ಉಕ್ಕು ಸಚಿವಾಲಯ: ಕಾರ್ಮಿಕ ಸಂಘದ ಪ್ರತಿನಿಧಿಗಳ ಸಭೆ
Team Udayavani, Jul 28, 2018, 12:35 PM IST
ಮಹಾನಗರ : ಉಕ್ಕು ಸಚಿವಾಲಯದ ವ್ಯಾಪ್ತಿಯಡಿ ಬರುವ ಉದ್ಯಮಗಳ ಕಾರ್ಮಿಕ ಸಂಘದ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತೀಚೆಗೆ ಕೇಂದ್ರ ಉಕ್ಕು ಸಚಿವ ಚೌದುರಿ ಬಿರೇಂದ್ರ ಸಿಂಗ್ ಮತ್ತು ಉಕ್ಕು ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ನಿವೃತ್ತ ಕಾರ್ಮಿಕರ ನೂತನ ಪಿಂಚಣಿ ಯೋಜನೆಯ ರೂಪರೇಖೆ, ವೈದ್ಯಕೀಯ ಸೌಲಭ್ಯ, ಮತ್ತು ಹಾಲಿ ನೌಕರರ ವೇತನ ಪರಿಷ್ಕರಣೆಗಳ ಬಗ್ಗೆ ನೇರ ವಿಚಾರ ವಿಮರ್ಶೆ ನಡೆಸಲಾಯಿತು.
ವಿವಿಧ ಕಾರ್ಮಿಕ ಸಂಘಟನೆಗಳ ನಾಯಕರುಗಳು ಇಂದು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತ್ಯುತ್ತರವಾಗಿ ಸಚಿವರು ಪಿಂಚಣಿ ಯೋಜನೆಗಳನ್ನು ಸಂಬಂಧಿಸಿದ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿಗಳಿಗೆ ಅನುಸಾರವಾಗಿ ನಿರ್ವಹಿಸಬೇಕು. ಸುಮಾರು 56,000 ನಿವೃತ್ತ ಕಾರ್ಮಿಕರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ತಿಂಗಳಿಗೆ ಸುಮಾರು 45 ಕೋಟಿ ರೂ.ಗಳ ಆರ್ಥಿಕ ಹೊರೆ ಸರಕಾರದ ಮೇಲೆ ಬೀಳುತ್ತದೆ ಎಂದರು.
ದೇಶದ ಪ್ರಮುಖ ಕಂಪನಿಗಳಾದ ಕೆ.ಐ.ಒ.ಸಿ.ಎಲ್. ಲಿಮಿಟೆಡ್, ಆರ್. ಐ.ಎನ್.ಎಲ್, ಎನ್.ಎಂ.ಡಿ.ಸಿ., ಎಂ.ಒ.ಐ.ಎಲ್, ಮೆಕಾನ್, ಸೈಲ್ ಕಂಪೆನಿಗಳ ನಾಯಕರುಗಳು ಭಾಗವಹಿಸಿದ್ದರು. ಕೆ.ಐ.ಒ.ಸಿ.ಎಲ್ ನಿಂದ ಭಾರತೀಯ ಮಜ್ದೂರ್ ಸಂಘಕ್ಕೆ ಸಂಯೋಜಿಸಿದ ಕುದುರೆಮುಖ ಮಜ್ದೂರ್ ಸಂಘದ ಅಧ್ಯಕ್ಷ ರಾಮಕೃಷ್ಣ ಪೂಂಜ, ಪ್ರಧಾನ ಕಾರ್ಯದರ್ಶಿ ಸುರೇಶ್ ಕರ್ಕೇರಾ, ಕಾರ್ಯಧ್ಯಕ್ಷ ಚಂದ್ರೇಗೌಡ, ಶಾಖಾಧ್ಯಕ್ಷ ಭಗವಾನ್ದಾಸ್, ಕಾರ್ಯದರ್ಶಿ ಲೋಕೇಶ್, ಶಾಖಾ ಕಾರ್ಯಧ್ಯಕ್ಷ ಎಲಗುದ್ರಿ ಎಸ್.ಬಿ. ನಿಯೋಗದಲ್ಲಿದ್ದರು.