“ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಬೇಡ”: ವಜ್ರದೇಹಿ ಶ್ರೀ
ನೀಡಿದರೆ ದೇಶವ್ಯಾಪಿ ಸಾಧುಸಂತರಿಂದ ಹೋರಾಟ
Team Udayavani, Apr 29, 2023, 7:04 AM IST
ಮಂಗಳೂರು: ಸಲಿಂಗ ವಿವಾಹಕ್ಕೆ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಲು ಹೊರಟಿರುವುದು ಸರಿಯಲ್ಲ. ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದರೆ ದೇಶವ್ಯಾಪಿ ಸಾಧುಸಂತರು ಹೋರಾಟ ನಡೆಸಲಿದ್ದಾರೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ನಗರದ ವಿಹಿಂಪ ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಾಶ್ಚಿಮಾತ್ಯ ಚಿಂತನೆಗಳ ಮುಖಾಂತರ ಕೆಲವರು ಭಾರತದ ಸಂಸ್ಕೃತಿಯನ್ನು ನಾಶ ಮಾಡಲು ಸಲಿಂಗ ವಿವಾಹದಂತಹ ಬೇಡಿಕೆಗಳ ಯೋಜನೆ ರೂಪಿಸುತ್ತಿದ್ದಾರೆ. ಸಲಿಂಗ ವಿವಾಹ ಭಾರತದ ನಾಗರಿಕತೆ, ಸಂಸ್ಕೃತಿಗೆ ಮಾರಕವಾಗಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಈ ವಿಷಯದ ಕುರಿತು ವ್ಯಾಪಕ ಸಮಾಲೋಚನೆ ನಡೆಸಿ ಸಲಿಂಗ ವಿವಾಹ ಕಾನೂನುಬದ್ದಗೊಳಿಸಬಾರದು ಎಂಬುದಾಗಿ ನಾವು ವಿನಂತಿಸುತ್ತೇವೆ. ಎಂದು ವಜ್ರದೇಹಿ ಶ್ರೀಗಳು ಹೇಳಿದರು.
ಚಿಲಿಂಬಿ ಓಂ ಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಶಂಕರಪುರ ಈಶ್ವರ್ ಸಾಯಿ ಗುರೂಜಿ ಉಪಸ್ಥಿತರಿದ್ದರು.
ಪುತ್ತಿಲ ಅವರಿಗೆ ಬೆಂಬಲವಿಲ್ಲ
ಪುತ್ತೂರಿನಲ್ಲಿ ಹಿಂದುತ್ವದ ಹೆಸರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣೆಗೆ ಸ್ಪರ್ಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಬಿಜೆಪಿ ಹಿಂದುತ್ವದ ಪಕ್ಷವಾಗಿದೆ. ಪುತ್ತಿಲ ಅವರಿಗೆ ಹಿಂದುತ್ವ ಎಂಬುದು ಒಂದು ಪರಿಕಲ್ಪನೆ. ನಮಗೆ ಹಿಂದುತ್ವ ಎಂಬುದು ಸಿದ್ದಾಂತ ಹಾಗೂ ಉಸಿರಾಗಿದೆ. ಹಾಗಾಗಿ ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.