ಆಸಕ್ತಿ ಕ್ಷೇತ್ರದ ಆಯ್ಕೆ ಸಾಧನೆಗೆ ಸಹಕಾರಿ: ಗಿರೀಶ್ ಕುಮಾರ್
Team Udayavani, Jun 8, 2018, 3:57 PM IST
ಬೆಳ್ತಂಗಡಿ : ವಿದ್ಯಾರ್ಥಿ ಅವಿರತ ಪ್ರಯತ್ನ, ನಿರಂತರ ಸಾಧನೆಯಿಂದ ಬದುಕಿನಲ್ಲಿ ಮೇಲೆ ಬರಬೇಕು. ಆತ ತನ್ನ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಕಲಿಯಲು ಹಾಗೂ ವಿಶೇಷ ಸಾಧನೆ ಮಾಡಲು ಅನುಕೂಲ ಎಂದು ಉಜಿರೆ ಎಸ್ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ| ಗಿರೀಶ್ ಕುಮಾರ್ ಹೇಳಿದರು. ಅವರು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ತಾ| ತುಳು ಶಿವಳ್ಳಿ ಸಭಾ ಉಜಿರೆ ವಲಯದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎಲ್ಲಾ ಕ್ಷೇತ್ರದ ಹಿರಿಯರ ಸಮಾವೇಶದಲ್ಲಿ ಅವರ ಅನುಭವಸಾರವನ್ನು ಕ್ರೋಢೀಕರಿಸಿ ಮಕ್ಕಳಿಗೆ ಉಪಯುಕ್ತವಾಗಬಲ್ಲ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಎಂಜಿನಿಯರಿಂಗ್ ಕ್ಷೇತ್ರದ ಅಧ್ಯಯನಕ್ಕೆ ಬೇಕಾಗುವ ಪೂರಕ ಮಾಹಿತಿ ನೀಡಲು ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ವರ್ಗ ಸಿದ್ಧವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ತುಳು ಶಿವಳ್ಳಿ ಸಭಾ ಗೌರವಾಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ ಮಾತನಾಡಿ, ಬ್ರಾಹ್ಮಣ ಸಮಾಜ ಕೇವಲ ವೈದಿಕದಲ್ಲಿ ಮಾತ್ರವಲ್ಲದೆ ಮಹಿಳೆಯರ ಸಾಧನೆ, ವಿದ್ಯಾರ್ಥಿಗಳ ಪ್ರತಿಭೆಯಿಂದಲೂ ಶ್ರೇಷ್ಠತೆ ಪಡೆಯುತ್ತಿದೆ. ಸಮಾಜದ ಮೇಲೆ ಅಭಿಮಾನ ಇನ್ನಷ್ಟು ಹೆಚ್ಚಿ ಸಂಘಟನೆ ಬಲಿಷ್ಟಗೊಂಡು ಇತರ ತಾಲೂಕುಗಳಿಗೂ ಆದರ್ಶವಾಗಬೇಕು ಎಂದರು.
ತಾ| ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಮಾತನಾಡಿ, ಮುಂದಿನ ಸಮಾಜದ ಆಧಾರಸ್ತಂಭಗಳಾದ ವಿದ್ಯಾರ್ಥಿಗಳ ವಿಶೇಷ ಸಾಧನೆ ಗಮನಾರ್ಹವಾದುದು. ತಾಲೂಕಿನ ಎಲ್ಲ ವಲಯಗಳ ಪುರುಷರು ಹಾಗೂ ಮಹಿಳೆಯರು ಒಟ್ಟಾಗಿ ಸಮಾಜದ ಬಗ್ಗೆ ಕಾಳಜಿ ವಹಿಸಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಘಟನೆ ಬಲಪಡಿಸಬೇಕು ಎಂದರು.
ಪ್ರತಿಭಾ ಪುರಸ್ಕಾರ
ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಅಂತಿಮ ಪರೀಕ್ಷೆಗಳಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಪ್ರ ಕಪ್ ಕ್ರೀಡಾಕೂಟದ ತ್ರೋಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದ ತುಳು ಶಿವಳ್ಳಿ ಮಹಿಳಾ ತಂಡ ಹಾಗೂ ಕ್ರಿಕೆಟ್ನಲ್ಲಿ ದ್ವಿತೀಯ ಸ್ಥಾನ ಪಡೆದ ರವಿ ಚಕ್ಕಿತ್ತಾಯ ನೇತೃತ್ವದ ಶಿವಳ್ಳಿ ಉಜಿರೆ ವಲಯವನ್ನು ಗೌರವಾಧ್ಯಕ್ಷರು ಸ್ಮರಣಿಕೆ ನೀಡಿ ಗೌರವಿಸಿದರು.
ತಾಲೂಕು ಶಿವಳ್ಳಿ ಕಾರ್ಯದರ್ಶಿ ರಾಜಪ್ರಸಾದ್ ಪೋಳ್ನಾಯ, ಉಜಿರೆ ವಲಯ ಮಹಿಳಾಧ್ಯಕ್ಷೆ ಸರೋಜಾ ಕೆದಿಲಾಯ ಉಪಸ್ಥಿತರಿದ್ದರು. ತುಳು ಶಿವಳ್ಳಿ ಉಜಿರೆ ವಲಯಾಧ್ಯಕ್ಷ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಮುರಳೀಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಉಜಿರೆ ವಲಯ ಕಾರ್ಯದರ್ಶಿ ಶ್ರೀಧರ ಕೆ.ವಿ. ವಂದಿಸಿದರು.