Udupi ಸಾಮರಸ್ಯದ ಕೆಲಸದಿಂದ ಪರಿಪೂರ್ಣ ನ್ಯಾಯ
ಉಡುಪಿಯ ವಕೀಲರ ದಿನಾಚರಣೆಯಲ್ಲಿ ರಾಜೇಶ್ ರೈ ಕಲ್ಲಂಗಳ
Team Udayavani, Dec 2, 2023, 11:31 PM IST
ಉಡುಪಿ: ನ್ಯಾಯವಾದಿಗಳಿಗೆ ಮನುಷ್ಯತ್ವ ಹಾಗೂ ತೃಪ್ತಿ ಅತ್ಯಗತ್ಯ. ಮನುಷ್ಯತ್ವದಿಂದ ಸಾಮಾಜಿಕ ನ್ಯಾಯ ಒದಗಿಸಬೇಕು. ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರು ಸಾಮರಸ್ಯ ದಿಂದ ಕೆಲಸ ಮಾಡಿದಾಗ ಪರಿಪೂರ್ಣ ನ್ಯಾಯ ಒದಗಿಸಲು ಸಾಧ್ಯ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಹೇಳಿದರು.
ವಕೀಲರ ಸಂಘದ ಆಶ್ರಯದಲ್ಲಿ ಭಾರತದ ಪ್ರಥಮ ರಾಷ್ಟ್ರಪತಿ, ಕಾನೂನು ತಜ್ಞ ಡಾ| ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನದ ಪ್ರಯುಕ್ತ ಶನಿವಾರ ನ್ಯಾಯಾಲಯದ ಆವರಣದಲ್ಲಿ ನಡೆದ ವಕೀಲರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆ ನಿರಂತರ
ನ್ಯಾಯವಾದಿಗಳಿಗೆ ಕಲಿಕೆ ಎಂಬುವುದು ನಿತ್ಯ, ನಿರಂತರ ಪ್ರಕ್ರಿಯೆ ಯಾಗಿದೆ. ಪ್ರತಿಯೊಬ್ಬರೂ ಕಾನೂನನ್ನು ಸಮರ್ಪಕವಾಗಿ ಅರ್ಥೈಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಸತ್ಯ, ಮಹತ್ವ, ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ಕಾನೂನಾತ್ಮಕ ಪರಿಹಾರ ಅಗತ್ಯ
ನ್ಯಾಯವಾದಿಗಳು ವೃತ್ತಿಪರತೆ ಬೆಳೆಸಿಕೊಳ್ಳಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿಕೊಂಡು ಕಾನೂ
ನಾತ್ಮಕ ರೀತಿಯಲ್ಲಿ ಪರಿಹಾರ ನೀಡ ಬೇಕು. ನ್ಯಾಯಾಂಗಕ್ಕೆ ಬೇಕಿರುವ ಸಹಕಾರ ನೀಡಬೇಕು ಎಂದರು.
ಕರ್ತವ್ಯಕ್ಕೆ ನ್ಯಾಯ ಒದಗಿಸಿ
ರಾಜ್ಯದ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಮಾತನಾಡಿ, ನ್ಯಾಯವಾದಿಗಳು ಕಾನೂನು ರೂಪಿಸುವವರು. ನೋಟ, ದೃಷ್ಟಿ, ಕಲ್ಪನೆ ಯಿಂದ ಸಮಾಜದಲ್ಲಿ ಮತ್ತಷ್ಟು ಬದ ಲಾವಣೆಗಳನ್ನು ತರಲು ಸಾಧ್ಯವಿದೆ. ನ್ಯಾಯವಾದಿಗಳದ್ದು ಉದಾತ್ತ ವೃತ್ತಿ ಯಾಗಿದ್ದು, ತಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸುವ ಕೆಲಸವಾಗಬೇಕು ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಶಾಂತವೀರ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಉಪಸ್ಥಿತರಿದ್ದರು.
ಸಮ್ಮಾನ
ರಾಜೇಶ್ ರೈ ಕಲ್ಲಂಗಾಲ ಹಾಗೂ ಕೆ. ಶಶಿಕಿರಣ್ ಶೆಟ್ಟಿ ಅವರನ್ನು ವಕೀಲರ ಸಂಘದಿಂದ ಸಮ್ಮಾನಿಸಲಾಯಿತು. ನೂತನ ಜಿಲ್ಲಾ ಸರಕಾರಿ ನ್ಯಾಯವಾದಿ ಮೇರಿ ಎ.ಆರ್. ಸ್ರೇಷ್ಠ ಹಾಗೂ ನೂತನ ಅಪರ ಸರಕಾರಿ ನ್ಯಾಯವಾದಿ ಭುವನೇಂದ್ರ ಸುವರ್ಣ ಅವರನ್ನು ಗೌರವಿಸಲಾಯಿತು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿ ಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನ್ಯಾಯವಾದಿ ಸೀಮಾ ಭಾಸ್ಕರ್ ಅತಿಥಿ ಪರಿಚಯ ಮಾಡಿದರು. ನ್ಯಾಯವಾದಿ ಅಸಾದುಲ್ಲಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ ಎ.ಆರ್. ವಂದಿಸಿ ದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು. ವಿವಿಧ ಕ್ರೀಡಾ ವಿಜೇತ ರಿಗೆ ಬಹುಮಾನ ವಿತರಿಸಲಾಯಿತು.