ದ್ರವ್ಯಕಲಶ ಮಹೋತ್ಸವ ಸ್ವಾಗತ ಸಮಿತಿ ರಚನೆ ಸಭೆ
Team Udayavani, May 16, 2019, 6:20 AM IST
ಕಾಸರಗೋಡು: ಮುಳಿಯಾರು ಶ್ರೀ ಸುಬ್ರಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಮೇ 23 ರಿಂದ 28 ರ ವರೆಗೆ ದ್ರವ್ಯಕಲಶ ಮಹೋತ್ಸವವು ವೇ|ಮೂ|ಬ್ರಹ್ಮಶ್ರೀ ಅರವತ್ ದಾಮೋದರನ್ ತಂತ್ರಿಯವರ ನೇತೃತ್ವದಲ್ಲಿ ಪಾರಂಪರ್ಯ ಆಡಳಿತ ಮೊಕ್ತೇಸರರಾದ ಎನ್.ಸುಬ್ರಾಯ ಬಳ್ಳುಳ್ಳಾಯ ಅವರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.ಸ್ವಾಗತ ಸಮಿತಿ ರಚನೆ ಸಭೆಯು ಕೋಟೂರಿನಲ್ಲಿ ಜರಗಿತು.
ಮೇ 23 ರಂದು ಬೆಳಗ್ಗೆ 9 ಗಂಟೆಗೆ ಕೋಟೂರು ಶ್ರೀ ಕಾರ್ತಿಕೇಯ ಭಜನಾ ಮಂದಿರದಿಂದ ಚೆಂಡೆ ವಾದ್ಯ ಘೋಷಗಳೊಂದಿಗೆ ವೈಭವಯುಕ್ತವಾಗಿ ಉಗ್ರಾಣ ತುಂಬಿಸುವ ಶೋಭಾಯಾತ್ರೆಯು ಶ್ರೀ ಕ್ಷೇತ್ರ ಸನ್ನಿಧಿಗೆ ಸಾಗಲಿದೆ.
ಸೋಮಶೇಖರ ಬಳ್ಳುಳ್ಳಾಯ ಅವರು ಅಧ್ಯಕ್ಷತೆ ವಹಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ಗೋಪಾಲನ್ ಕೋಟೂರು, ಗೀತಾ ಗೋಪಾಲನ್ ಕೋಟೂರು ಅವರು ಕಾರ್ಯಕ್ರಮದ ಯಶಸ್ವಿಗೆ ಮಾಹಿತಿಗಳನ್ನಿತ್ತರು.
ಗೋವಿಂದ ಬಳ್ಳಮೂಲೆ ಅವರು ದ್ರವ್ಯಕಲಶ ಮಹೋತ್ಸವ, ಪೂರ್ಣ ಕುಂಭ ಸ್ವಾಗತ, ಉಗ್ರಾಣ ತುಂಬಿಸುವ ಶೋಭಾಯಾತ್ರೆ ಮೊದಲಾದ ಕಾರ್ಯಕ್ರಮಗಳ ಕುರಿತಾಗಿ ಸಮಗ್ರ ಮಾಹಿತಿಗಳನ್ನಿತ್ತರು. ಮಾತೃ ಸಮಿತಿಯ ಸಂಚಾಲಕಿ ಅಂಬಿಕಾ ಪಾತನಡ್ಕ ಶೋಭಾಯಾತ್ರೆಯ ವಿಧಾನದ ಬಗ್ಗೆ ವಿವರಣೆಗಳನ್ನಿತ್ತರು. ಬಾಲಕೃಷ್ಣ ಕೋಟೂರು ವಂದಿಸಿದರು.