ಕುಕ್ಕೆಶ್ರೀ ಕೇತ್ರಕ್ಕೆ ನಟ ಯಶ್ ಭೇಟಿ:ಕೆಜಿಎಫ್ ಯಶಸ್ಸಿಗೆಪ್ರಾರ್ಥನೆ
Team Udayavani, Dec 17, 2018, 12:04 PM IST
ಸುಬ್ರಹ್ಮಣ್ಯ : ತಮ್ಮ ಅಭಿನಯದ ಕೆ.ಜಿ.ಎಫ್. ಚಲನಚಿತ್ರ ಶೀಘ್ರ ಬಿಡುಗಡೆಗೊಳ್ಳಲಿದೆ. ಅದರ ಯಶಸ್ಸಿಗೆ ಹಾಗೂ ಕುಟುಂಬಕ್ಕೆ ಒಳಿತಾಗಲೆಂದು ದೇವರ ಅನುಗ್ರಹ ಪಡೆಯಲು ಕುಕ್ಕೆ ಕ್ಷೇತ್ರಕ್ಕೆ ಬಂದಿದ್ದಾಗಿ ಚಲನಚಿತ್ರ ನಟ ಯಶ್ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರವಿವಾರ ಆಗಮಿಸಿ, ದೇವರ ದರ್ಶನ ಪಡೆದ ಅವರು ಸಂಕಲ್ಪ ಹಾಗೂ ಪ್ರಾರ್ಥನೆ ನಡೆಸಿದರು. ಬಳಿಕ ಶೇಷ ಸೇವೆ ನೆರವೇರಿಸಿದರು. ಈ ವೇಳೆ ದೇಗುಲದ ಅರ್ಚಕ ಸತ್ಯನಾರಾಯಣ ನೂರಿತ್ತಾಯರು ಯಶ್ಗೆ ಶಾಲು ಹೊದೆಸಿ, ಫಲಪುಷ್ಪ ಹಾಗೂ ದೇವರ ಪ್ರಸಾದ ನೀಡಿ ಹರಸಿದರು.
2. 08 ಲಕ್ಷ ರೂ. ದೇಣಿಗೆ
ಬಳಿಕ ಯಶ್ ಹೊಸಳಿಗಮ್ಮ ಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ದೇಗುಲದ ಕಚೇರಿಯಲ್ಲಿ ಅನ್ನದಾನ ನಿಧಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಹಾಗೂ ಚಲನಚಿತ್ರ ಸಂಸ್ಥೆ ಹೆಸರಿನಲ್ಲಿ 1.08 ಲಕ್ಷ ರೂ. ದೇಣಿಗೆ ನೀಡಿದರು. ಕೆ.ಜಿ.ಎಫ್. ಚಲನಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡ ಬಳಿಕ ಮತ್ತೆ ಕ್ಷೇತ್ರಕ್ಕೆ ಬಂದು ದೇವರಿಗೆ ಮಹಾಭಿಷೇಕ ನೆರವೇರಿಸುವುದಾಗಿ ಹರಕೆ ಹೇಳಿಕೊಂಡರು.
ಹೆಲಿಕಾಪ್ಟರ್ ಮೂಲಕ ಆಗಮನ
ಧರ್ಮಸ್ಥಳದಿಂದ ಹೆಲಿಕಾಪ್ಟರ್ ಮೂಲಕ ಕುಮಾರಧಾರಾ ಶಾಲೆಯ ಮೈದಾನದ ಹೆಲಿಪ್ಯಾಡ್ಗೆ ಬಂದಿಳಿದ ಯಶ್, ನೇರವಾಗಿ ದೇವಸ್ಥಾನಕ್ಕೆ ತೆರಳಿ, ಸೇವೆಯಲ್ಲಿ ಭಾಗಿಯಾದರು. ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದವ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ನಟ ಯಶ್ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ಮಾಧವ ಡಿ., ದೇಗುಲದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶ, ನಿವೃತ್ತ ಶಿಷ್ಟಾಚಾರ ಅಧಿಕಾರಿ ವೆಂಕಟ್ರಾಜ್, ದೇಗುಲದ ಪ್ರಮೋದ್ ಉಪಸ್ಥಿತರಿದ್ದರು.
ಮುಗಿಬಿದ್ದ ಅಭಿಮಾನಿಗಳು
ಯಶ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ನೆಚ್ಚಿನ ನಟನ ಜತೆ ಸೆಲ್ಫಿ ತೆಗೆಸಿಕೊಳ್ಳಲು ನೂಕುನುಗ್ಗಲು ನಡೆಸಿದರು. ಆದರೆ, ತಡವಾಯಿತೆಂದು ಯಶ್ ಅಭಿಮಾನಿಗಳತ್ತ ಕೈಮುಗಿದು ನಿರ್ಗಮಿಸಿದರು.