ಒಲಿಂಪಿಕ್ಸ್ ಅರ್ಹತೆಗೆ ಸೈನಾ, ಶ್ರೀಕಾಂತ್ ಪ್ರಯತ್ನ
ಕೊರೊನಾ ಭೀತಿ ನಡುವೆ ಇಂದಿನಿಂದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಕೂಟ
Team Udayavani, Mar 10, 2020, 11:40 PM IST
ಬರ್ಮಿಂಗ್ಹ್ಯಾಮ್: ಕೊರೊನಾ ಭೀತಿಯ ನಡುವೆ ಭಾರತೀಯ ಬ್ಯಾಡ್ಮಿಂಟನ್ ತಾರೆಯರು ಬುಧವಾರದಿಂದ ಆರಂಭವಾಗುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಗೆಲುವಿಗಾಗಿ ಹೋರಾಡಲಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಭಾರತೀಯ ಅಭಿಯಾನದ ನೇತೃತ್ವ ವಹಿಸಲಿದ್ದಾರೆ. ಇದೇ ವೇಳೆ ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲು ಪ್ರಯತ್ನಿಸಲಿದ್ದಾರೆ.
ಕೊರೊನಾ ವೈರಸ್ನಿಂದಾಗಿ ಇಂಗ್ಲೆಂಡಿನಲ್ಲಿ ಈಗಾಗಲೇ ಐವರು ಮೃತಪಟ್ಟಿದ್ದು 300ಕ್ಕೂ ಹೆಚ್ಚಿನ ಮಂದಿಗೆ ಸೋಕು ತಗುಲಿದೆ. ಕೊರೊನಾ ಭೀತಿಯ ಮಧ್ಯೆ ಈ ಋತುವಿನ ಮೊದಲ ಸೂಪರ್ 1000 ಬ್ಯಾಡ್ಮಿಂಟನ್ ಕೂಟ ಸಂಘಟಿಸಲು ಸಿದ್ಧತೆಗಳು ನಡೆಯುತ್ತಿವೆ. ಕೊರೊನಾದಿಂದಾಗಿ ಜರ್ಮನಿ ಓಪನ್ ಸಹಿತ ಹಲವು ಕೂಟಗಳು ಮುಂದೂಡಲ್ಪಟ್ಟಿವೆ. ಇದರಿಂದಾಗಿ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವ ನಿಟ್ಟಿನಲ್ಲಿ ಶಟ್ಲರ್ಗಳ ಸಿದ್ಧತೆಗೆ ದೊಡ್ಡ ಹೊಡೆತ ಬಿದ್ದಿದೆ.
ಹಿಂದೆ ಸರಿದ ಪ್ರಣಯ್
ಆರೋಗ್ಯದ ದೃಷ್ಟಿಯಿಂದ ಎಚ್.ಎಸ್. ಪ್ರಣಯ್ ಮತ್ತು ವಿಶ್ವದ 10ನೇ ರ್ಯಾಂಕಿನ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಸಹಿತ ಏಳು ಮಂದಿ ಭಾರತೀಯ ಆಟಗಾರರು ಆಲ್ ಇಂಗ್ಲೆಂಡ್ ಕೂಟದಿಂದ ಹಿಂದೆ ಸರಿದಿದ್ದಾರೆ.
ಸಿಂಧು ಅವರು ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವುದು ಬಹುತೇಕ ಖಚಿತವಾಗಿದೆ. 2019ರ ವಿಶ್ವ ಬ್ಯಾಡ್ಮಿಂಟನ್ ಕೂಟದಲ್ಲಿ ಚಿನ್ನ ಗೆದ್ದಿರುವ ಸಿಂಧು ಅವರು ಆಲ್ ಇಂಗ್ಲೆಂಡಿನಲ್ಲಿ ಭಾರತದ ಎರಡು ದಶಕಗಳ ಪ್ರಶಸ್ತಿ ಬರವನ್ನು ನೀಗಿಸಲು ಹೋರಾಡಲಿದ್ದಾರೆ. ಇದೇ ವೇಳೆ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಇಲ್ಲಿ ಗರಿಷ್ಠ ಅಂಕ ಗಳಿಸಿ ಎಪ್ರಿಲ್ 28ರ ಮೊದಲು ಅಗ್ರ 16ರ ಒಳಗಿನ ಸ್ಥಾನಕ್ಕೇರುವ ಗುರಿ ಇಟ್ಟುಕೊಂಡಿದ್ದಾರೆ. ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲು ಎಪ್ರಿಲ್ 28 ಕೊನೆಯ ದಿನವಾಗಿದೆ. ಆ ದಿನ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 16ನೇ ಸ್ಥಾನದ ಒಳಗಡೆ ಇರುವವರು ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲಿದ್ದಾರೆ.
ಮುಖ್ಯ ರಾಷ್ಟ್ರೀಯ ಕೋಚ್ ಪಿ. ಗೋಪಿಚಂದ್ 2001ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದಿದ್ದರು. ಆಬಳಿಕ ಭಾರತದ ಯಾವುದೇ ಆಟಗಾರ ಪ್ರಶಸ್ತಿ ಗೆದ್ದಿಲ್ಲ. 2018ರಲ್ಲಿ ಇಲ್ಲಿ ಸೆಮಿಫೈನಲ್ ತಲುಪಿದ್ದ ಸಿಂಧು ಅವರಿಂದ ಈ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮಾಡಲಾಗಿದೆ. ಅವರು ಅಮೆರಿಕದ ಬೈವೆನ್ ಝಾಂಗ್ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ಆದರೆ ಸೈನಾ ಅವರಿಗೆ ಮೊದಲ ಸುತ್ತಿನಲ್ಲಿಯೇ ಕಠಿನ ಎದುರಾಳಿ ಸಿಕ್ಕಿದ್ದಾರೆ. ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವ ನಿರೀಕ್ಷೆ ಇಟ್ಟುಕೊಂಡಿರುವ ಸೈನಾ ಮೊದಲ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಜಪಾನಿನ ಅಕಾನೆ ಯಮಗುಚಿ ಅವರ ಸವಾಲನ್ನು ಎದುರಿಸಬೇಕಾಗಿದೆ.