ಹುಣ್ಸೆಮಕ್ಕಿ : 3 ಕಡೆಗಳಲ್ಲಿ ಬೇಕಿದೆ ರಸ್ತೆ ಸುರಕ್ಷತಾ ಕ್ರಮ
ರಸ್ತೆ ಕೂಡುವ ಬಳಿ ಹಂಪ್ ಅಥವಾ ವೇಗ ತಡೆಗೆ ಅಳವಡಿಕೆಗೆ ಬೇಡಿಕೆ
Team Udayavani, Feb 12, 2020, 4:47 AM IST
ಹುಣ್ಸೆಮಕ್ಕಿ: ಕೋಟೇಶ್ವರ – ಹಾಲಾಡಿ ಜಿಲ್ಲಾ ಮುಖ್ಯ ರಸ್ತೆಯ ಹುಣ್ಸೆಮಕ್ಕಿ ಪೇಟೆಯ 3 ಕಡೆಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಅವಡಿಕೆಗೆ ಸ್ಥಳೀಯರಿಂದ ಬೇಡಿಕೆ ವ್ಯಕ್ತವಾಗಿದೆ.
ಮೊಳಹಳ್ಳಿ – ಕೈಲ್ಕೇರೆ, ಬಸ್ರೂರು – ಜಪ್ತಿ ಹಾಗೂ ಬೇಳೂರು ರಸ್ತೆ ಈ ಮೂರೂ ಕಡೆಯಿಂದಲೂ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಯಾವುದೇ ರೀತಿಯ ಬ್ಯಾರಿಕೇಡ್, ಹಂಪ್ ಅಥವಾ ಇನ್ನಿತರ ವೇಗ ನಿಯಂತ್ರಕಗಳು ಇಲ್ಲ. ಈ ರಸ್ತೆಗಳಲ್ಲಿ ಬರುವ ವಾಹನಗಳು ಏಕಾಏಕಿ ಮುಖ್ಯ ರಸ್ತೆಗೆ ನುಗ್ಗು ತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿದೆ.
ಅಪಘಾತ ವಲಯ..!
ಈ 3 ಕಡೆಗಳಲ್ಲಿಯೂ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇದೆ. ಕಳೆದ ತಿಂಗಳ ಹಿಂದೆ ಇಲ್ಲಿ ರಸ್ತೆ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟ ಘಟನೆ ಕೂಡ ಸಂಭವಿಸಿತ್ತು. ಇನ್ನು ಮೊಳಹಳ್ಳಿಯಿಂದ ಮುಖ್ಯ ರಸ್ತೆಗೆ ಪ್ರವೇಶಿಸುವಲ್ಲಿ ತಿರುವು ಕೂಡ ಇದ್ದು, ಅಪಾಯ ಕಾರಿಯಾಗಿದೆ. ವಾಹನ ದಟ್ಟಣೆ ಇದೇ ರೀತಿಯಾಗಿ ಹೆಚ್ಚಾಗುತ್ತಿದ್ದರೆ, ಭವಿಷ್ಯದಲ್ಲಿ ಹುಣ್ಸೆಮಕ್ಕಿ ಅಪಘಾತ ವಲಯವಾಗಿ ಮಾರ್ಪಾಡಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಪಂಚಾಯತ್ನಿಂದ ಮನವಿ
ಹುಣ್ಸೆಮಕ್ಕಿಯ ಮುಖ್ಯ ರಸ್ತೆಯನ್ನು ಸೇರುವ 3 ಕಡೆಗಳಲ್ಲಿ ರಸ್ತೆ ಸುರಕ್ಷತಾ ಕ್ರಮ ಅಳವಡಿಕೆಗೆ ಅಗತ್ಯ ಕ್ರಮಕೈಗೊಳ್ಳುವ ಸಂಬಂಧ ಸದ್ಯದಲ್ಲಿಯೇ ಪಂಚಾಯತ್ ನಿರ್ಣಯ ಕೈಗೊಂಡು, ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲಾಗುವುದು. ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಇದು ಅಗತ್ಯವಾಗಿ ಆಗಬೇಕಾಗಿದೆ.
– ಮಂಜುನಾಥ ಪೂಜಾರಿ, ಉಪಾಧ್ಯಕ್ಷರು, ಹೊಂಬಾಡಿ – ಮಂಡಾಡಿ ಗ್ರಾ.ಪಂ.
ಪ್ರಾಮ್ಸಿಯಡಿ ಅಭಿವೃದ್ಧಿ
ಹುಣ್ಸೆಮಕ್ಕಿಯಲ್ಲಿನ ತಿರುವು ಅಪಾಯಕಾರಿಯಾಗಿದ್ದು, ಈ ಬಗ್ಗೆ ಇಲಾಖೆ ಗಮನದಲ್ಲಿದೆ. ಅದರ ತೆರೆವಿಗೆ ಪ್ರಾಮ್ಸಿ (ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರ) ಯಡಿ ಅಭಿವೃದ್ಧಿಪಡಿಸಲು ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗುವುದು. ಸದ್ಯಕ್ಕೆ ಅನುದಾನ ಬಿಡುಗಡೆಯಾಗದ ಕಾರಣ, ಅನುದಾನ ಬಂದ ಕೂಡಲೇ ಕಾಮಗಾರಿ ನಡೆಸಲಾಗುವುದು.
– ದುರ್ಗಾದಾಸ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ಹಂಪ್ ಅಳವಡಿಕೆಗೆ ಆಗ್ರಹ
ಮೊಳಹಳ್ಳಿ, ಬಸ್ರೂರು ಕಡೆಯಿಂದ ಬೆಳಗ್ಗಿನಿಂದ ರಾತ್ರಿಯವರೆಗೂ ನಿರಂತರವಾಗಿ ನೂರಾರು ವಾಹನಗಳು ಹುಣ್ಸೆಮಕ್ಕಿಗೆ ಬರುತ್ತವೆ. ಈ 3 ಕಡೆಗಳ ರಸ್ತೆಯು ಹುಣ್ಸೆಮಕ್ಕಿಯ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಸಮೀಪ ಹಂಪ್ಗ್ಳನ್ನಾದರೂ ಅಳವಡಿಸಿದರೆ ಅಪಘಾತ ತಡೆಗೆ ಅನುಕೂಲ ವಾಗಲಿದೆ ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.
ಪ್ರಶಾಂತ್ ಪಾದೆ