ಚಿತ್ರರಂಗ ನಂಬಿಕೊಂಡವರನ್ನು ಪ್ರೇಕ್ಷಕ ಕೈ ಬಿಡುವುದಿಲ್ಲ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಆಶಾಭಾವನೆ
Team Udayavani, Jun 26, 2020, 4:58 AM IST
“ಕೋವಿಡ್ 19ನಂಥ ಸಮಸ್ಯೆ ಬರುತ್ತದೆ. ಇದರಿಂದ ಚಿತ್ರರಂಗ ಇಂಥದ್ದೊಂದು ಪರಿಸ್ಥಿತಿ ಎದುರಿಸಬೇಕಾಗುತ್ತದೆ ಅಂಥ ನಾವ್ಯಾರೂ ಅಂದುಕೊಂಡಿರಲಿಲ್ಲ. ಚಿತ್ರರಂಗವನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಬದುಕುತ್ತಿವೆ. ಅನೇಕರಿಗೆ ಚಿತ್ರರಂಗ ಬಿಟ್ಟು ಬೇರೇನೂ ಗೊತ್ತಿಲ್ಲ. ಚಿತ್ರರಂಗವೇ ಅವರ ವೃತ್ತಿ, ಪ್ರವೃತ್ತಿ ಎಲ್ಲ ಆಗಿದೆ. ಇದೆಲ್ಲವೂ ಅನಿರೀಕ್ಷಿತ.
ಸದ್ಯಕ್ಕೆ ಈ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು, ಎಲ್ಲರೂ ಒಗ್ಗಟ್ಟಿನಿಂದ ಸಮರ್ಥವಾಗಿ ಎದುರಿಸದೆ ಬೇರೆ ದಾರಿಯಿಲ್ಲ’ – ಹೀಗೆ ಹೇಳುತ್ತ ಮಾತಿಗಿಳಿದವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್ ಜೈರಾಜ್. ಪ್ರದರ್ಶಕರಾಗಿ, ಹಂಚಿಕೆದಾರರಾಗಿ ಕನ್ನಡ ಚಿತ್ರೋದ್ಯಮದಲ್ಲಿ ನಾಲ್ಕೈದು ದಶಕಗಳ ಅನುಭವ ಹೊಂದಿರುವ ಡಿ.ಆರ್ ಜೈರಾಜ್, ಕಳೆದ ವರ್ಷ ಪ್ರದರ್ಶಕರ ವಲಯದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದವರು.
ಕಳೆದ ಒಂದು ವರ್ಷದಿಂದ ಅಧ್ಯಕ್ಷರಾಗಿ ವಾಣಿಜ್ಯ ಮಂಡಳಿ ಚುಕ್ಕಾಣಿ ಹಿಡಿದಿದ್ದ ಡಿ.ಆರ್ ಜೈರಾಜ್, ಚಿತ್ರರಂಗದ ಅನೇಕ ಸಮಸ್ಯೆಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಉತ್ತರ ಕಂಡುಕೊಂಡಿದ್ದಾರೆ. ಚಿತ್ರರಂಗದ ಹತ್ತಾರು ನೋವು-ನಲಿವುಗಳಿಗೆ ಕಿವಿಯಾಗಿದ್ದಾರೆ. ಚಿತ್ರರಂಗದ ಸಂಕಷ್ಟಗಳಿಗೆ ಧ್ವನಿಯಾಗಿದ್ದಾರೆ. ತಮ್ಮ ಅಧಿಕಾರವಧಿ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ಜೊತೆ ಮಾತಿಗೆ ಸಿಕ್ಕ ಡಿ.ಆರ್ ಜೈರಾಜ್, ಚಿತ್ರರಂಗದ ಇತ್ತೀಚಿನ ಪರಿಸ್ಥಿತಿಗಳ ಕುರಿತು ಒಂದಷ್ಟು ಮಾತನಾಡಿದ್ದಾರೆ.
ಪ್ರಾಮಾಣಿಕ ಪ್ರಯತ್ನ: “ಕಳೆದ ಒಂದು ವರ್ಷದಿಂದ ಚಿತ್ರರಂಗದ ಅನೇಕ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ನಾನು ಮತ್ತು ನಮ್ಮ ತಂಡ ಬಗೆಹರಿಸಿದ್ದೇವೆ. ನನ್ನ ಕೆಲಸಕ್ಕೆ ವಾಣಿಜ್ಯ ಮಂಡಳಿಯ ಎಲ್ಲ ಪದಾಧಿಕಾರಿಗಳು, ಸದಸ್ಯರೂ ಸಹಕಾರ ಕೊಟ್ಟಿದ್ದಾರೆ. ಬಹುವರ್ಷಗಳ ಬೇಡಿಕೆ ಯಂತೆ, ಈ ವರ್ಷ ಚಿತ್ರನಗರಿ ಮಾಡಲು ಸರ್ಕಾರ ದಿಂದ 500 ಕೋಟಿ ರೂ. ಘೋಷಣೆಯಾಗಿದೆ. ಅನೇಕ ವರ್ಷಗಳಿಂದ ಕನ್ನಡಕ್ಕೆ ಒಬ್ಬರೇ ಸೆನ್ಸಾರ್ ಅಧಿಕಾರಿ ಇದ್ದರು.
ಕಳೆದ ಕೆಲ ವರ್ಷಗಳಿಂದ ಕನ್ನಡದಲ್ಲಿ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಅವರ ಮೇಲೆ ಸಾಕಷ್ಟು ಒತ್ತಡವಿತ್ತು. ಸೆನ್ಸಾರ್ಗಾಗಿ ಹಲವು ದಿನ ಕಾಯಬೇಕಾಗಿತ್ತು. ಅನೇಕ ನಿರ್ಮಾಪಕರು ಈ ಸಮಸ್ಯೆ ಬಗೆಹರಿಸಲು ಕೋರಿಕೊಂಡಿದ್ದರು. ಕೊನೆಗೆ ಈ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರಿಂದ, ಕನ್ನಡಕ್ಕೆ ಹೆಚ್ಚುವರಿಯಾಗಿ ಇನ್ನೊಬ್ಬ ಸೆನ್ಸಾರ್ ಅಧಿಕಾರಿಯನ್ನು ನೇಮಿಸಲಾಗಿದೆ. ಇದರಿಂದ ಸಿನಿಮಾಗಳಿಗೆ ಬೇಗನೆ ಸೆನ್ಸಾರ್ ಕ್ಲಿಯರೆನ್ಸ್ ಸಿಗುತ್ತಿದೆ. ಇನ್ನೂ ಹಲವು ಬೇಡಿಕೆಗಳನ್ನು ಈಗಾಗಲೇ ಸರ್ಕಾರದ ಮುಂದಿ ರಿಸಿದ್ದು, ಅವುಗಳೂ ಈಡೇರುವ ಭರವಸೆ ಎನ್ನುತ್ತಾರೆ ಜೈರಾಜ್.
ಸಮರ್ಥವಾಗಿ ಎದುರಿಸಬೇಕು: ಇನ್ನು ಕಳೆದ ನಾಲ್ಕೈದು ತಿಂಗಳಿನಿಂದ ಚಿತ್ರರಂಗದ ಮೇಲೆ ಕೋವಿಡ್ 19ದಿಂದಾಗಿರುವ ಸಂಕಷ್ಟದ ಬಗ್ಗೆ ಮಾತನಾಡಿರುವ ಜೈರಾಜ್, “ಅನಿರೀಕ್ಷಿತವಾಗಿ ಬಂದ ಕೋವಿಡ್ 19, ಚಿತ್ರರಂಗದ ಮೇಲೆ ಗಂಭೀರ ಪರಿಣಾಮ ಬೀರಿದೆ. ನಿರ್ಮಾಪಕರು, ವಿತರಕರು, ಪ್ರದರ್ಶಕರು ಹೀಗೆ ಎಲ್ಲ ವಲಯದವರೂ ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚಿತ್ರೋದ್ಯಮವನ್ನೇ ನಂಬಿಕೊಂಡ ಲಕ್ಷಾಂತರ ಜನರು ಕಂಗಾಲಾಗಿದ್ದಾರೆ. ಇಂಥ ಸಮಯದಲ್ಲಿ ವಾಣಿಜ್ಯ ಮಂಡಳಿ ಸಂಕಷ್ಟದಲ್ಲಿರುವ ಸದಸ್ಯರ ಸಹಾಯಕ್ಕೆ ನಿಂತಿದೆ.
ಲಾಕ್ ಡೌನ್ ವೇಳೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಸುಮಾರು 600ಕ್ಕೂ ಹೆಚ್ಚು ನಿರ್ಮಾಪಕರಿಗೆ ಸುಮಾರು 15 ಸಾವಿರ ರೂ. ಧನ ಸಹಾಯ ಮಾಡಿದ್ದೇವೆ. ಕನ್ನಡ ಚಿತ್ರರಂಗ ಸದ್ಯದ ಮಟ್ಟಿಗೆ ಗಂಭೀರ ಸ್ಥಿತಿಯಲ್ಲಿದೆ. ಈ ವೇಳೆ ನಾವೆಲ್ಲರೂ ಒಟ್ಟಾಗಿ ಕೈ ಜೋಡಿ ಚಿತ್ರರಂಗವನ್ನು ಮುನ್ನಡೆಸಬೇಕು. ಈ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು, ಎಲ್ಲರೂ ಒಗ್ಗಟ್ಟಿನಿಂದ ಸಮರ್ಥವಾಗಿ ಎದುರಿಸದೆ ಬೇರೆ ದಾರಿಯಿಲ್ಲ’ ಎನ್ನುತ್ತಾರೆ.
ಪ್ರೇಕ್ಷಕ ಕೈ ಬಿಡಿವಿದಿಲ್ಲ: ಎಲ್ಲ ಸಮಸ್ಯೆಗಳಿಗೂ ಪರಿಹಾರವಿರುತ್ತದೆ. ಹಾಗೆಯೇ ಎಲ್ಲವೂ ತಿಳಿಯಾಗುತ್ತದೆ ಎಂದು ಆಶಾವಾದದ ಮಾತನ್ನಾಡುವ ಡಿ ಆರ್ ಜೈರಾಜ್, ಈಗಿನ ಮಟ್ಟಿಗೆ ಹೇಳುವುದಾದ್ರೆ ಕೋವಿಡ್ 19 ನಿಯಂತ್ರಣಕ್ಕೆ ಬರಬೇಕು. ಈಗಾಗಲೇ ಸ್ಥಗಿತಗೊಂಡಿರುವ ಎಲ್ಲ ಕ್ಷೇತ್ರಗಳಲ್ಲೂ ಮತ್ತೆ ಚಟುವಟಿಕೆ ಶುರುವಾಗಬೇಕು. ಆಗ ಜನರು ಕೂಡ ನಿಧಾನವಾಗಿ ಚಿತ್ರಮಂದಿರಕ್ಕೆ ಬರುತ್ತಾರೆ.
ಪ್ರೇಕ್ಷಕರು ಖಂಡಿತವಾಗಿಯೂ ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ. ಚಿತ್ರರಂಗವನ್ನು ನಂಬಿಕೊಂಡ ವರನ್ನು ಜನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ. ಆದ್ರೆ ಅದಕ್ಕೆ ಒಂದಷ್ಟು ಸಮಯ ಹಿಡಿಯುತ್ತದೆ. ಅದು ಯಾವಾಗ ಆಗುತ್ತದೆ ಅನ್ನೋದನ್ನ ಈಗಲೇ ಹೇಳಲಾಗದು’ ಎನ್ನುತ್ತಾರೆ ಜೈರಾಜ್ ಇನ್ನು ಹಾಲಿ ಅಧ್ಯಕ್ಷ ಡಿ.ಆರ್ ಜೈರಾಜ್ ಅವರ ಅವಧಿ ಕೂಡ ಇದೇ ಜೂನ್ 30ಕ್ಕೆ ಅಂತ್ಯವಾಗಲಿದ್ದು, ವಾಣಿಜ್ಯ ಮಂಡಳಿ ಬೈಲಾದಂತೆ ಚುನಾವಣೆ ನಡೆದು ಹೊಸ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಕೂಡ ನಡೆಯಬೇಕಿತ್ತು.
ಆದರೆ ಈ ಬಾರಿ ಕೋವಿಡ್ 19 ಕಾರಣದಿಂದ ವಾಣಿಜ್ಯ ಮಂಡಳಿ ಚುನಾವಣೆಗೂ ಬ್ರೇಕ್ ಬಿದ್ದಿದೆ. ಸರ್ಕಾರ ಈಗಾಗಲೆ ಪಂಚಾಯತ್ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳ ಚುನಾವಣೆಗೆ ಮುಂದೂಡಿ ಆದೇಶ ಹೊರಡಿಸಿರುವುದರಿಂದ, ವಾಣಿಜ್ಯ ಮಂಡಳಿ ಚುನಾವಣೆ ಕೂಡ ಮುಂದಿನ ಆದೇಶ ಬರುವವರೆಗೆ ಅನಿರ್ಧಿಷ್ಟವಧಿಗೆ ಮುಂದೂಡಲ್ಪಟ್ಟಿದೆ. ಹಾಗಾಗಿ ಸದ್ಯದ ಮಟ್ಟಿಗೆ ಡಿ.ಆರ್ ಜೈರಾಜ್ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
* ಕಾರ್ತಿಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ