ಕಾಸರಗೋಡು: ಹೊಸ ಪ್ರಕರಣವಿಲ್ಲ
19 ಮಂದಿ ಗುಣಮುಖ
Team Udayavani, Apr 21, 2020, 9:44 AM IST
ಕಾಸರಗೋಡು: ಕೋವಿಡ್ ಸೋಂಕಿತರನ್ನು ಗುಣಪಡಿಸುವಲ್ಲಿ ದಾಖಲೆ ಸೃಷ್ಟಿಸಿರುವ ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಮತ್ತೆ 19 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಎ. 20ರಂದು ಹೊಸ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 169 ಮಂದಿಗೆ ಸೋಂಕು ಬಾಧಿಸಿದ್ದು, 142 ಮಂದಿ ಗುಣಮುಖರಾಗಿದ್ದಾರೆ. 27 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 15 ಮಂದಿ ಕಾಸರಗೋಡು ಜನರಲ್ ಆಸ್ಪತ್ರೆಯಿಂದ, ಇಬ್ಬರು ಪರಿಯಾರಂ ಮೆಡಿಕಲ್ ಕಾಲೇಜಿನಿಂದ, ಇಬ್ಬರು ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಗೊಂಡವರು.
4,754 ಮಂದಿ ನಿಗಾದಲ್ಲಿ
ಜಿಲ್ಲೆಯಲ್ಲಿ 4,754 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 4,700 ಮಂದಿ, ಆಸ್ಪತ್ರೆಗಳಲ್ಲಿ 54 ಮಂದಿ ನಿಗಾದಲ್ಲಿದ್ದಾರೆ. 440 ಮಂದಿ ಅವಧಿ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ 3,150 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 2,495 ಮಂದಿಯ ವರದಿ ನೆಗೆಟಿವ್ ಬಂದಿವೆ. 369 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕಣ್ಣೂರಿನಲ್ಲಿ ಒಂದೇ ದಿನ 6 ಮಂದಿಗೆ ಸೋಂಕು
ಕೇರಳ ರಾಜ್ಯದಲ್ಲಿ ಸೋಮವಾರ ಒಟ್ಟು 6 ಮಂದಿಗೆ ಕೋವಿಡ್ ಸೋಂಕು ಬಾಧಿಸಿದೆ. ಈ ಆರು ಮಂದಿಯೂ ಕಣ್ಣೂರು ಜಿಲ್ಲೆಯವರು. ಅವರಲ್ಲಿ ಐವರು ವಿದೇಶದಿಂದ ಬಂದವರು ಹಾಗೂ ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ರಾಜ್ಯದಲ್ಲಿ 21 ಮಂದಿ ಗುಣಮುಖರಾಗಿದ್ದು, ಅವರಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 19 ಮಂದಿ ಮತ್ತು ಆಲಪ್ಪುಳ ಜಿಲ್ಲೆಯಲ್ಲಿ ಇಬ್ಬರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈ ವರೆಗೆ ಒಟ್ಟು 408 ಮಂದಿಗೆ ಕೋವಿಡ್ ವೈರಸ್ ಸೋಂಕು ಬಾಧಿಸಿದ್ದು, ಈ ಪೈಕಿ 292 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ. 114 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 46,323 ಮಂದಿ ನಿಗಾದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
52 ಪ್ರಕರಣ ದಾಖಲು
ಲಾಕ್ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 52 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 60 ಮಂದಿಯನ್ನು ಬಂಧಿಸಲಾಗಿದ್ದು, 19 ವಾಹನ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು, ಕುಂಬಳೆ 1, ಕಾಸರಗೋಡು 8, ವಿದ್ಯಾನಗರ 5, ಬೇಡಗಂ 2, ಮೇಲ್ಪರಂಬ 10, ಬೇಕಲ 3, ನೀಲೇಶ್ವರ 1, ಚೀಮೇನಿ 1, ಚಂದೇರ 6, ವೆಳ್ಳರಿಕುಂಡ್ 2, ಚಿತ್ತಾರಿಕಲ್ 4, ರಾಜಪುರಂ 5, ಹೊಸದುರ್ಗ 2 ಪ್ರಕರಣಗಳು ದಾಖಲಿಸಲಾಗಿವೆ.
ಒಟ್ಟು 1,679 ಮಂದಿ ಸೆರೆ
ಈ ವರೆಗೆ ಜಿಲ್ಲೆಯಲ್ಲಿ 1,235 ಪ್ರಕರಣಗಳನ್ನು ದಾಖಲಿಸಿಕೊಳ್ಳ ಲಾಗಿದೆ. 1,679 ಮಂದಿಯನ್ನು ಬಂಧಿಸಲಾಗಿದ್ದು, 562 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ರೋಗಿಗೆ ಮುಂಬಯಿಯಿಂದ ಔಷಧ ತರಿಸಿಕೊಟ್ಟ ಜಿಲ್ಲಾಡಳಿತ
ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳ ಬಿರುಸಿನ ನಡುವೆಯೂ ಕಯ್ಯೂರು-ಚೀಮೇನಿ ನಿವಾಸಿ ಕ್ಯಾನ್ಸರ್ ರೋಗಿಯೊಬ್ಬರಿಗೆ ಮುಂಬಯಿಯಿಂದ ಔಷಧ ತರಿಸಿಕೊಡುವ ಮೂಲಕ ಕಾಸರಗೋಡು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕರ್ತವ್ಯ ಮೆರೆದಿವೆ. ಮುಂಬಯಿಯಿಂದ ತರಿಸಲಾಗುವ ಔಷಧವೊಂದೇ ಆ ರೋಗಿಯ ಬದುಕಿಗೆ ಆಸರೆಯಾಗಿತ್ತು. ಆದರೆ ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ಔಷಧ ರವಾನೆ ಅಸಾಧ್ಯವಾಗಿದ್ದು, ರೋಗಿ ಸಂಕಷ್ಟಕ್ಕೊಳಗಾಗಿದ್ದರು. ಈ ವಿಷಯ ತಿಳಿದ ತತ್ಕ್ಷಣ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರ ಆದೇಶದಂತೆ ಎಂಡೋಸಲ್ಫಾನ್ ಪುನರ್ವಸತಿ ಯೋಜನೆ ನೋಡಲ್ ಅಧಿಕಾರಿ ಡಾ| ರಾಮನ್ ಸ್ವಾತಿ ವಾಮನ್ ಅವರು ಔಷಧ ತರಿಸುವ ವ್ಯವಸ್ಥೆ ಮಾಡಿದ್ದರು.