ಶಾಂತಿಮೊಗೇರು ರಸ್ತೆಗೆ ಡಾಮರು ಕಾಮಗಾರಿ
Team Udayavani, Jan 17, 2019, 5:54 AM IST
ಆಲಂಕಾರು : ಕಡಬ ತಾಲೂಕಿನ ಆಲಂಕಾರು ಹಾಗೂ ಕುದ್ಮಾರು ಗ್ರಾಮಗಳ ಮಧ್ಯೆ ಬರುವ ಶಾಂತಿಮೊಗೇರು ಸೇತುವೆಯ ಸಂಪರ್ಕ ರಸ್ತೆಯ ಉಳಿದ ಭಾಗದ ಡಾಮರು ಕಾಮಗಾರಿ ಎರಡು ದಿನಗಳಿಂದ ಭರದಿಂದ ಸಾಗುತ್ತಿದ್ದು, ಮುಕ್ತಾಯದ ಹಂತದಲ್ಲಿದೆ.
ಸೇತುವೆಯ ಸಂಪರ್ಕ ರಸ್ತೆಗಳ ಪೈಕಿ ಸುಮಾರು 800 ಮೀ. ರಸ್ತೆ ಡಾಮರು ಕಾಮಗಾರಿ ಅನುದಾನದ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿತ್ತು. ಶಾಸಕ ಎಸ್. ಅಂಗಾರ ಅವರ ಶಿಫಾರಸಿನಂತೆ 34 ಲಕ್ಷ ರೂ. ಅನುದಾನದಲ್ಲಿ ಡಾಮರು ಕಾಮಗಾರಿ ನಡೆಯುತ್ತಿದೆ. ಕೂರ ಮಸೀದಿಯ ಹತ್ತಿರ ಹಾಗೂ 800 ಮೀ. ರಸ್ತೆ ಎರಡು ವರ್ಷಗಳಿಂದ ಹೊಂಡಮಯವಾಗಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಶಾಂತಿಮುಗೇರುವಿನಲ್ಲಿ ಸೇತುವೆ ನಿರ್ಮಾಣವಾದ ಬಳಿಕ ಈ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿತ್ತು.
ಈ ರಸ್ತೆಗೆ ಡಾಮರು ಕಾಮಗಾರಿ ನಡೆಸಲು ಶಾಸಕರು ಸರಕಾರಕ್ಕೆ 1 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದರು. ಅನುದಾನ ಮಂಜೂರಾತಿ ವಿಳಂಬವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಈ ರಸ್ತೆಯನ್ನು ದುರಸ್ತಿ ಮಾಡುವ ಭರವಸೆ ನೀಡಿದ್ದರು. ಶಾಸಕರು, ಸಚಿವರ ಒತ್ತಡದ ಪರಿಣಾಮವಾಗಿ ಲೋಕೋಪಯೋಗಿ ಇಲಾಖೆ ಮುಖಾಂತರ 34 ಲಕ್ಷ ರೂ. ಬಿಡುಗಡೆಗೊಂಡು ಕಾಮಗಾರಿ ನಡೆಯುತ್ತಿದೆ.
ಮೂರು ದಶಕಗಳ ಬೇಡಿಕೆ
ಶಾಂತಿಮುಗೇರು ಎನ್ನುವಲ್ಲಿ ಸೇತುವೆ ನಿರ್ಮಾಣವಾಗಬೇಕು. ಇಲ್ಲಿ ರಸ್ತೆಗಳು ಅಭಿವೃದ್ಧಿಯಾಗಬೇಕು. ಆ ಮೂಲಕ ಸವಣೂರು, ಕುದ್ಮಾರು, ಕಾಣಿಯೂರು ಭಾಗದ ಜನರಿಗೆ ಆಲಂಕಾರು ನೆಲ್ಯಾಡಿ, ಕಡಬ, ಧರ್ಮಸ್ಥಳಕ್ಕೆ ಸುಲಭ ಸಂಪರ್ಕವಾಗಬೇಕು. ಮಾತ್ರವಲ್ಲ, ಅಪಾಯಕಾರಿ ನಾಡದೋಣಿ ಕಡವಿಗೆ ಮುಕ್ತಿ ದೊರೆಯಬೇಕು. ಮೈಸೂರಿನಿಂದ ಸುಳ್ಯ -ಬೆಳ್ಳಾರೆ-ಸವಣೂರು-ಶಾಂತಿಮೊಗೇರು-ಆಲಂಕಾರು-ನೆಲ್ಯಾಡಿ-ಧರ್ಮಸ್ಥಳಕ್ಕೆ ಸುಲಭ ಸಂಪರ್ಕವಾಗಬೇಕು ಎನ್ನುವ ಸುಮಾರು 30 ವರ್ಷದ ಬೇಡಿಕೆ ಸದ್ಯ ಈಡೇರಿದೆ. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಡಿಯಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಸರ್ವಋತು ಸೇತುವೆ ನಿರ್ಮಾಣವಾಗಿದೆ. ಇದರಲ್ಲಿ 50 ಲಕ್ಷ ರೂ. ಭೂಸ್ವಾಧೀನ ಪರಿಹಾರ ನೀಡಲಾಗಿದೆ. ಸೇತುವೆ ಸಂಪರ್ಕ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ವ್ಯಯ ಮಾಡಲಾಗಿದೆ. ಆಲಂಕಾರಿನಿಂದ ಸೇತುವೆಯ ತನಕ 4.5 ಕಿ.ಮೀ. ರಸ್ತೆಯನ್ನು 6 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದೀಗ ಸಂಪರ್ಕ ರಸ್ತೆಯ ಉಳಿಕೆ ಭಾಗ ಕೂಡಾ ಅಭಿವೃದ್ದಿಯಾಗಿದ್ದು, ಮೂರು ದಶಕಗಳ ಬೇಡಿಕೆ ಈಡೇರಿದಂತಾಗಿದೆ.
ಆಶಯದಂತೆ ಕೆಲಸ
ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಶಾಂತಿಮೊಗೇರು ಸೇತುವೆಗೆ ಅನುದಾನ ಮಂಜೂರಾಗಿತ್ತು. ಸುಮಾರು 15.5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆದಿದೆ. ಆಲಂಕಾರು ತನಕ ರಸ್ತೆ ಅಭಿವೃದ್ಧಿ, ಸೇತುವೆಯ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಸರಕಾರದಿಂದ ಅನುದಾನ ತಂದು ಕಾಮಗಾರಿ ನಡೆಸಲಾಗಿದೆ. ಈ ಭಾಗದ ಜನತೆಯ ಆಶಯದಂತೆ ಈ ಎಲ್ಲ ಕಾರ್ಯಗಳನ್ನು ಮಾಡಲಾಗಿದೆ. ನನ್ನ ಕ್ಷೇತ್ರದಲ್ಲಿ ಇನ್ನಷ್ಟು ರಸ್ತೆಗಳು ಅಭಿವೃದ್ದಿಗೆ ಬಾಕಿ ಇದೆ. ಶೀಘ್ರವೇ ಬಾಕಿ ಇರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು.
– ಎಸ್.ಅಂಗಾರ,
ಶಾಸಕರು, ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ