ತಾಯ್ನಾಡಿಗೆ ಮರಳುವ ಆಸೆಯೇ ಕಮರಿತ್ತು
Team Udayavani, Jul 16, 2019, 5:24 AM IST
ಮಂಜೇಶ್ವರ : ಕೊಲ್ಲಿ ಉದ್ಯೋಗದ ಕನಸು ಕಂಡು ಕುವೈಟ್ಗೆ ಹೋಗಿದ್ದೆ. ಆದರೆ ಅಲ್ಲಿ ಉದ್ಯೋಗ ಕೊಡುವುದಾಗಿ ಹೇಳಿ ಕರೆದೊಯ್ದ ಕಂಪೆನಿ ನಮ್ಮನ್ನು ತಳ್ಳಿದ್ದು ಮಾತ್ರ ನರಕದ ಕೂಪಕ್ಕೆ. 6 ತಿಂಗಳಿಂದ ಉದ್ಯೋಗವಿ ಲ್ಲದೆ ಯಾತನೆ ಅನುಭವಿಸುತ್ತಿದ್ದಾಗ ತಾಯ್ನಾಡಿಗೆ ಮರಳುವ ಆಸೆಯೇ ಕಮರಿತ್ತು ಎನ್ನುತ್ತಾರೆ ಕುವೈಟ್ ಸಂಕಷ್ಟದಿಂದ ಪಾರಾಗಿ ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮಂಜೇಶ್ವರ ಸಮೀಪದ ಅಭಿಷೇಕ್ ಬಡಾಜೆ.
ಸೋಮವಾರ ತನ್ನನ್ನು ಭೇಟಿಯಾದ ಉದಯವಾಣಿ ಪ್ರತಿನಿಧಿಯೆದುರು ಅವರು ಕುವೈಟ್ನಲ್ಲಿ ಅನುಭವಿಸಿದ ಕರಾಳ ದಿನಗಳ ಅನುಭವಗಳನ್ನು ತೆರೆದಿಟ್ಟರು.
ಹೇಳಿದ ಕೆಲಸ ಕೊಡಲಿಲ್ಲ
ನನಗೆ ಬೈಕ್ ರೈಡರ್ ಉದ್ಯೋಗ ಕೊಡುವು ದಾಗಿ ಕಂಪೆನಿ ಭರವಸೆ ನೀಡಿತ್ತು. ಆದರೆ ಅಲ್ಲಿ ಬೈಕ್ ರೈಡರ್ ಕೆಲಸವಿರಲಿಲ್ಲ. ಎಲೆಕ್ಟ್ರಿಕಲ್ಸ್, ಮೆಕ್ಯಾನಿಕ್ನಂತಹ ಕೆಲಸ ಮಾಡಲು ಒತ್ತಾಯಿಸಿದರು. ನಮಗೆ ಅನ್ಯ ಉದ್ಯೋಗದ ಕೌಶಲ ತಿಳಿದಿರಲಿಲ್ಲ. 58 ಸಂತ್ರಸ್ತರ ಪೈಕಿ ಎಂಟು ಮಂದಿಗೆ ಮಾತ್ರ ಅಲ್ಲಿನ ಕಂಪೆನಿ ಕೆಲಸ ನೀಡಿತ್ತು. ಕುವೈಟ್ ಉದ್ಯೋಗದ ಕನಸು ಬಿತ್ತಿದ್ದ ಕಂಪೆನಿ ನಮ್ಮನ್ನು ವಂಚಿಸಿತ್ತು. ಅದು ತಿಳಿಯುವಷ್ಟರಲ್ಲಿ ಕಾಲ ಮಿಂಚಿತ್ತು. ಅಲ್ಲಿಂದ ಭಾರತಕ್ಕೆ ವಾಪಸಾಗಲು ಯೋಚಿಸುವಷ್ಟು ಶಕ್ತಿ, ನಂಬಿಕೆ, ವಿಶ್ವಾಸವೂ ನಮ್ಮಲ್ಲಿ ಇರಲಿಲ್ಲ.
ಸಂತ್ರಸ್ತರೆಲ್ಲ ಕೂಡಿ ವೀಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟೆವು. ಕೆಲವೇ ದಿನಗಳಲ್ಲಿ ಕರಾವಳಿಯ ಜನಸಾಮಾನ್ಯರು ಸೇರಿದಂತೆ ಜನಪ್ರತಿನಿಧಿಗಳಿಗೆ ನಮ್ಮ ಸಂಕಷ್ಟ ತಲುಪಿತು ಎಂದರು.
ದಂಡ ಕಟ್ಟದೆ ಬಿಡುಗಡೆಯಿಲ್ಲ
ದ.ಕ. ಜಿಲ್ಲೆಯ ಜನಪ್ರತಿನಿಧಿಗಳು, ಭಾರತದ ವಿದೇಶಾಂಗ ಸಚಿವಾಲಯ, ಕುವೈಟ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಎನ್ಆರ್ಐಗಳು ನಮ್ಮನ್ನು ಸಂಕಷ್ಟದಿಂದ ಪಾರು ಮಾಡಲು ಹರಸಾಹಸಪಟ್ಟರು.
ಕುವೈಟ್ನಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದ ಕಂಪೆನಿ ಭಾರತದ 58 ಮಂದಿಯ ಪೈಕಿ 15ಕ್ಕೂ ಹೆಚ್ಚು ಮಂದಿಗೆ 24 ಸಾವಿರದಿಂದ 40 ಸಾವಿರ ರೂ. ವರೆಗೆ ದಂಡ ಹಾಕಿದ್ದು, ಅದನ್ನು ಭರಿಸಿದ ಬಳಿಕವೇ ಪಾಸ್ಪೋರ್ಟ್ ವ್ಯವಸ್ಥೆಯಾಗಲಿದೆ ಎಂದು ಹೇಳಿದರು.
ಇನ್ನೂ ಹಲವರು ತಾಂತ್ರಿಕ ಸಮಸ್ಯೆಗಳಿಂದಾಗಿ ಅಲ್ಲೇ ಬಾಕಿಯಾಗಿದ್ದಾರೆ. ಸಮಸ್ಯೆಗಳೆಲ್ಲ ನೀಗಿ ಅವರೆಲ್ಲರೂ ಶೀಘ್ರದಲ್ಲಿಯೇ ಭಾರತಕ್ಕೆ ವಾಪಸಾಗಲಿ ಎನ್ನುವುದು ನನ್ನ ಹೆಬ್ಬಯಕೆ. ಕಾಸರಗೋಡು ಜಿಲ್ಲೆಯ ಬಾಯಾರು ನಿವಾಸಿ ಮನೋಜ್ ಮತ್ತು ಕುಂಜತ್ತೂರಿನ ನೌಶಾದ್ ನಮ್ಮ ಜತೆಯಲ್ಲೇ ಕುವೈಟ್ಗೆ ಬಂದಿದ್ದರು. ಅವರಿನ್ನು ಊರಿಗೆ ಮರಳಬೇಕಷ್ಟೆ ಎಂದರು.
ನಾವು ಅನುಭವಿಸುತ್ತಿರುವ ನರಕ ಯಾತನೆಯನ್ನು ಸಾಮಾಜಿಕ ಜಾಲತಾಣದಿಂದ ಅರಿತು ಕೊಂಡ ಕುವೈಟ್ ಭಾರತೀಯ ರಾಯಭಾರಿ ಕೆ. ಜೀವಸಾಗರ್, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಸಂಸದ ನಳಿನ್ ಕುಮಾರ್ ಕಟೀಲು, ಕುವೈಟ್ನಲ್ಲಿರುವ ಹಲವು ಭಾರತೀಯ ಸಂಘಟನೆಯವರು ಸಹಕಾರ ನೀಡಿದ್ದಾರೆ. ಅವರ ಸಹಕಾರವನ್ನು ಎಂದೂ ಮರೆಯುವಂತಿಲ್ಲ ಎಂದು ಅಭಿಷೇಕ್ ಬಡಾಜೆ ತಿಳಿಸಿದ್ದಾರೆ.
ಗುಟುಕು ನೀರಿಗೂ ಅಂಗಲಾಚಬೇಕಿತ್ತು
ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಮ್ಯಾನ್ ಪವರ್ ಕನ್ಸಲ್ಟೆೆನ್ಸಿ ಸಂಸ್ಥೆಯು ಕರಾವಳಿಯ 34 ಮಂದಿ ಸೇರಿದಂತೆ 58 ಮಂದಿಯನ್ನು ಉದ್ಯೋಗ ನಿಮಿತ್ತ ಮುಂಬಯಿಯ ಜುಹು ಚರ್ಚ್ ರಸ್ತೆಯ ಹಾಕ್ ಕನ್ಸಲ್ಟೆೆನ್ಸಿ ಪ್ರೈ.ಲಿ. ಸಂಸ್ಥೆಗೆ ಕಳುಹಿಸಿಕೊಟ್ಟಿತ್ತು. ಪ್ರತಿಯೊಬ್ಬರೂ 65 ಸಾವಿರ ರೂ.ಗಳನ್ನು ಕಂಪೆನಿಗೆ ಪಾವತಿಸಿದ್ದೆವು. ಅಲ್ಲಿಂದ ಜನವರಿ 7ರಂದು ಕುವೈಟ್ಗೆ
ಕಳುಹಿಸಿದರು. ಅಲ್ಲಿ ಕೆಲಸವಿಲ್ಲದೆ ಹಲವು ದಿನಗಳನ್ನು ಕೊಠಡಿಯಲ್ಲಿ ಕಳೆದೆವು. ಕೆಲವು ದಿನಗಳ ಬಳಿಕ ಕಂಪೆನಿಯು ಊಟ, ಉಪಾಹಾರ ನೀಡುವುದನ್ನೂ ನಿಲ್ಲಿಸಿತು. ಗುಟುಕು ನೀರಿಗೂ ಪರಿಪರಿಯಾಗಿ ಯಾಚಿಸುವ ದುಃಸ್ಥಿತಿ ನಮ್ಮದಾಗಿತ್ತು ಎಂದು ಕಣ್ಣೀರಾಗುತ್ತಾರೆ ಅಭಿಷೇಕ್. ವಿದೇಶದಲ್ಲಿ ಉದ್ಯೋಗ ಮಾಡಲು ಕೆಲವು ಪ್ರಮಾಣ ಪತ್ರಗಳ ಅಗತ್ಯವಿತ್ತು. ಸ್ಥಳೀಯ ಸಿವಿಲ್ ಐಡಿ, ಲೈಸನ್ಸ್, ಬೆರಳಚ್ಚು ಪ್ರಕ್ರಿಯೆ ನಡೆಸಬೇಕಾಗಿದ್ದರಿಂದ ಕುವೈಟ್ನಲ್ಲಿ ಉದ್ಯೋಗವು ಮರುಭೂಮಿಯ ಓಯಸಿಸ್ನಂತೆ ಭಾಸವಾಗುತ್ತಿತ್ತು ಎಂದು ಅವರು ತಮ್ಮ ಸಂಕಷ್ಟದ ದಿನಗಳನ್ನು ನೆನಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ