‘ಗ್ರಾ.ಪಂ. ನಿರ್ಧಾರಗಳು ನಿರ್ಣಾಯಕ’
Team Udayavani, Feb 24, 2019, 9:05 AM IST
ಪುಂಜಾಲಕಟ್ಟೆ: ಗ್ರಾಮದ ಜನತೆಯ ಆಶೋತ್ತರಗಳಿಗೆ ಗ್ರಾ.ಪಂ. ಆಡಳಿತ ತೆಗೆದುಕೊಳ್ಳುವ ನಿರ್ಧಾರ ನಿರ್ಣಾಯಕ ಎಂದು ಶಾಸಕ ರಾಜೇಶ್ ನಾೖಕ್ ಉಳಿಪಾಡಿಗುತ್ತು ಹೇಳಿದರು.
ಅವರು ಇರ್ವತ್ತೂರು ಗ್ರಾ.ಪಂ. ಗೆ 18.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಅಭಿವೃದ್ಧಿ ಯೋಜನೆಗಗಳಿಂದ ಮಾದರಿ ಪಂ. ಆಗಿ ರೂಪಿಸಬೇಕು ಎಂದರು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಸದಸ್ಯ ರಮೇಶ್ ಪೂಜಾರಿ ಕುಡ್ಮೇರು, ಸಹಾಯಕ ನಿರ್ದೇಶಕ ಪ್ರಶಾಂತ್ ಜೈನ್, ಎಂಜಿನಿಯರ್ ಕೃಷ್ಣ, ಗ್ರಾ.ಪಂ. ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷ ಶಂಕರ ಶೆಟ್ಟಿ, ಗ್ರಾ.ಪಂ. ಸದಸ್ಯರು, ಸಿಬಂದಿ ವರ್ಗ ಉಪಸ್ಥಿತರಿದ್ದರು.
ಗುತ್ತಿಗೆದಾರ ದಿನೇಶ್ ಶೆಟ್ಟಿ, ಹಿಂದೆ ಸೇವೆ ಸಲ್ಲಿಸಿದ ಗ್ರಾಮ ಕರಣಿಕ ಕುಮಾರ್ ಟಿ.ಸಿ., ಪಂ. ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿಗಾರ್ ಅವರನ್ನು ಸಮ್ಮಾನಿಸಲಾಯಿತು. ಪಂ. ಅಭಿವೃದ್ಧಿ ಅಧಿಕಾರಿ ಅವಿನಾಶ್ ಸ್ವಾಗತಿಸಿ, ವರದಿ ವಾಚಿಸಿದರು. ಮಂಜು ವಿಟ್ಲ ಮತ್ತು ಭರತ್ ಕುಮಾರ್ ಜೈನ್ ನಿರೂಪಿಸಿದರು.
ಉತ್ತಮ ಕಾರ್ಯನಿರ್ವಹಿಸಿ
ಸರಕಾರಿ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರಕಾರ ಒದಗಿಸಿದ ಅನುಕೂಲತೆಗಳನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು. ಕ್ಷೇತ್ರದಲ್ಲಿ ಶಾಂತಿ-ಸಾಮರಸ್ಯ ಉಳಿಸುವುದು ಜವಾಬ್ದಾರಿಯಾಗಿದ್ದು, ಜನತೆ ಸಹಕರಿಸಬೇಕು.
– ರಾಜೇಶ್ ನಾೖಕ್, ಶಾಸಕರು