ಮಲ್ಪೆಯಲ್ಲಿ ರಸ್ತೆ ದಾಟುವುದೇ ಹರಸಾಹಸ, ಗೊಂದಲ
ಮಲ್ಪೆ ಮುಖ್ಯರಸ್ತೆ: ನೆನೆಗುದಿಗೆ ಬಿದ್ದ ರಸ್ತೆ ವಿಸ್ತರಣೆ
Team Udayavani, Apr 21, 2022, 12:14 PM IST
ಮಲ್ಪೆ: ವಾಣಿಜ್ಯ ಮತ್ತು ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿರುವ ಮಲ್ಪೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಲ್ಲೆಂದರಲ್ಲಿ ರಸ್ತೆ ಮೇಲೆ ವಾಹನಗಳ ನಿಲುಗಡೆ, ಅದರ ಮಧ್ಯೆಯೇ ನುಸುಳುತ್ತ ವಾಹನ ಚಲಾಯಿಸುವ ಅನಿವಾರ್ಯತೆ ಇದೆ. ಅಲ್ಲದೆ ರಸ್ತೆ ದಾಟುವುದಕ್ಕೆ ಪಾದಚಾರಿಗಳಿಗೆ ಗೊಂದಲ, ಫಜೀತಿಯಾಗುತ್ತಿದೆ.
ಅಗಲ ಕಿರಿದಾದ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ವಾಹನದಿಂದಾಗಿ ಟ್ರಾಫಿಕ್ ಜಾಮ್ ಪ್ರತಿನಿತ್ಯದ ಸಮಸ್ಯೆಯಾಗಿ ಮಾರ್ಪಟ್ಟಿದೆ. ಮಲ್ಪೆಯ ಸರ್ಕಲ್ನಿಂದ ಹಿಡಿದು ಕಲ್ಮಾಡಿವರೆಗೂ ಸುಮಾರು ಒಂದೂವರೆ ಕಿ.ಮೀ. ಉದ್ದಕ್ಕೆ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಅಡ್ಡಾದಿಡ್ಡಿ ವಾಹನವನ್ನು ನುಗ್ಗಿಸುವ ಚಾಲಕರಂತೂ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದ್ದಾರೆ.
ನಿತ್ಯ ಸಂಚಾರದ ಬಸ್ಗಳಲ್ಲದೆ ಪ್ರಮುಖ ಮೀನುಗಾರಿಕಾ ಬಂದರಿನಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಮೀನು ಸಾಗಾಟ, ಮಂಜುಗಡ್ಡೆ ಸಾಗಾಟದ ಲಾರಿಗಳು, ಟೆಂಪೋ, ರಿಕ್ಷಾಗಳು ನಿತ್ಯ ಓಡಾಟ ನಡೆಸುತ್ತವೆ. ಪ್ರವಾಸಿ ತಾಣವಾದ ಮಲ್ಪೆ ಸೈಂಟ್ ಮೇರೀಸ್ ಮತ್ತು ಮಲ್ಪೆ ಬೀಚ್ಗೆ ಬರುವ ಹೊರ ರಾಜ್ಯ ಮತ್ತು ಹೊರಜಿಲ್ಲೆಯ ಸಾವಿರಾರು ಪ್ರವಾಸಿಗರು ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆ ಸಮಸ್ಯೆ ಬಿಗಡಾಯಿಸಿದೆ.
ಮುಖ್ಯ ರಸ್ತೆಯ ಮೂರು ರಸ್ತೆ ಕೂಡುವಲ್ಲಿ ವಾಹನ ದಟ್ಟಣೆಯಾಗಿ ಸಂಚಾರದ ಅವ್ಯವಸ್ಥೆಯಿಂದ ಗಂಟೆಗಟ್ಟಲೆ ಕಾಯುವ ಸ್ಥಿತಿ ಇದೆ. ಮೀನುಗಾರಿಕಾ ಬಂದರಿನಿಂದ ಹೊರಹೋಗುವ ಮತ್ತು ಬಂದರಿನಡೆಗೆ ಬರುವ ವಾಹನಗಳು ಜತೆಗೆ ತೊಟ್ಟಂ, ಕೊಡವೂರು ಮಾರ್ಗದಿಂದ ಮಲ್ಪೆಗಾಗಿ ಮುಂದೆ ಸಾಗುವ ವಾಹನಗಳು ಇವು ಮೂರು ರಸ್ತೆ ಸೇರುವಲ್ಲಿ ಒಂದಾದಾಗ ಸಮಸ್ಯೆ ಉಂಟಾಗುತ್ತದೆ. ಸಿಟಿ ಬಸ್ ಗಳು ಪ್ರಯಾಣಿಕರನ್ನು ಈ ಮೂರು ರಸ್ತೆ ಕೂಡುವಲ್ಲಿ ನಿಲುಗಡೆಗೊಳಿಸಿ ಹತ್ತಿಸಿಕೊಳ್ಳುವುದರಿಂದಲೂ ಸಮಸ್ಯೆ ಯನ್ನು ಸೃಷ್ಟಿಸುತ್ತಾರೆ ಎಂದು ನಾಗರಿಕರು ಆರೋಪಿಸುತ್ತಾರೆ.
ಮುಖ್ಯವಾಗಿ ಇಲ್ಲಿನ ರಸ್ತೆಯ ವಿಸ್ತರಣೆಯ ಕೆಲಸವೂ ಅತೀ ಶೀಘ್ರದಲ್ಲಿ ಆದರೆ ಎಲ್ಲ ಸಮಸ್ಯೆಗೆ ಪರಿಹಾರ ದೊರೆತಂತಾಗುತ್ತದೆ ಎನ್ನುತ್ತಾರೆ ನಾಗರಿಕರು.
ಇಕ್ಕಟ್ಟಾದ ರಸ್ತೆ
ಮಲ್ಪೆ ಪ್ರಮುಖ ಮೀನುಗಾರಿಕಾ ಬಂದರು ಆಗಿ ಅಭಿವೃದ್ಧಿಯನ್ನು ಹೊಂದುತ್ತಿದ್ದು ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದಕ್ಕೆ ಪೂರಕದ ರಸ್ತೆಯ ವಿಸ್ತರಣೆ ಮತ್ತು ಅಭಿವೃದ್ಧಿ ಆಗುತ್ತಿಲ್ಲ. 60-70 ವರ್ಷಗಳ ಹಿಂದೆ ಇದ್ದ ಇಕ್ಕಟ್ಟಾಗಿರುವ ರಸ್ತೆ ಈಗಲೂ ಅದೇ ರೀತಿ ಇದೆ. ರಸ್ತೆ ವಿಸ್ತರಣೆ ಆಗುತ್ತದೆ ಎಂಬ ಮಾತು ಕಳೆದ 45 ವರ್ಷದಿಂದ ಕೇಳಿ ಬರುತ್ತಲೇ ಇದೆ. ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಗುರುತಿಸಿಕೊಂಡಿದೆ. ವಿಸ್ತರಣೆ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ ಎನ್ನಲಾಗಿದೆ.
ಸಮಸ್ಯೆಗಳಿಗೆ ಪರಿಹಾರ
ಮಲ್ಪೆ ಆದಿವುಡುಪಿ ಚತುಷ್ಪತ ರಸ್ತೆ ಟೆಂಡರ್ ಈಗಾಗಲೇ ಅಂತಿಮವಾಗಿದೆ. ಅನುಮೋದನೆಗೆ ದಿಲ್ಲಿಗೆ ಹೋಗಿದೆ. ವಾರದೊಳಗೆ ಆ ಪ್ರಕ್ರಿಯೆ ಮುಗಿಯಲಿದೆ. ಭೂ ಸ್ವಾಧೀನ ಪ್ರಥಮ ಹಂತ ಆಗಿದ್ದು, ಇನ್ನು 3ಡಿ ಬರಲಿಕ್ಕಿದೆ. ಇದೆಲ್ಲ ಪ್ರಕ್ರಿಯೆಗಳು ವಿಳಂಬವಾಗುತ್ತದೆಂದು ಕುಂದಾಪುರ ಸಹಾಯಕ ಕಮಿಷನರ್ಗೆ ಕೊಡಬೇಕು ಎಂದು ಒತ್ತಡ ಹೇರಿದ್ದೇವೆ. 3 ತಿಂಗಳೊಳಗೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಬೇಕೆಂದಿದ್ದೇವೆ. ಬಂದರು ಗೇಟ್ ವರೆಗೆ ಕಾಂಕ್ರೀಟ್ ರಸ್ತೆಯಾಗಲಿದ್ದು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. -ಕೆ. ರಘುಪತಿ ಭಟ್, ಶಾಸಕರು, ಉಡುಪಿ
ವಿಸ್ತರಣೆ ಒಂದೇ ಪರಿಹಾರ
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಟೆಂಪೋ ಮಾಲಕರ ಚಾಲಕರ ಮತ್ತು ಮಲ್ಪೆ ಪೊಲೀಸ್ ಠಾಣೆಯ ಸಹಕಾರದಲ್ಲಿ ಸಭೆ ಕರೆದು ಚರ್ಚಿಸಲಾಗಿತ್ತು. ಮೀನುಗಾರಿಕೆ ಆರಂಭದ 3 ತಿಂಗಳು ಮಂಜುಗಡ್ಡೆ ಹಾಗೂ ಮೀನಿನ ವಾಹನಗಳನ್ನು ಕೊಳ, ಸಿಟಿಜನ್ ಮಾರ್ಗವಾಗಿ ಆಗಮಿಸಲು, ತೆರಳಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಾಗಿತ್ತು. ಈ ಸಮಸ್ಯೆಗೆ ರಸ್ತೆಯ ವಿಸ್ತರಣೆ ಒಂದೇ ಪರಿಹಾರ ಮಾರ್ಗ. -ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮೀನುಗಾರರ ಸಂಘ ಮಲ್ಪೆ
ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ