Kundapura ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ, ವಾರಾಣಸಿ ರೈಲಿಗೆ ಬೇಡಿಕೆ
Team Udayavani, Oct 3, 2023, 11:46 PM IST
ಕುಂದಾಪುರ: ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ, ವಾರಾಣಸಿಯ ಕಾಶೀ ಕ್ಷೇತ್ರಗಳಿಗೆ ಕರಾವಳಿ ಭಾಗದಿಂದ ತೆರಳುವವರು ಸಾಕಷ್ಟು ಮಂದಿ. ತಿಂಗಳಿಗೊಮ್ಮೆ ಹೋಗಿ ಬರುವವರೂ ಇದ್ದಾರೆ. ಕುಟುಂಬದವರೆಲ್ಲ ಜತೆಗೂಡಿ ನಿಯಮಿತವಾಗಿ ಭೇಟಿ ನೀಡುವ ಸಂಪ್ರದಾಯವೂ ಇದೆ. ಆದರೆ ಕಾರವಾರ, ಮುರ್ಡೇಶ್ವರ, ಕುಂದಾಪುರ ಭಾಗದಿಂದ ತಿರುಪತಿಗೆ ನೇರ ರೈಲು ಸಂಪರ್ಕ ಇಲ್ಲದೇ ಸಮಸ್ಯೆಯಾಗುತ್ತಿದೆ. ಈಗ ಈ ಎರಡೂ ಕ್ಷೇತ್ರಗಳಿಗೆ ನೇರ ರೈಲು ಸಂಪರ್ಕ ಒದಗಿಸಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.
ಮಂಗಳೂರಿನಿಂದ ವಾರಕ್ಕೆ 3 ದಿನ ತಿರುಪತಿಗೆ ರೈಲು ಸಂಚಾರವಿದೆ. ಕುಂದಾಪುರ ಭಾಗದಿಂದ ತೆರಳುವವರು ಮಂಗಳೂರಿಗೆ ಬೇರೊಂದು ವಾಹನ ಅಥವಾ ರೈಲಿನಲ್ಲಿ ತೆರಳಿ ಅಲ್ಲಿಂದ ತಿರುಪತಿ ರೈಲನ್ನೇರಬೇಕು. ಆ ಸಮಸ್ಯೆ ನಿವಾರಿಸಲು ಕಾರವಾರ, ಕುಂದಾಪುರ ಭಾಗದಿಂದ ಹೆಚ್ಚುವರಿ ರೈಲನ್ನು ಬೆಂಗಳೂರು ಅಥವಾ ಕೇರಳ ಮಾರ್ಗವಾಗಿ ಆರಂಭಿಸಬಹುದು ಅಥವಾ ವಾಸ್ಕೊ-ತಿರುಪತಿ ರೈಲನ್ನು ಕರಾವಳಿಗೆ ವಿಸ್ತರಿಸಬಹುದು. ಕಳೆದ ವರ್ಷ ಮಂಗಳೂರು – ಅಹ್ಮದಾಬಾದ್ ರೈಲು ಮಂಜೂರಾಗಿದ್ದರೂ ಇನ್ನೂ ಸಂಚಾರ ಆರಂಭಿಸಿಲ್ಲ. ಅದೇ ರೈಲನ್ನು ಕುಂದಾಪುರ ಅಥವಾ ಕಾರವಾರದಿಂದ ಆರಂಭಿಸಿ, ಅಹ್ಮದಾಬಾದ್ನಿಂದ ವಾರಾಣಸಿಗೆ ವಿಸ್ತರಿಸಿದರೆ ಕರ್ನಾಟಕ ಕರಾವಳಿಯ ಯಾತ್ರಿಕರಿಗೆ ಪ್ರಯೋಜನವಾಗಲಿದೆ ಎನ್ನುವುದು ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿಯ ಅಭಿಪ್ರಾಯ.
ತಿರುಪತಿ, ವಾರಾಣಸಿಗೆ ರೈಲು ಸಂಪರ್ಕ ಬೇಕು ಎನ್ನುವ ಬೇಡಿಕೆ ಹಿಂದಿನಿಂದಲೂ ಇತ್ತು. ಈ ನಿಟ್ಟಿನಲ್ಲಿ ನಮ್ಮ ಸಮಿತಿ ಪ್ರಯತ್ನ ನಡೆಸುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳೂ ಧ್ವನಿಗೂಡಿಸಬೇಕಿದೆ. ಇದು ಸಾಧ್ಯವಾದರೆ ನಮ್ಮ ಈ ಭಾಗದ ಬಹುತೇಕ ಬೇಡಿಕೆಗಳು ಈಡೇರಿದಂತೆ.
– ಗಣೇಶ್ ಪುತ್ರನ್,
ಅಧ್ಯಕ್ಷ, ಕುಂದಾಪುರ ರೈಲು ಪ್ರಯಾಣಿಕರ ಸಮಿತಿ