 545 ಪಿಎಸ್ಐ ನೇಮಕಾತಿ ಅಕ್ರಮಗಳ ಆರೋಪಗಳ ಕುರಿತು ನಡೆಸುತ್ತಿರುವ ತನಿಖೆ ನಿಷ್ಪಕ್ಷಪಾತವಾಗಿ ಮಾಡಬೇಕು. ಯಾವ ಹಂತದಲ್ಲಿ ತಪ್ಪು ನಡೆದಿದ್ದರೂ ಪತ್ತೆ ಹಚ್ಚಿ ಅರ್ಹರಿಗೆ ಉದ್ಯೋಗ ಸಿಗುವಂತೆ ಮಾಡಬೇಕು. ಆಗ ಮಾತ್ರ ನಂಬಿಕೆ ಬರಲು ಸಾಧ್ಯ. ನೇಮಕಾತಿಗಳ ಮೇಲೆಯೇ ಅಪನಂಬಿಕೆ, ಅನುಮಾನ ಪ್ರಾರಂಭವಾದರೆ ಇಡೀ ವ್ಯವಸ್ಥೆ ವಿರುದ್ಧ ಅಸಮಾಧಾನ ಸ್ಫೋಟಗೊಳ್ಳುತ್ತದೆ. ಅದು ಇತರೆ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹೀಗಾಗಿ, ಸರಕಾರ ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಸಮಗ್ರ ತನಿಖೆ ನಡೆಸಿ ತಪ್ಪು ಆಗಿದ್ದರೆ ಯಾರೇ ಅದರ ಹಿಂದಿದ್ದರೂ ಕಠಿನ ಶಿಕ್ಷೆಯಾಗುವಂತೆ ಮಾಡಬೇಕಾಗಿದೆ.
40 ಪರ್ಸೆಂಟ್ ಭ್ರಷ್ಟಾಚಾರ ಆರೋಪವನ್ನೇ ಅಸ್ತ್ರ ಮಾಡಿಕೊಂಡಿರುವ ವಿಪಕ್ಷಗಳು ಸರಕಾರದ ಮೇಲೆ ಪಿಎಸ್ಐ ನೇಮಕಾತಿ ಅಕ್ರಮ ಕುರಿತು ಮುಗಿಬೀಳುತ್ತಿವೆ. ಇಂತಹ ಸಂದರ್ಭದಲ್ಲಿ ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ಅರ್ಹರಿಗೆ ಅನ್ಯಾಯವಾಗದಂತೆ ನ್ಯಾಯ ಕಲ್ಪಿಸಬೇಕಾಗಿದೆ.