ಲೋಕಸಭೆ ಚುನಾವಣೆಗೆ ನಿಧಿ ಸಂಗ್ರಹ: ಸರಕಾರದ ವಿರುದ್ಧ BJP ಆರೋಪ
ಹಾಲಿ ರಾಜ್ಯ ಸರಕಾರದ ವಿರುದ್ಧವೂ ಶೇ.7ರಷ್ಟು ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
Team Udayavani, Aug 10, 2023, 11:41 PM IST
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಕೊರಳಿಗೆ ಸುತ್ತಿಕೊಂಡಿರುವ “ಕಮಿಷನ್’ ಆರೋಪದ ಉರುಳು ಬಿಗಿ ಯಾಗುತ್ತಲೇ ಇದ್ದು, ಇದನ್ನೇ ಪ್ರತ್ಯಸ್ತ್ರ ಮಾಡಿ ಕೊಂಡಿರುವ ವಿಪಕ್ಷ ಬಿಜೆಪಿ ನಾಯಕರು, ಒಂದೆಡೆ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ “ಪೇ ಸಿಎಸ್’ ಅಭಿ ಯಾನ ಆರಂಭಿಸಿದ್ದಾರೆ. ಇನ್ನೊಂ ದೆಡೆ ಇಡೀ ಸರಕಾರಕ್ಕೆ ಮಾತಿನೇಟು ನೀಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಪೇ-ಸಿಎಸ್ ಎಂಬ ಕ್ಯೂ ಆರ್ ಕೋಡ್ವುಳ್ಳ ಪೋಸ್ಟರ್ ಅಂಟಿಸುತ್ತಿರುವ ಬಿಜೆಪಿ ಮುಖಂಡರು, ಕೃಷಿ ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಚಲುವರಾಯಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದ್ದಾರೆ. ಬಿಬಿಎಂಪಿ ಗುತ್ತಿಗೆದಾರ ಗೌತಮ್ ಆತ್ಮಹತ್ಯೆ ಪ್ರಕರಣವೂ ಇದಕ್ಕೀಗ ಥಳಕು ಹಾಕಿಕೊಳ್ಳುತ್ತಿದೆ.
ಇತ್ತ ಬಾಕಿ ಬಿಲ್ ಪಾವತಿಗೆ ಶೇ.10ರಿಂದ 15ರಷ್ಟು ಕಮಿಷನ್ ಕೇಳಿದ್ದಾರೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ನೇರ ಆರೋಪ ಮಾಡಿರುವ ಗುತ್ತಿಗೆದಾರರು, ರಾಜಭವನದ ಕದ ತಟ್ಟಿದ್ದಾರೆ. ಎರಡು ಪ್ರಕರಣಗಳೂ ರಾಜಭವನದ ಅಂಗಳ ತಲುಪಿರುವುದು ಒಂದೆಡೆಯಾದರೆ, ಚಲುವರಾಯಸ್ವಾಮಿ ವಿರುದ್ಧದ ಪತ್ರದ ಸತ್ಯಾಸತ್ಯತೆ ಪರಿಶೀಲಿಸಲು ತನಿಖೆಗೆ ಒಪ್ಪಿಸಲಾಗಿದೆ. ಈ ಮಧ್ಯೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ರಾಜ್ಯಪಾಲರು ಕರೆಸಿಕೊಂಡು ಗುತ್ತಿಗೆದಾರರ ಬಾಕಿ ಬಿಲ್ ಹಾಗೂ ಕಮಿ ಷನ್ ಆರೋಪ ಕುರಿತು ಸ್ಪಷ್ಟನೆ ಕೇಳಿದ್ದಾರೆ.
ಕಾಂಗ್ರೆಸ್ ಸರಕಾರವು ಲೋಕಸಭೆ ಚುನಾವಣೆಗೆ ನಿಧಿ ಸಂಗ್ರಹ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಆರೋಪಿಸಿದ್ದಾರೆ.
ಇತ್ತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್, ಸರಕಾರದ ವಿರುದ್ಧ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಗುತ್ತಿಗೆದಾರರ ಆರೋಪಗಳನ್ನು ಪುಷ್ಟೀಕರಿಸಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಖಾಸಗಿ ಹೊಟೇಲ್ನಲ್ಲಿ ನಡೆದಿದ್ದ ಸಭೆ ಯಲ್ಲಿ ಶೇ.7ರಷ್ಟು ಕಮಿಷನ್ಗೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಸರಕಾರ ಯಾವುದೇ ಇದ್ದರೂ 1 ಪರ್ಸೆಂಟ್ ಕೂಡ ಕಮಿಷನ್ ಪಡೆಯದೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸರಕಾರಕ್ಕೆ ಹಲವು ಪ್ರಶ್ನೆ
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಡಿಸಿಎಂ ಆರ್.ಅಶೋಕ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ಪಕ್ಷದ ಎಟಿಎಂ ಸರಕಾರ ಆಗಲಿದೆ ಎಂದು ಈ ಹಿಂದೆಯೇ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದು, ಅದೀಗ ಸತ್ಯವಾಗುತ್ತಿದೆ. ಕರ್ನಾಟಕ ಕಾಗ್ರೆಸ್ ಸರಕಾರವು ಲೋಕಸಭೆ ಚುನಾವಣೆಗೆ ನಿಧಿ ಸಂಗ್ರಹಕ್ಕೆ ಇಳಿದಿದೆಯೇ ಎಂದು ಪ್ರಶ್ನಿಸಿದರು.
ಹಿಂದೆ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ಧಾಗ ಪೇಸಿಎಂ ಎಂದು ಅಪಪ್ರಚಾರ ಮಾಡಿದ್ದರು. ಈಗ ಪೇ ಕಾಂಗ್ರೆಸ್? ಪೇ ಸಿಎಂ, ಪೇ ಡಿಸಿಎಂ ಆಗಿದೆಯೇ? ನಮ್ಮ ವಿರುದ್ಧ ನಿರಾಧಾರ ಆರೋಪ ಮಾಡಿದ ನಿಮ್ಮ ಮೇಲೀಗ ಶೇ 15ರ ಆರೋಪ ಮಾಡಿದ್ಧಾರೆ. ಇದಕ್ಕೆ ನಿಮ್ಮ ಉತ್ತರ ಏನು? ಗುತ್ತಿಗೆದಾರರು ಅಜ್ಜಯ್ಯನ ದೇವಸ್ಥಾನಕ್ಕೆ ಹೋಗಿ ಆಣೆ ಮಾಡುವಂತೆ ಕೇಳಿದ್ಧಾರೆ. ನೀವು ಕಮಿಷನ್ ಕೇಳದೆ ಇದ್ದರೆ ಸವಾಲು ಒಪ್ಪಬೇಕಿತ್ತಲ್ಲವೇ ಎಂದು ಆರ್.ಅಶೋಕ್ ಅವರು ಡಿ.ಕೆ. ಶಿವಕುಮಾರ್ರನ್ನು ಪ್ರಶ್ನಿಸಿದರು. ಬಿಬಿಎಂಪಿಯ 2019ರಿಂದ 2023ರ ಕಾಮಗಾರಿಗಳನ್ನು ಮಾತ್ರ ತನಿಖೆ ಮಾಡ್ತ ಇದ್ದೀರಿ.
ನೀವು ಪ್ರಾಮಾಣಿಕರಿದ್ದರೆ 2013ರಿಂದ ತನಿಖೆ ಮಾಡಬಹು ದಲ್ಲವೇ? ಗುತ್ತಿಗೆದಾರರೆಲ್ಲರೂ ಕಳ್ಳರಾದರೆ, 50 ವರ್ಷ ರಾಜ್ಯವಾಳಿದ ಕಾಂಗ್ರೆ ಸ್ಸಿನ ಬಳುವಳಿ ಇವರೇ? ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದರೆ ನಿಮ್ಮ ಬ್ರಾಂಡ್ ಬೆಂಗಳೂರಿನ ಕಥೆ ಏನು? ದಯಾ ಮರಣ ಕೋರಿ 300 ಜನ ಗುತ್ತಿಗೆದಾರರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ಧಾರೆ. ಕಾಂಗ್ರೆಸ್ಸಿನವರೇ ಇದಕ್ಕೆ ನಿಮ್ಮ ಉತ್ತರ ಏನು ಎಂದು ಪ್ರಶ್ನಿಸಿದ್ಧಾರೆ.
100 ಪರ್ಸೆಂಟ್ ಸರಕಾರವಾಗಲಿದೆ
ಸಿದ್ದರಾಮಯ್ಯ ನೇತೃತ್ವದ ಸರಕಾರ ನೂರು ದಿನ ತುಂಬುವಷ್ಟರಲ್ಲಿ 100 ಪರ್ಸೆಂಟ್ ಸರಕಾರವಾಗಲಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಅಧಿಕಾರಕ್ಕೆ ಬಂದ ಮರು ದಿನದಿಂದಲೇ ಅಧಿಕೃತವಾಗಿ ಭ್ರಷ್ಟಾಚಾರದ ಅಂಗಡಿ ಬಾಗಿಲು ತೆರೆದ ಕಾಂಗ್ರೆಸಿಗರು ಆರೋಪಗಳೆಲ್ಲ ಸುಳ್ಳು ಎಂದು ತಪ್ಪಿಸಿಕೊಳ್ಳುತ್ತಿದ್ದರು. ಈ ಸರಕಾರದ ಧನದಾಹಕ್ಕೆ ಈಗ ಗುತ್ತಿಗೆದಾರ ಗೌತಮ್ ಪ್ರಾಣ ತೆತ್ತಿದ್ದಾರೆ ಎಂದರು.
ಕಾಮಗಾರಿಗಳಲ್ಲಿ ವ್ಯತ್ಯಾಸ ಆಗಿ ದ್ದರೆ, ಅಂತಹ ಕಾಮಗಾರಿಯ ಬಿಲ್ಗಳನ್ನು ಮಾತ್ರ ತಡೆಹಿಡಿದು ಅವುಗಳ ತನಿಖೆಯನ್ನೂ ಮಾಡಿ. ಆದರೆ, ಎಲ್ಲ ಕಾಮಗಾರಿಗಳ ಬಿಲ್ ತಡೆಹಿಡಿಯಬಾರದು. ಗುತ್ತಿಗೆದಾರರಿಗೆ ಶೇ.80ರಷ್ಟು ಹಣ ಬಿಡುಗಡೆ ಮಾಡಿ, ತನಿಖೆ ಮಾಡಿಕೊಳ್ಳಲಿ. ಸರಕಾರ ಯಾವುದೇ ಇದ್ದರೂ 1 ಪರ್ಸೆಂಟ್ ಕೂಡ ಕಮಿಷನ್ ಪಡೆಯದೆ ಹಣ ಬಿಡುಗಡೆ ಮಾಡಬೇಕು.
-ಕೆಂಪಣ್ಣ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ
ಜಗತ್ತಿನ 8ನೇ ಅದ್ಭುತ
ಸರಕಾರ ಬಂದು 3 ತಿಂಗಳಾಗಿದೆ. ಈಗಾಗಲೇ ಗುತ್ತಿಗೆದಾರರು ನೇರವಾಗಿ ಮಂತ್ರಿಗಳ ಮೇಲೆ ಆರೋಪಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಮೇಲ್ನೋಟಕ್ಕೆ ಸತ್ಯ ಗೋಚರಿಸುತ್ತಿದೆ. ಕಾಂಗ್ರೆಸ್ ಮುಖಂಡರು ಭ್ರಷ್ಟಾಚಾರ ವಿರೋಧಿಗಳು, ನಾವು ಭ್ರಷ್ಟಾಚಾರಿಗಳಲ್ಲ ಎಂದೆಲ್ಲ ಬಿಂಬಿಸಿಕೊಳ್ಳುತ್ತಾರೆ. ಇದು ಜಗತ್ತಿನ 8ನೇ ಅದ್ಭುತ ಎಂದು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.