ಕರಾವಳಿಯಲ್ಲಿ ಇನ್ನೂ ಮೂರು ದಿನ ಭಾರೀ ಮಳೆ
Team Udayavani, Jul 7, 2018, 3:01 PM IST
ಮಂಗಳೂರು/ಉಡುಪಿ: ಕೆಲವು ದಿನಗಳಿಂದ ವಿರಾಮ ತೆಗೆದುಕೊಂಡಿದ್ದ ಮಳೆ ಗುರುವಾರ ರಾತ್ರಿ ಮತ್ತು ಶುಕ್ರವಾರವಿಡೀ ಕರಾವಳಿಯಾದ್ಯಂತ ಸತತವಾಗಿ ಸುರಿದಿದೆ.
ಮಂಗಳೂರು ನಗರದಲ್ಲಿ ದಿನವಿಡೀ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಯಿತು. ತೆಕ್ಕಟ್ಟೆ, ಮೂಲ್ಕಿ, ಮಡಂತ್ಯಾರು, ಪಡುಬಿದ್ರಿ, ಪೂಂಜಾಲಕಟ್ಟೆ, ವೇಣೂರು, ಮಂಡಂತ್ಯಾರು, ಬಂಟ್ವಾಳ, ಸುರತ್ಕಲ್, ಸುಬ್ರಹ್ಮಣ್ಯ, ಕಡಬ, ಕಾರ್ಕಳ, ಪುತ್ತೂರು, ಉಪ್ಪಿ ನಂಗಡಿ, ಬೆಳ್ತಂಗಡಿ, ಗುರು ವಾಯನ ಕೆರೆ ಪರಿಸರದಲ್ಲಿ ಉತ್ತಮ ಮಳೆಯಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಶುಕ್ರ ವಾರ ಉತ್ತಮ ಮಳೆಯಾಗಿದೆ. ಬೆಳಗ್ಗೆ ದಟ್ಟ ಮೋಡದಿಂದಾಗಿ ಕತ್ತಲಾವರಿಸಿತ್ತು. ಹೆಬ್ರಿ, ಬಜಗೋಳಿ ಪರಿಸರದಲ್ಲಿ, ಕುಂದಾಪುರ ತಾಲೂಕಿನ ವಿವಿಧೆಡೆ, ಉಡುಪಿ ನಗರ, ಬ್ರಹ್ಮಾವರ, ಕಾಪು, ಶಿರ್ವ ಭಾಗಗಗಳಲ್ಲಿಯೂ ಉತ್ತಮ ಮಳೆಯಾಗಿದ್ದು ಹಾನಿಯಾದ ವರದಿಯಾಗಿಲ್ಲ.ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.