ಸಾರ್ವಜನಿಕ ಕೊಳವೆ ಬಾವಿಗೆ ಮಳೆಕೊಯ್ಲು ಮಾಡಿದ ಉಳಾಯಿಬೆಟ್ಟು ಗ್ರಾ.ಪಂ.
'ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Aug 17, 2019, 5:00 AM IST
ಮಹಾನಗರ: ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಸಾರ್ವಜನಿಕ ಕೊಳವೆ ಬಾವಿಯೊಂದನ್ನು ಮಳೆಕೊಯ್ಲು ಮೂಲಕ ಮರು ಪೂರಣಗೊಳಿಸಿ ಇತರೆ ಗ್ರಾಮ ಪಂಚಾಯತ್ಗಳಿಗೆ ಮಾದರಿಯಾಗಿದೆ.
ದೋಸ್ತಿ ಕಲಾಕಾರ ಫೆರ್ಮಾಯ್ ಹಾಗೂ ಉಳಾಯಿಬೆಟ್ಟು ಗ್ರಾ.ಪಂ. ಸಹಯೋಗದಲ್ಲಿ ಸಾರ್ವಜನಿಕ ಕೊಳವೆ ಬಾವಿಗೆ ಮಳೆಕೊಯ್ಲು ಘಟಕದ ಲೋಕಾರ್ಪಣೆ ಮತ್ತು ಮಾಹಿತಿ ಕಾರ್ಯಕ್ರಮ ಗುರುವಾರ ಪೆರ್ಮಂಕಿಯಲ್ಲಿ ನಡೆಯಿತು.
ಉಳಾಯಿಬೆಟ್ಟು ಗ್ರಾ.ಪಂ.ನ ಅಧ್ಯಕ್ಷ ವಸಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಳಾಯಿಬೆಟ್ಟು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗುರುಸಿದ್ಧ ಹುಬ್ಬಳ್ಳಿ, ಕಾರ್ಯದರ್ಶಿ ರಾಮಪ್ಪ, ಮಲ್ಲೂರು ಗ್ರಾ.ಪಂ.ನ ಕಾರ್ಯದರ್ಶಿ ರಾಬರ್ಟ್ ಫೆರ್ನಾಂಡಿಸ್, ರೇಶ್ಮಾ ಮೂಲ್ಯ, ಉದ್ಯಮಿ ಪ್ರಶಾಂತ್ ಕುಮಾರ್ ಸನಿಲ್, ಫ್ರಾನ್ಸಿಸ್ ಕುಟಿನ್ಹಾ ಆಗಮಿಸಿದ್ದರು.
ದಿಶಾ ಟ್ರಸ್ಟ್ ಕೈಕಂಬ ಇದರ ನಿರ್ದೇಶಕ ಸಿಲ್ವೆಸ್ಟರ್ ಡಿ’ಸೋಜಾ, ಯೋಜನೆಯ ಸಂಯೋಜಕ ಹೆನ್ರಿ ವಾಲ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಉಳಾಯಿಬೆಟ್ಟು ಗ್ರಾ.ಪಂ. ಕಾರ್ಯದರ್ಶಿ ರಾಮಪ್ಪ ಕಾರ್ಯಾಗಾರದ ಸಮಗ್ರ ಮಾಹಿತಿಯನ್ನು ನೀಡಿದರು. ದೋಸ್ತಿ ಕಲಾಕಾರ್ ಸಂಘದ ಅಧ್ಯಕ್ಷೆ ಪ್ರೀತಿ ಸಲ್ಡಾನ್ಹಾ ಸ್ವಾಗತಸಿದರು.
ಸಂಘದ ಸ್ಥಾಪಕಾಧ್ಯಕ್ಷ ಸಿಲ್ವೆಸ್ಟರ್ ಲೋಬೋ ವಂದಿಸಿದರು. ಮಿನೊಲ್ ಬ್ರಾಗ್ಸ್ ನಿರೂಪಿಸಿದರು.
ನೀರಿನ ಮಟ್ಟ ಹೆಚ್ಚಳವಾಗಿದೆ
ಎನ್ಐಟಿಕೆ ಎಂಜಿನಿಯರಿಂಗ್ ಕಾಲೇಜು ಹಿಂಭಾಗದ ನಿವಾಸಿ ಶಿಕ್ಷಕರಾದ ಮನೋಹರ ಭಂಡಾರಿ ಅವರು ತಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ. ಜೂನ್ನಲ್ಲಿ ಮಳೆಕೊಯ್ಲು ಅಳವಡಿಕೆ ಮಾಡಿದ್ದು, ಪ್ರಸ್ತುತ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದನ್ನು ಮನೆಮಂದಿ ಗಮನಿಸಿದ್ದಾರೆ.
ಮನೋಹರ್ ಭಂಡಾರಿ ಅವರ ಮನೆಯ ಬಾವಿಯಲ್ಲಿ ಬೇಸಗೆಯಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೀರಿಗೆ ಅಭಾವ ಎದುರಾಗದಿರಲಿ ಎಂದು ಮುನ್ನೆಚ್ಚರಿಕೆಯಾಗಿ ಅವರು ಮಳೆಕೊಯ್ಲು ಮಾಡಿಕೊಂಡಿದ್ದಾರೆ. ಮಳೆಕೊಯ್ಲು ಅಳವಡಿಸಿದ ಅನಂತರ ಬಾವಿಯಲ್ಲಿ ನೀರಿನ ಮಟ್ಟವೂ ಹೆಚ್ಚಾಗಿದೆ ಎನ್ನುತ್ತಾರೆ ಮನೋಹರ್ ಭಂಡಾರಿ.