“ದುಡಿಯೋಣ ಬಾ’ ಅಭಿಯಾನದ ಉದ್ದೇಶ ಈಡೇರಲಿ
Team Udayavani, Mar 15, 2021, 6:35 AM IST
ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರತೀ ಬೇಸಗೆಯಲ್ಲಿ ಜನರು ನಗರ ಪ್ರದೇಶ ಅಥವಾ ಇತರ ರಾಜ್ಯಗಳಿಗೆ ವಲಸೆ ಹೋಗುವುದು ಸಾಮಾನ್ಯ. ಬೇಸಗೆ ಅವಧಿಯಲ್ಲಿ ಈ ಜಿಲ್ಲೆಗಳಲ್ಲಿ ನೀರಿನ ತೀವ್ರ ಅಭಾವ ವಿರುವುದರಿಂದ ಕೃಷಿ ಚಟುವಟಿಕೆ ಸಹಿತ ಯಾವುದೇ ಕೆಲಸಕಾರ್ಯಗಳು ಇಲ್ಲದೇ ಇರುವುದರಿಂದ ಜನರು ಜೀವನೋಪಾಯಕ್ಕಾಗಿ ಕೆಲಸ ಅರಸುತ್ತಾ ನಗರ ಪ್ರದೇಶಗಳತ್ತ ಮುಖ ಮಾಡುತ್ತಾರೆ. ಈ ಬಾರಿ ಜನರ ವಲಸೆ ತಡೆಗಟ್ಟುವ ಪ್ರಯತ್ನವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ “ದುಡಿಯೋಣ ಬಾ” ಅಭಿಯಾನವನ್ನು ಹಮ್ಮಿಕೊಂಡಿದೆ.
ಸೋಮವಾರ ಆರಂಭಗೊಳ್ಳಲಿರುವ ಅಭಿಯಾನದಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ನರೇಗಾದಡಿಯಲ್ಲಿ ನಿರಂತರವಾಗಿ ಗ್ರಾಮೀಣ ಭಾಗದವರಿಗೆ ಕೆಲಸವನ್ನು ಒದಗಿಸಿಕೊಡುವ ಕಾರ್ಯ ಆಗಲಿದೆ. ಕೆಲಸರಹಿತರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸ ದೊರಕಿಸಿಕೊಡುವ ಉದ್ದೇಶದಿಂದ ಆರಂಭಗೊಂಡ ನರೇಗಾ ಯೋಜನೆಯಿಂದಲೂ ಹೊರಗುಳಿದಿರುವ ಗ್ರಾಮಸ್ಥರನ್ನು ಈ ಅಭಿಯಾನದಡಿ ತಂದು ಅವರನ್ನು ಕ್ರಿಯಾಶೀಲರನ್ನಾಗಿಸುವ ಮತ್ತು ಆ ಮೂಲಕ ಬಡ ಕುಟುಂಬಗಳಿಗೆ ಆಸರೆಯಾಗುವ ಇರಾದೆ ಸರಕಾರದ್ದಾಗಿದೆ.
ಮೊದಲ ಹಂತದಲ್ಲಿ ಅಭಿಯಾನದ ಕುರಿತಾಗಿ ಗ್ರಾಮಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದ್ದು ಆ ಬಳಿಕ ಉದ್ಯೋಗ ಚೀಟಿ ವಿತರಣೆ, ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದವರ ಹೆಸರು ನೋಂದಣಿ ಮತ್ತು ಇದಾದ ಎರಡೇ ದಿನಗಳಲ್ಲಿ ಅವರಿಗೆ ಕೆಲಸ ನೀಡಲು ನಿರ್ಧರಿಸಲಾಗಿದೆ. ಇವೆಲ್ಲದರ ಜತೆಯಲ್ಲಿ ಕೆಲಸದಾಳುಗಳ ಹಿತರಕ್ಷಣೆಯ ನಿಟ್ಟಿನಲ್ಲಿಯೂ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. ಕಳೆದ ಬಾರಿ ಕೊರೊನಾದಿಂದಾಗಿ ಭಾರೀ ಸಂಖ್ಯೆಯಲ್ಲಿ ಜನರು ನಗರಗಳಿಂದ ತಮ್ಮ ಹುಟ್ಟೂರಿನತ್ತ ವಾಪಸಾಗಿದ್ದರು. ಕೆಲಸದ ನಿಮಿತ್ತ ಪರ ರಾಜ್ಯ, ನಗರ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದವರು ತಾಯ್ನಾಡಿಗೆ ಹರಸಾಹಸಪಟ್ಟು ಮರಳಿದ್ದರು. ಇವರೆಲ್ಲರಿಗೂ ಕೆಲಸ ಕಲ್ಪಿಸಿಕೊಡುವುದು ಸರಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಬಲುದೊಡ್ಡ ಸವಾಲಿನ ಕಾರ್ಯವಾಗಿತ್ತು. ಆದರೆ ಸೋಂಕು ವ್ಯಾಪಿಸಲಾರಂಭಿಸುತ್ತಿದ್ದಂತೆಯೇ ಮಳೆಗಾಲ ಆರಂಭಗೊಂಡಿದ್ದರಿಂದ ಗ್ರಾಮೀಣ ಪ್ರದೇಶಗಳ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸರಕಾರದ ಮೇಲಿನ ಹೊರೆಯನ್ನು ಕಡಿಮೆ ಮಾಡಿದ್ದರು. ಇದೀಗ ಮತ್ತೆ ಬೇಸಗೆ ಬಂದಿದೆ. ಉತ್ತರ ಕರ್ನಾಟಕದ ಹಲವಾರು ಹಳ್ಳಿಗಳಲ್ಲಿ ಈಗಾಗಲೇ ನೀರಿನ ಅಭಾವ ಕಾಣಿಸಿಕೊಳ್ಳಲಾರಂಭಿಸಿದೆ. ಜನರು ಕೆಲಸವಿಲ್ಲದೆ ಜೀವನ ಸಾಗಿಸಲು ಅಲೆದಾಡುವ ಪರಿಸ್ಥಿತಿ ನಿರ್ಮಾ ಣಗೊಂಡಿದೆ. ಇದರಿಂದ ಬಚಾವಾಗಲು ಅವರು ನಗರಗಳತ್ತ ಗುಳೆ ಹೊರಡಲು ಅನುವಾಗಿದ್ದಾರೆ. ಮತ್ತೂಂದೆಡೆಯಿಂದ ಕೊರೊನಾ ಸಾಂಕ್ರಾ ಮಿಕದ ಭೀತಿ ಇನ್ನೂ ದೂರವಾಗಿಲ್ಲ. ಇಂತಹ ಕಾಲಘಟ್ಟದಲ್ಲಿ ಹಳ್ಳಿಗರು ನಗರಗಳಿಗೆ ವಲಸೆ ಹೋಗಿ ಮತ್ತೆ ಪರಿಸ್ಥಿತಿ ಬಿಗಡಾಯಿಸುವ ಆತಂಕವೂ ಇದೆ. ಈ ಎಲ್ಲ ಕಾರಣಗಳಿಂದಾಗಿ ಈ ಯೋಜನೆ ಸಮುಚಿತವಾದುದೇ.
ಸರಕಾರದ ಇತರ ಯೋಜನೆ, ಕಾರ್ಯಕ್ರಮಗಳಂತೆ ಈ ಅಭಿಯಾನವೂ ಅನುಷ್ಠಾನದ ಹಂತದಲ್ಲಿ ಎಡವದಂತೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿ ಆಯಾಯ ಜಿಲ್ಲಾಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳದ್ದಾಗಿದೆ. ಅಲ್ಲದೆ ಅಭಿಯಾನದ ಉದ್ದೇಶ ಈಡೇರಲು ಜನರ ಸಹಕಾರ ಅತ್ಯಗತ್ಯವೂ ಕೂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?