ಎಲ್ಲಾ ಪೀಳಿಗೆಯ ದೊಡ್ಡ ಸ್ಫೂರ್ತಿ: ಹಿರಿಯ ನಟ ಅಶ್ವತ್ಥ್
Team Udayavani, May 29, 2020, 4:30 AM IST
ನಟ ಶಿವರಾಜ್ ಕುಮಾರ್ ಈಗ ಸೋಶಿಯಲ್ ಮೀಡಿಯಾದಲ್ಲಿರೋದು ನಿಮಗೆ ಗೊತ್ತೇ ಇದೆ. ಆಗಾಗ ಟ್ವೀಟ್ ಮಾಡುತ್ತಾ, ಫೋಟೋ ಹಂಚಿಕೊಳ್ಳುತ್ತಿ ರುತ್ತಾರೆ. ಈಗ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದ ಹಿರಿಯ ನಟ, ಚಾಮಯ್ಯ ಮೇಷ್ಟ್ರು ಎಂದೇ ಕರೆಸಿಕೊಳ್ಳುವ ಕೆ.ಎಸ್. ಅಶ್ವತ್ಥ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಶ್ವತ್ಥ್ ಅವರ ಬಗ್ಗೆ ಶಿವಣ್ಣ ಟ್ವೀಟ್ ಮಾಡಿದ್ದಾರೆ.
ಆ ಟ್ವೀಟ್ ಹೀಗಿದೆ; ನಿರ್ಮಾಪಕರಿಗೆ, ನಿರ್ದೇಶಕರಿಗೆ, ತಂತ್ರಜ್ಞರಿಗೆ, ಸಮಯಕ್ಕೆ, ತನ್ನ ಕೆಲಸಕ್ಕೆ ಬೆಲೆ ಕೊಟ್ಟಂತಹ ವ್ಯಕ್ತಿ. ಕಲಾವಿದನಾಗಿ ನೀವು ನಡೆದುಕೊಂಡ ರೀತಿ ಮುಂದಿನ ಎಲ್ಲಾ ಪೀಳಿಗೆಗೂ ಬಹು ದೊಡ್ಡ ಸ್ಫೂರ್ತಿ… ಎಂದು ಬರೆದು ಕೊಂಡಿದ್ದಾರೆ. ಅಂದಹಾಗೆ, ಅಶ್ವತ್ಥ್ ಹಾಗೂ ಶಿವರಾಜ್ ಕುಮಾರ್ ಕೆಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇನ್ಸ್ಪೆಕ್ಟರ್ ವಿಕ್ರಂ, ಆಸೆಗೊಬ್ಬ ಮೀಸೆಗೊಬ್ಬ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ಜೊತೆಯಾಗಿ ನಟಿಸಿದ್ದಾರೆ.
ಶಿವರಾಜ್ ಕುಮಾರ್, ಅಶ್ವತ್ಥ್ ಅವರನ್ನು ನೆನೆಯಲು ಕಾರಣವಾಗಿದ್ದು ಮೇ 25 ಅಶ್ವತ್ಥ್ ಅವರ ಹುಟ್ಟುಹಬ್ಬವೆಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಸುದ್ದಿ. ಆದರೆ, ಅಶ್ವತ್ಥ್ ಅವರ ಹುಟ್ಟುಹಬ್ಬ ಮಾರ್ಚ್ 25. ಈ ಹಿನ್ನೆಲೆಯಲ್ಲಿ ಚಿತ್ರರಂಗದ ಅನೇಕರು ಅಶ್ವತ್ಥ್ ಅವರನ್ನು ನೆನಪಿಸಿಕೊಂಡಿದ್ದರು. ಸದ್ಯ ಶಿವರಾಜ್ ಕುಮಾರ್ ಲಾಕ್ ಡೌನ್ನಲ್ಲಿ ಮನೆಯಲ್ಲೇ ಇದ್ದಾರೆ.
ಜಿಮ್, ವೆಬ್ ಸೀರಿಸ್ ಮೂಲಕ ಟೈಂ ಪಾಸ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಓಂ ಚಿತ್ರ 25 ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಲೆ„ವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಕೂಲ್ ಆಗಿಯೇ ಶಿವಣ್ಣ ಉತ್ತರಿಸಿದ್ದಾರೆ. ಬೇರೆ ಬೇರೆ ನಟರ ಹೆಸರುಗಳನ್ನು ಪ್ರಸ್ತಾಪಿಸಿ ಅವರ ಜೊತೆ ನಟಿಸುವ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಶಿವರಾಜ್ ಕುಮಾರ್ ತನಗೆ ಯಾರ ಜೊತೆ ನಟಿಸುವುದಕ್ಕೂ ಅಭ್ಯಂತರವಿಲ್ಲ ಎಂದಿದ್ದಾರೆ.